ಪಟನಾ: ಜರ್ಮನಿ ಮೂಲದ ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರ ಸಾಪೇಕ್ಷೆ ಸಿದ್ಧಾಂತಕ್ಕೆ ಸವಾಲು ಹಾಕಿದ್ದ ಭಾರತದ ಪ್ರಖ್ಯಾತ ಗಣಿತಜ್ಞ ವಶಿಷ್ಠ ನಾಯಾರಣ ಸಿಂಗ್ (74) ಪಟನಾ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1942ರ ಏಪ್ರಿಲ್ 2ರಂದು ಜನಿಸಿದ್ದ ವಶಿಷ್ಠ ನಾರಾಯಣ ಅವಿಭಜಿತ ಬಿಹಾರದ ನೇತಾರತ್ ಎಂಬಲ್ಲಿ ಜನಿಸಿದ್ದರು. ಅಲ್ಲಿಯೇ ಅವರು ಪ್ರಾಥಮಿಕ ಶಿಕ್ಷಣ ಪೂರೈಸಿ ಪಟನಾ ವಿಜ್ಞಾನ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದರು. 1965ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿದ ಅವರು 1969ರಲ್ಲಿ ಸೈಕಲ್ ವೆಕ್ಟಾರ್ ಸ್ಪೇಸ್ ವಿಷಯವಾಗಿ ಪಿಎಚ್.ಡಿ ಪಡೆದುಕೊಂಡಿದ್ದರು.
ಆನಂತರ ಕಾನ್ಪುರದ ಐಐಟಿಯಲ್ಲಿ ಹಾಗೂ ಕೋಲ್ಕತಾದ ಭಾರತೀಯ ಸಾಂಖ್ಯಿಕ ಸಂಸ್ಥೆಯಲ್ಲಿ (ಐಎಸ್ಐ) ಬೋಧನಾವೃತ್ತಿ ಕೈಗೊಂಡಿದ್ದರು. ಮಾಧೇಪುರದ ಬಿ.ಎನ್. ಮಂಡಲ್ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಅಂದಾಜು 40 ವರ್ಷಗಳಿಂದ ಅವರು ಭ್ರಮಾಧೀನ ಕಾಯಿಲೆಗೆ (ಸ್ಕಿಜೋಫ್ರೇನಿಯಾ) ತುತ್ತಾಗಿದ್ದರು. ಹೀಗಿದ್ದರೂ ಅವರು ಐನ್ಸ್ಟೀನ್ ಅವರ ಸಾಪೇಕ್ಷ ಸಿದ್ಧಾಂತಕ್ಕೆ ಸವಾಲು ಹಾಕಿದ್ದರು.
ಭೋಜ್ಪುರ ಜಿಲ್ಲೆಯ ಬಸ್ತಾನ್ಪುರ್ನಲ್ಲಿ ನೆಲೆಸಿದ್ದ ಅವರು ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಟನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಆಂಬುಲೆನ್ಸ್ಗಾಗಿ ಕಾಯಬೇಕಾಯಿತು: ಪ್ರಖ್ಯಾತ ಗಣಿತಜ್ಞರಾಗಿದ್ದ ವಶಿಷ್ಠ ನಾರಾಯಣ ಸಿಂಗ್ ಅವರ ನಿಧನದ ಬಳಿಕ ಅವರ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲು ಆಂಬುಲೆನ್ಸ್ ದೊರೆಯದೆ ಕುಟುಂಬಸ್ಥರು ತೀವ್ರ ಪರದಾಡಿದರು. ಅದೆಷ್ಟೇ ಮನವಿ ಮಾಡಿಕೊಂಡರೂ ಆಸ್ಪತ್ರೆ ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸಲೇ ಇಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.
ಅಂದಾಜು 2 ಗಂಟೆಗಳ ಕಾಯುವಿಕೆಯ ಬಳಿಕ ಆಂಬುಲೆನ್ಸ್ ವ್ಯವಸ್ಥೆಯಾಗಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ನಿತೀಶ್ ಶೋಕ: ಪ್ರಖ್ಯಾತ ಗಣಿತಜ್ಞ ವಶಿಷ್ಠ ನಾರಾಯಣ ಸಿಂಗ್ ಅವರ ನಿಧನಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಶೋಕ ವ್ಯಕ್ತಪಡಿಸಿದ್ದಾರೆ.
Comments are closed.