ರಾಷ್ಟ್ರೀಯ

ಅಯೋಧ್ಯೆಯ ವಿವಾದಿತ ಸ್ಥಳದ ಉತ್ಖನನದಲ್ಲಿ ದೊರೆತ ಪುರಾವೆಗಳೇನು?

Pinterest LinkedIn Tumblr


ಅಯೋಧ್ಯೆಯ ವಿವಾದಿತ ಸ್ಥಳದ ವಾಸ್ತವ ತಿಳಿಯುವ ಸಲುವಾಗಿ ಲಕ್ನೋ ನ್ಯಾಯಾಲಯದ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಇಲಾಖೆ 2003ರಲ್ಲಿ ಉತ್ಖನನ ನಡೆಸಿತ್ತು. ಆದರೆ ಅದಕ್ಕೂ ಸುಮಾರು 140 ವರ್ಷಗಳಷ್ಟು ಹಿಂದೆಯೇ ಅಂದಿನ ಸರ್ವೇಕ್ಷಣಾ ಇಲಾಖೆ ಅಧಿಕಾರಿ ಎ.ಇ. ಕನ್ನಿಂಗ್‌ಹ್ಯಾಮ್‌ ಅಯೋಧ್ಯೆಯ ಸ್ಥಳ ಸಮೀಕ್ಷೆ ನಡೆಸಿದ್ದರು. 1889ರಲ್ಲಿ ಎ ಫಹೆÅàರ್‌ ಈ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುವ ಯತ್ನ ಮಾಡಿದರು. 1969ರಲ್ಲಿ ಪ್ರೊಫೆಸರ್‌ ನರೇನ್‌ ನೇತೃತ್ವದ ತಂಡ ಸ್ಥಳದಲ್ಲಿ ಉತ್ಖನನ ನಡೆಸಿತ್ತು. 1975-76ರಲ್ಲಿ ಪ್ರೊಫೆಸರ್‌ ಬಿ.ಆರ್‌. ಲಾಲ್‌ ನೇತೃತ್ವದ ತಂಡ ಹೆಚ್ಚು ವಿಸ್ತೃತವಾದ ಸಮೀಕ್ಷೆ ನಡೆಸಿತ್ತು. ಕನ್ನಿಂಗ್‌ಹ್ಯಾಮ್‌ರಿಂದ ಹಿಡಿದು ಬಿ. ಆರ್‌. ಲಾಲ್‌ರವರೆಗೆ ಎಲ್ಲರದ್ದೂ ಬಹುತೇಕ ಒಂದೇ ಅಭಿಪ್ರಾಯವಾಗಿತ್ತು; ಮಸೀದಿಯ ನಿರ್ಮಾಣ ಶೈಲಿ ಹಾಗೂ ಸ್ಥಳದಲ್ಲಿ ದೊರಕಿರುವ ಕುರುಹುಗಳು ಇಲ್ಲೊಂದು ದೇಗುಲ ಮಾದರಿ ರಚನೆ ಇತ್ತೆಂಬುದಕ್ಕೆ ಪ್ರಬಲ ಪುರಾವೆ ಒದಗಿಸಿವೆ. ಕನ್ನಿಂಗ್‌ಹ್ಯಾಮ್‌ ಸಮೀಕ್ಷೆಯ ಉದ್ದೇಶ ಮೂಲತಃ ರಾಮಜನ್ಮಭೂಮಿಯ ಅನ್ವೇಷಣೆ ಆಗಿರಲಿಲ್ಲ. ಅಯೋಧ್ಯೆಯಲ್ಲಿ ಬೌದ್ಧರ ಇತಿಹಾಸದ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ಅವರು ಸಮೀಕ್ಷೆ ನಡೆಸಿದ್ದರು. ಸ್ಥಳದಲ್ಲಿ ದೊರೆತ ಭೂದಾನಕ್ಕೆ ಸಂಬಂಧಿ ಸಿದ ತಾಮ್ರಪತ್ರಗಳ ಆಧಾರದಲ್ಲಿ 11 ಮತ್ತು 12ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ ರಜಪೂತರ ಉಪಸ್ಥಿತಿ ಇದ್ದಿರುವ ಸಾಧ್ಯತೆಯಿದೆ ಎಂದು ಫಹೆÅàರ್‌ ಪ್ರತಿಪಾದಿಸಿದ್ದರು. ಈ ಕುರಿತ ಒಂದು ದಾಖಲೆ ಬೆಂಗಾಲ್‌ ಏಷಿಯಾಟಿಕ್‌ ಸೊಸೈಟಿ ಸಂಗ್ರಹಾಲಯದಲ್ಲಿದೆ.

ಅಯೋಧ್ಯೆಯಲ್ಲಿ ಕ್ರಿ.ಪೂ. 5ನೇ ಶತಮಾನದಿಂದಲೇ ಮಾನವರು ವಾಸಿಸಿದ್ದರು ಎಂಬ ಕುರುಹುಗಳು ದೊರಕಿವೆ ಎಂಬುದು ಉತ್ಖನನದಿಂದ ಪತ್ತೆಯಾಗಿದೆ ಎಂದು ಪ್ರೊಫೆಸರ್‌ ನರೇನ್‌ ಅಭಿಪ್ರಾಯಪಟ್ಟಿದ್ದರು. ಇನ್ನು ಬಿ. ಆರ್‌. ಲಾಲ್‌ ಬಾಬರಿ ಮಸೀದಿಯ ಅಡಿಪಾಯದ ಸ್ವಲ್ಪಭಾಗ ಅಗೆದು ಸಮೀಕ್ಷೆ ನಡೆಸಿದ್ದರು. ಅವರ ಸಮೀಕ್ಷೆಯ ಪರಿಶೀಲನೆಗಳು ಆಸಕ್ತಿಕರವಾಗಿವೆ. “ಕ್ರಿ.ಶ. 3ನೇ ಶತಮಾನಗಳಷ್ಟು ಹಿಂದಿನ ನಿರ್ಮಾಣಗಳ ಕುರುಹು ಈ ಭೂಮಿಯಲ್ಲಿ ಕಂಡುಬರುತ್ತಿದೆ. ಮಣ್ಣಿನಿಂದ ನಿರ್ಮಿತವಾದ ಮನೆಗಳ ಕುರುಹು ಹಾಗೂ ರಾಮಜನ್ಮಭೂಮಿ ಎನ್ನಲಾಗುತ್ತಿರುವ ಸ್ಥಳದಲ್ಲಿ ಇಟ್ಟಿಗೆಗಳ ಗೋಡೆಯಂಥ ನಿರ್ಮಾಣ ಕಂಡುಬಂದಿದೆ. ಬಹುಶಃ ಇದು ಕೋಟೆ ಅಥವಾ ಅರಮನೆಯ ಸುತ್ತಲಿನ ಗೋಡೆಯಾಗಿರಬಹುದು. ಕ್ರಿ. ಶ. ಆರಂಭ ಕಾಲದಲ್ಲೇ ಅಯೋಧ್ಯೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಬಗ್ಗೆಯೂ ಕುರುಹುಗಳು ದೊರಕಿವೆ’ ಎಂದು ಲಾಲ್‌ ಹೇಳಿದ್ದರು.

ಎಎಸ್‌ಐ ವರದಿ ಹೇಗಿತ್ತು?
ಆದರೆ 2003ರ ಪುರಾತತ್ವ ಇಲಾಖೆ(ಎಎಸ್‌ಐ) ಸಮೀಕ್ಷಾ ವರದಿ ಯಾವ ವಿಷಯದ ಬಗ್ಗೆಯೂ ಸ್ಪಷ್ಟ ಅಭಿಪ್ರಾಯ ಮಂಡಿಸುವುದಿಲ್ಲ. ಕ್ರಿ. ಪೂ 13ನೇ ಶತಮಾನದಿಂದಲೇ ಅಯೋಧ್ಯೆಯಲ್ಲಿನ ಜನವಸತಿಯ ಬಗ್ಗೆ ಕುರುಹುಗಳು ದೊರಕಿವೆ ಎನ್ನುವ ಎಎಸ್‌ಐ ಮಾನವ ಚಟುವಟಿಕೆಯ ಬಗ್ಗೆ ಯಾವುದೇ ಬೆಳಕು ಚೆಲ್ಲುವುದಿಲ್ಲ. ಭೂಪದರಗಳ ಕುರಹು ರಜಪೂತರ ವಾಸ್ತವ್ಯದ ಬಗ್ಗೆ ಸಾಕ್ಷ್ಯ ನುಡಿಯುತ್ತದೆ ಎಂಬುದು ಎಎಸ್‌ಐ ಹೇಳಿಕೆ. “ಮಸೀದಿ ಒಳಾಂಗಣದ ಅಲಂಕೃತ ಕೆತ್ತನೆಯ ಶಿಲೆಗಳು ಗಢವಾಲ್‌ ರಾಣಿ ಕುಮಾರದೇವಿ ನಿರ್ಮಿಸಿದ ಧರ್ಮಚಕ್ರಾಜಿನ ವಿಹಾರ ಮಾದರಿಯಲ್ಲಿವೆ. ಹಾಗಾಗಿ ವೃತ್ತಾಕಾರದ ಕೆತ್ತನೆಗಳಿರುವ ನೆಲಹಾಸು ಮತ್ತಿತರ ವಿನ್ಯಾಸಗಳು ಕ್ರಿ. ಪೂ. 10ನೇ ಶತಮಾನದವು’ ಎನ್ನುತ್ತದೆ ಎಎಸ್‌ಐ ವರದಿ. ರಜಪೂತರ ಕನೌಜ್‌ ಅಥವಾ ಬನಾರಸ್‌ ರಾಜಧಾನಿಯ ಆಳ್ವಿಕೆ ಅಯೋಧ್ಯೆಯಲ್ಲೂ ಹಿಡಿತ ಹೊಂದಿತ್ತು ಎಂಬ ಬಗ್ಗೆ ಯಾವುದೇ ಪ್ರಬಲ ಪುರಾವೆ ಇಲ್ಲದಿದ್ದಾಗ್ಯೂ ಎಎಸ್‌ಐ ಮಸೀದಿಯ ಒಳಾಂಗಣ ವಿನ್ಯಾಸ ಅರಮನೆಯ ಭಾಗ ಎಂದು ಹೇಳಿದ್ದು ಅಚ್ಚರಿ ಹುಟ್ಟಿಸಿತ್ತು. ಹಾಗೂ ಸಾಕಷ್ಟು ಟೀಕೆಗೂ ಒಳಗಾಗಿತ್ತು. ನೆಲಸಮ ಮಾಡಲಾಗಿರುವ ಕಟ್ಟಡದ ಮೇಲೆ ಬಾಬರಿ ಮಸೀದಿಯ ಅಡಿಪಾಯ ಇದೆ ಎಂದು ಹಿಂದಿನ ಎಲ್ಲ ಸಮೀಕ್ಷೆಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಎಎಸ್‌ಐ ವರದಿಯಲ್ಲಿ ಸ್ಥಳದ ನಕ್ಷೆಯ ಬಗ್ಗೆ ಸಮರ್ಪಕ ಮಾಹಿತಿಯಿಲ್ಲ. ಮಸೀದಿಯ ದಕ್ಷಿಣದಲ್ಲಿ “ಕುಬೇರ್‌ ತೀಲಾ’ ಎಂಬ 28 ಅಡಿ ಎತ್ತರದ ಉಬ್ಬು ಮಾದರಿ ರಚನೆಯಿದೆ. ಇದರ ಬಗ್ಗೆಯೂ ಎಎಸ್‌ಐ ಯಾವುದೇ ಬೆಳಕು ಚೆಲ್ಲುವುದಿಲ್ಲ. ಪಶ್ಚಿಮದಲ್ಲಿ ಮಸೀದಿಗೆ ಬೆಂಬಲವಾಗಿ ಇರುವ ಗೋಡೆ ಗಾಗ್ರಾ (ಗೋಗ್ರಾ) ನದಿ ತಟದಲ್ಲಿದೆ. 1862-63ರಲ್ಲಿ ಕನ್ನಿಂಗ್‌ ಹ್ಯಾಮ್‌ ಸಮೀಕ್ಷೆ ನಡೆಸುವ ವೇಳೆ ನದಿಯಲ್ಲಿ ನೀರು ಬತ್ತಿತ್ತು. ಆತನ ಪರಿಶೀಲನೆ ಪ್ರಕಾರ “ಗೋಡೆಯ ಪಕ್ಕದಲ್ಲಿ ಆಳವಾದ ಕಾಲುವೆ ಇದ್ದಿರಬಹುದು. ಕಾಲಕ್ರಮೇಣ ನೀರಿನ ಸೆಳೆತದಿಂದ ಮಣ್ಣು ತುಂಬಿ ಕಾಲುವೆ ಮುಚ್ಚಿ ಗೋಡೆ ಮತ್ತಷ್ಟು ಭದ್ರವಾಗಿಬಹುದು’ ಎಂದಿದ್ದಾನೆ. ಇದರ ಬಗ್ಗೆ ಎಎಸ್‌ಐ ವರದಿಯಲ್ಲಿ ಯಾವುದೇ ಪರಿಶೀಲನಾತ್ಮಕ ವ್ಯಾಖ್ಯಾನಗಳಿಲ್ಲ. ಆದರೆ, ಮಸೀದಿಯ ತಳಪಾಯದ ಅಡಿ ದೇಗುಲ ಮಾದರಿ ರಚನೆಯನ್ನಂತೂ ಎಎಸ್‌ಐ ವರದಿ ದೃಢೀಕರಿಸಿದೆ. ಈ ರಚನೆ ಸುಮಾರು ನಾಲ್ಕೂವರೆಯಿಂದ 5 ಅಡಿ ಆಳದಲ್ಲಿದೆ ಎಂಬುದು ವರದಿಯ ಪ್ರತಿಪಾದನೆ. ಅದಾಗ್ಯೂ ಮಸಿದೀಯೊಳಗಿನ ಸ್ತಂಭ ಹಾಗೂ ಇತರ ರಚನೆಗಳು ಸಾಮಾನ್ಯ ಮಸೀದಿ ರಚನೆಗಿಂತ ಭಿನ್ನವಾಗಿವೆ ಎಂಬುದನ್ನು ವರದಿ ಒಪ್ಪಿಕೊಳ್ಳುತ್ತದೆ. ಈ ಕಾರಣಕ್ಕಾಗಿಯೇ, ಎಎಸ್‌ಐ ವರದಿಯನ್ನು ಆಧರಿಸಿ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್‌ “”ಮಸೀದಿಯು ಖಾಲಿ ಜಾಗದಲ್ಲಿ ನಿರ್ಮಾಣವಾಗಿಲ್ಲ” ಎಂದು ಹೇಳಿರುವುದು.
ಮೂರು ಮಸೀದಿಗಳು
ರಾಮಜನ್ಮಭೂಮಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಮೊಘಲ್‌ ದೊರೆಗಳು ಮಸೀದಿ ನಿರ್ಮಿಸಿದ್ದಾರೆ ಎಂಬುದು ಇತಿಹಾಸದಲ್ಲಿ ಸಿಗುವ ಮಾಹಿತಿ. ಮೊದಲನೆಯದು ಅಯೋಧ್ಯೆಯ ಬಾಬರಿ ಮಸೀದಿ. ಸ್ವರ್ಗದ್ವಾರ್‌ ಮತ್ತು ತ್ರೇತಾ ಕೆ ಠಾಕೂರ್‌ಗಳಲ್ಲಿ ಇನ್ನೆರಡು ಮಸೀದಿಗಳಿವೆ. ಈ ಮಸೀದಿಗಳ ನಿರ್ಮಾತೃ ಔರಂಗಜೇಬ್‌. 1877ರ ವೇಳೆಗೆ ಈ ಮಸೀದಿಗಳು ಜೀರ್ಣಾವಸ್ಥೆ ತಲುಪಿದ್ದವು. ಆದರೆ ಬಾಬರಿ ಮಸೀದಿ ಮಾತ್ರ ಡಿಸೆಂಬರ್‌ 6, 1992ರಲ್ಲಿ ಧ್ವಂಸವಾಗುವವರೆಗೂ ಸುಭದ್ರವಾಗಿತ್ತು.

ಇದಕ್ಕೆ ಅಡಿಪಾಯ ಭದ್ರವಿದ್ದುದು ಕಾರಣವಿರಬಹುದು. ಅನುಮಾನದ ಪ್ರಶ್ನೆಗಳು: ಬಾಬರ್‌ಗೆ ಮಸೀದಿ ನಿರ್ಮಿಸಲು ಸಾಕಷ್ಟು ಸ್ಥಳವಿದ್ದಾಗ್ಯೂ ಬಾಬರ್‌ ನದಿ ತಟದಂಥ ದುರ್ಗಮ ಸ್ಥಳದಲ್ಲೇ ಏಕೆ ಮಸೀದಿ ನಿರ್ಮಾಣ ಮಾಡಿದ? ಮಳೆ ಹಾಗೂ ನೀರಿನ ಹೊಡೆತದ ಸಂದರ್ಭ ಮಸೀದಿ ನಿರ್ಮಾಣ ಸುಲಭಸಾಧ್ಯವೇನೂ ಆಗಿರಲಿಲ್ಲ. ಜತೆಗೆ ನದಿಯ ಉಬ್ಬರ ಸಂದರ್ಭ ಮಸೀದಿ ಅಪಾಯಕ್ಕೀಡಾಗುವ ಆತಂಕವೂ ಇತ್ತು. ಆದರೆ ಮಸೀದಿ ಅಡಿಪಾಯ ಸಾಕಷ್ಟು ಎತ್ತರದಲ್ಲಿರುವುದು ಅಲ್ಲಿ ಹಿಂದೆ ಇದ್ದ ನಿರ್ಮಾಣವನ್ನು ಧ್ವಂಸ ಮಾಡಿ ಅದರ ಮೇಲೆ ಮಸೀದಿ ನಿರ್ಮಿಸಿರುವ ಬಗ್ಗೆ ಸಂದೇಹ ಮೂಡಿಸುತ್ತದೆ. 19ನೇ ಶತಮಾನದ ಇತಿಹಾಸಕಾರ ಜೇಮ್ಸ್‌ ಫರ್ಗ್ಯೂಸನ್‌, ಮುಸ್ಲಿಂ ನಿರ್ಮಾಣ ಶೈಲಿಗಳಲ್ಲಿನ ಭಿನ್ನತೆ ಬಗ್ಗೆ ತನ್ನ ಅಭಿಪ್ರಾಯದಲ್ಲಿ “ಆರಂಭದ ಮುಸ್ಲಿಂ ನಿರ್ಮಾಣ ಶೈಲಿ ಹಾಗೂ ಮೊಘಲ್‌ ದೊರೆಗಳ ಶೈಲಿಗೆ ಸಾಕಷ್ಟು ವ್ಯತ್ಯಾಸವಿದೆ.

ಮೊಘಲ್‌ ದೊರೆಗಳು ಹಿಂದೂ ದೇಗುಲಗಳನ್ನು ಧ್ವಂಸಗೊಳಿಸಿ ಅಲ್ಲಿನ ವಸ್ತುಗಳನ್ನು ಬಳಸಿ ಮಸೀದಿಗಳನ್ನು ನಿರ್ಮಿಸುತ್ತಿದ್ದರು. ಹಾಗಾಗಿ ಹಿಂದಿನ ಮುಸ್ಲಿಂ ನಿರ್ಮಾಣಗಳ ಶೈಲಿಗೆ ಇದು ಸಂಪೂರ್ಣ ಭಿನ್ನವಾಗಿದೆ’ ಎಂದು
ಅಭಿಪ್ರಾಯಪಟ್ಟಿದ್ದರು.

Comments are closed.