ನವದೆಹಲಿ(ಅ.10): ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಚಾರವೆಂದು ಎಷ್ಟೇ ಹೇಳಿದರೂ ಕಾಂಗ್ರೆಸ್ ಮಾತ್ರ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಎಸಗಿದೆ. ಅಲ್ಲದೇ ಕಾಂಗ್ರೆಸ್ ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಬಿಂಬಿಸಲು ಹೊರಟಿದೆ. ಹಾಗಾಗಿಯೇ ಇಂದು ಕಾಂಗ್ರೆಸ್ನ ಇಂಗ್ಲೆಂಡ್ ಪ್ರತಿನಿಧಿಗಳ ನಿಯೋಗವು, ಅಲ್ಲಿನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ರನ್ನು ಭೇಟಿ ಮಾಡಿದೆ ಎಂದು ಟ್ವೀಟ್ ಮಾಡಿದೆ.
ಇಂದು ಜಮ್ಮು-ಕಾಶ್ಮೀರದ ವಿಚಾರ ಚರ್ಚಿಸಲು ಕಾಂಗ್ರೆಸ್ ನಿಯೋಗ, ಇಂಗ್ಲೆಂಡ್ನ ಲೇಬರ್ ಪಕ್ಷದ ನಾಯಕರನ್ನು ಭೇಟಿ ಮಾಡಿತ್ತು. ಕಾಂಗ್ರೆಸ್ ನಾಯಕರ ನಿಯೋಗದ ಭೇಟಿ ಬಳಿಕ ಟ್ವೀಟ್ ಮಾಡಿರುವ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್, ‘ ಕಾಂಗ್ರೆಸ್ನ ಯುಕೆ ಪ್ರತಿನಿಧಿಗಳ ಜೊತೆಗಿನ ಸಭೆಯೂ ಫಲಪ್ರದವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಮಾಡಿದ್ದು, ಖಂಡನೀಯ. ನಾವು ಈಗಾಗಲೇ ಕಾಶ್ಮೀರದ ಸ್ಥಿತಿಗತಿಯ ಬಗ್ಗೆ ಚರ್ಚಿಸಿದ್ದೇವೆ. ಈ ಬಗ್ಗೆ ನಾವೊಂದು ನಿಲುವು ತೆಗೆದುಕೊಳ್ಳಲಿದ್ದೇವೆ ಎಂದು ಬರೆದುಕೊಂಡಿದ್ದರು.
ಇನ್ನು ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ಹಿಂಸಾಚಾರವನ್ನು ನಾವು ಅಂತ್ಯಗೊಳಿಸಬೇಕಿದೆ’ ಎಂದು ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಟ್ವೀಟ್ ಮೂಲಕ ಸಂದೇಶ ಸಾರಿದ್ದರು.
ಕಾಶ್ಮೀರದ ವಿಚಾರದಲ್ಲಿ ಕಾಂಗ್ರೆಸ್ನ ವಿವಾದಾತ್ಮಕ ನಡೆಯನ್ನು ಖಂಡಿಸಿದ ಬಿಜೆಪಿ, ಭಾರತದ ಜನ ಮುಂದೆ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ. ಭಾರತದ ಕುರಿತು ವಿದೇಶಗಳ ನಾಯಕರಿಗೆ ಕಾಂಗ್ರೆಸ್ ಏನು ಹೇಳುತ್ತಿದೆ ಎಂಬುದನ್ನು ತಿಳಿಸಬೇಕೆಂದು ಆಗ್ರಹಿಸಿತ್ತು.
ಈ ಬೆನ್ನಲ್ಲೇ ಬಿಜೆಪಿ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಕಾಂಗ್ರೆಸ್ನ ವಿದೇಶಿ ಘಟಕ, ಲೇಬರ್ ಪಕ್ಷ ಕಾಶ್ಮೀರ ವಿಚಾರದಲ್ಲಿ ಒಂದು ನಿಲುವು ತೆಗೆದುಕೊಂಡಿದೆ. ಜಮ್ಮು-ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಖಂಡಿಸಿದೆ. ಆದರೆ, ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಚಾರ ಮತ್ತು ಹೊರಗಿನವರ ಹಸ್ತಕ್ಷೇಪ ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಉತ್ತರಿಸಿದೆ.
Comments are closed.