ಮುಂಬೈ, ಅ.2: ಭಾರತದ ಮಾಜಿ ನಾಯಕ ಕಪಿಲ್ದೇವ್ ಕ್ರಿಕೆಟ್ ಸಲಹಾ ಸಮಿತಿಗೆ(ಸಿಎಸಿ)ರಾಜೀನಾಮೆ ನೀಡಿದ್ದಾರೆ. ಸಮಿತಿಗೆ ರಾಜೀನಾಮೆ ನೀಡಿರುವ ಎರಡನೇ ಸದಸ್ಯರಾಗಿದ್ದಾರೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯ ಸಂಜೀವ್ ಗುಪ್ತಾ ಸ್ವಹಿತಾಸಕ್ತಿ ಸಂಘರ್ಷ ದೂರು ದಾಖಲಿಸಿದ ಬಳಿಕ ಬಿಸಿಸಿಐಯ ಎಥಿಕ್ಸ್ ಅಧಿಕಾರಿ ಡಿ.ಕೆ.ಜೈನ್ ಸಮಿತಿ ಸದಸ್ಯರುಗಳಾದ ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತಾ ರಂಗಸ್ವಾಮಿಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಪಿಲ್ ದೇವ್ ಕೂಡ ತನ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತಳೆದಿದ್ದಾರೆ.
ನೋಟಿಸ್ ಲಭಿಸಿದ ಮರುದಿನವೇ ಶಾಂತಾರಂಗಸ್ವಾಮಿ ಸಿಎಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ”ವಿಶೇಷವಾಗಿ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ರನ್ನು ಆಯ್ಕೆ ಮಾಡಲು ಸಿಎಸಿ ಭಾಗವಾಗಿರುವುದು ಒಂದು ಉತ್ತಮ ಅವಕಾಶವಾಗಿತ್ತು. ನಾನು ಸಿಎಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಸುಪ್ರೀಂಕೋರ್ಟ್ನಿಂದ ನೇಮಕವಾಗಿರುವ ಆಡಳಿತಾಧಿಕಾರಿ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಹಾಗೂ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ಕಳುಹಿಸಿರುವ ಇ-ಮೇಲ್ನಲ್ಲಿ ಕಪಿಲ್ ದೇವ್ ಬರೆದಿದ್ದಾರೆ.
ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ರನ್ನು ಆಯ್ಕೆ ಮಾಡಲು ಮೂವರು ಮಾಜಿ ಆಟಗಾರರಾದ ಕಪಿಲ್ದೇವ್, ಗಾಯಕ್ವಾಡ್ ಹಾಗೂ ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ರಚಿಸಲಾಗಿತ್ತು. ಬಿಸಿಸಿಐಗೆ ರಾಜೀನಾಮೆ ಕಳುಹಿಸಿಕೊಟ್ಟ ಬಳಿಕ ಕಪಿಲ್ ಹಾಗೂ ರಂಗಸ್ವಾಮಿ ಅವರು ಗುಪ್ತಾ ಅವರ ಆರೋಪಕ್ಕೆ ಜೈನ್ಗೆ ಪ್ರತಿಕ್ರಿಯೆ ನೀಡಿಲ್ಲ. ಗಾಯಕ್ವಾಡ್ ತನ್ನ ಮೇಲಿನ ಆರೋಪಕ್ಕೆ ಉತ್ತರಿಸಿದ್ದು, ಈತನಕ ರಾಜೀನಾಮೆ ನೀಡಿಲ್ಲ.
Comments are closed.