ನವದೆಹಲಿ(ಸೆ.23): ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಭೇಟಿಯಾಗಿದ್ದಾರೆ. ಆದರೆ ಅದೇ ಜೈಲಿನಲ್ಲಿರುವ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈ ಕಮಾಂಡ್ ಭೇಟಿಯಾಗಲಿಲ್ಲ.
ಕಳೆದ ವಾರ ಕಾಂಗ್ರೆಸ್ ನಾಯಕರಾದ ಗುಲಾಂ ನಬೀ ಅಜಾದ್ ಮತ್ತು ಅಹಮದ್ ಪಟೇಲ್ ಮಾಜಿ ಹಣಕಾಸು ಸಚಿವ ಚಿಂದಂಬರಂ ಅವರನ್ನು ಭೇಟಿಯಾಗಿದ್ದರು. ಐಎನ್ಎಕ್ಸ್ ಮಾಧ್ಯಮ ಹಗರಣ ಸಂಬಂಧ ಭ್ರಷ್ಟಾಚಾರದ ಆರೋಪ ಹೊತ್ತು ಸೆ.5ರಿಂದಲೂ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವರ ಜೊತೆ ಕಾಂಗ್ರೆಸ್ ನಾಯಕರು ಬೆಂಬಲಕ್ಕೆ ನಿಂತಿದ್ದಾರೆ.
2007ರಲ್ಲಿ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ವಿದೇಶ ನೇರ ಬಂಡವಾಳ ಸ್ವೀಕಾರಕ್ಕೆ ಹಣಕಾಸು ಸಚಿವಾಲಯ ಅನುಮತಿ ನೀಡಿತ್ತು. ಈ ಅನುಮತಿ ನೀಡಿದ 10 ವರ್ಷಗಳ ಬಳಿಕ ಅಂದರೆ 2017ರಲ್ಲಿ ಸಿಬಿಐ ಹಾಗೂ ಇಡಿ ಎರಡೂ ತನಿಖಾ ಸಂಸ್ಥೆಗಳು ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿದ್ದವು.
ಐಎನ್ಎಕ್ಸ್ ಮಾಧ್ಯಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 21ರಂದು ಸಿಬಿಐ ಚಿದಂಬರಂ ಅವರನ್ನು ಬಂಧಿಸಿತ್ತು. ಬಳಿಕ ಸೆ. 5ರವರೆಗೂ ಚಿದಂಬರಂ ಸಿಬಿಐ ವಶದಲ್ಲಿದ್ದರು. ಸೆ.5ರಿಂದ ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅಕ್ಟೋಬರ್ 3ರವರೆಗೂ ನ್ಯಾಯಾಂಗ ಬಂಧನದಲ್ಲಿರಬೇಕಿದೆ. ದೆಹಲಿ ವಿಶೇಷ ನ್ಯಾಯಾಲಯ ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಆಗಸ್ಟ್ 21ರಂದು ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಸೆಪ್ಟೆಂಬರ್ 5ರವರೆಗೂ ಚಿದು ಸಿಬಿಐ ವಶದಲ್ಲಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈಗ ಡಿಕೆಶಿ ಹಾಗೂ ಪಿ.ಚಿದಂಬರಂ ಇಬ್ಬರೂ ತಿಹಾರ್ ಜೈಲಿನಲ್ಲಿದ್ದಾರೆ. ಸೋನಿಯಾ ಡಿಕೆಶಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಹೈಕಮಾಂಡ್ ಚಿದಂಬರಂ ಅವರನ್ನಷ್ಟೇ ಭೇಟಿಯಾಗಿದೆ.
ಸೋನಿಯಾ ಗಾಂಧಿ ಚಿದಂಬರಂ ಭೇಟಿಗಷ್ಟೇ ಅವಕಾಶ ಕೇಳಿದ್ದರು. ಡಿಕೆಶಿ ಭೇಟಿಗೆ ಅನುಮತಿ ಕೇಳಿಲ್ಲ. ಹೀಗಾಗಿ ಜೈಲು ಅಧಿಕಾರಿಗಳಿಂದ ಚಿದು ಭೇಟಿಗಷ್ಟೇ ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಕಾಂಗ್ರೆಸ್ ಹೈ ಕಮಾಂಡ್ ಡಿಕೆಶಿ ಮೇಲೆ ಮುನಿಸಿಕೊಂಡಿದೆಯಾ ಎಂಬ ಅನುಮಾನ ಮೂಡಿಸಿದೆ.
Comments are closed.