ಕರ್ನಾಟಕ, ಕೇರಳ ಮಹಾರಾಷ್ಟ್ರ ಒಡಿಶಾ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆ ಸಂಕಷ್ಟತಂದೊಡ್ಡಿದೆ. ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ, ಭೂಕುಸಿತದಿಂದಾಗಿ ಜನರು ತತ್ತರಿಸಿದ್ದಾರೆ.
ಮಹಾರಾಷ್ಟ್ರದ ಕರಾವಳಿಯಲ್ಲಿ ಮಳೆ ಮುಂದುವರೆದಿದ್ದು, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿನ ಚಿಕಲಿ ಗ್ರಾಮ ಹಾಗೂ ಕೊಲ್ಹಾಪುರ, ಸಾಂಗ್ಲಿಯಲ್ಲಿ ಜಲಪ್ರಳಕ್ಕೆ ಜನರು ಹೈರಾಣಗಾಗಿದ್ದಾರೆ. ಅನೇಕ ಗ್ರಾಮಗಳು ಜಲಾವೃತ್ತಗೊಂಡಿದ್ದು ಇಲ್ಲಿಯವರೆಗೆ 1.32 ಲಕ್ಷ ಜನರ ರಕ್ಷಣಾ ಕಾರ್ಯ ನಡೆಸಲಾಗಿದೆ.
ಮಹಾರಾಷ್ಟ್ರದ ಅನೇಕ ರೈಲುಗಳು ಮಳೆಯಿಂದ ಸ್ತಬ್ಧವಾಗಿದ್ದು, ಸಂಚಾರ ಸಂಪರ್ಕ ಕಡಿತಗೊಂಡಿದೆ. ಮುಂಬೈ, ಪುಣೆ, ಮೀರಜ್-ಲೊಂಡಾ ರೈಲು ನಿಲ್ದಾಣಗಳಲ್ಲಿ ಭೂಕುಸಿತ ಹಾಗೂ ಹಳಿಗಳಲ್ಲಿ ನೀರು ನಿಂತಿದ್ದು ಅನೇಕ ರೈಲುಗಳ ಸಂಚಾರ ರದ್ದುಗೊಂಡಿದೆ.
ಕೇರಳದ ಇಡುಕ್ಕಿ, ಮಲ್ಲಪುರಂ ಮತ್ತು ಕಾಜೀಕೋಡ್ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ. ತ್ರಿಸ್ಸೂರು, ಪಲಕ್ಕಡ್, ವೈನಾಡು, ಕಣ್ಣೂರು, ಕಾಸರಗೋಡಿನಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ಭಾರೀ ಮಳೆಯಿಂದಾಗಿ ಮರವೊಂದು ಉರುಳಿಬಿದ್ದ ಪರಿಣಾಮ ಮಲ್ಲಪುರಂ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮಲ್ಲಪುರಂನ ಬಹುತೇಕ ಗ್ರಾಮಗಳು ಜಲಾವೃತ್ತಗೊಂಡಿದ್ದು, ಕೆಲವು ಗ್ರಾಮಗಳು ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿವೆ. ಜಮೀನುಗಳಲ್ಲಿ ನೀರು ನಿಂತಿದ್ದು, ಬೆಳೆಗಳು ಸಂಪೂರ್ಣ ಹಾನಿಗೊಂಡಿವೆ.
ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಮಳೆಗೆ ರೈಲು ಸೇವಾ ಕಟ್ಟಡ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಭೀಕರ ಬರಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಈಗ ಮಳೆ ಆರ್ಭಟ ತೋರಿದೆ. ಇಲ್ಲಿನ ಭವಾನಿ ನದಿ, ಮೆಟ್ಟುಪಾಳಯಂ ಜಲಾಶಯದ ಪ್ರದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಒಡಿಶಾದ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಗರ್ಭಿಣಿ ಮತ್ತು ಮಕ್ಕಳು ಸೇರಿದಂತೆ ಐವರನ್ನು ರಕ್ಷಿಸಲಾಗಿದೆ, ಮಜಿಗುಂಡ, ಕೆಂಡಗುಂಡ ಕೈರಿಪುಟ್ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಮಂಎ ಪ್ರವಾಹದಿಂದಾಗಿ ಜನರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, 650 ಜನರನ್ನು ಸ್ಥಳಾಂತರ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಮಳೆಯಿಂದಾದ ಅನಾಹುತದಿಂದ 14 ಜನ ಸಾವನ್ನಪ್ಪಿರುವುದಾಗಿ ಇಲ್ಲಿನ ಸರ್ಕಾರ ತಿಳಿಸಿದೆ, ಹರ್ದೋಯಿಯಲ್ಲಿ ಮಿಂಚು ತಗುಲಿ ಮೂವರು ಸಾವನ್ನಪ್ಪಿದ್ದಾರೆ. ಬುದ್ಧ ನಗರದಲ್ಲಿ ನಾಲ್ವರು ಕೊಚ್ಚಿ ಹೋಗಿದ್ದು, ಬುಲಂದ್ಶಾರ್ ಮತ್ತು ಖಾನಾಪುರದಲ್ಲಿಯೂ ಇಬ್ಬರು ಸಾವನ್ನಪ್ಪಿದ್ದಾರೆ. ಮಳೆಯಿಂದ ಪ್ರಾಣಹಾನಿಗೊಳಗಾದ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ತಲಾ 4 ಲಕ್ಷ ಪರಿಹಾರ ಹಣ ಘೋಷಿಸಿದ್ದಾರೆ.
ಛತ್ತೀಸ್ಗಢದ ರಾಯ್ಪುರ್, ಬಲೊದಬಜಾರ್ಮ ಮಹಸಮುಂಡ್, ಗರಿಬಂದ್ ಮತ್ತು ಧಮತ್ರಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜಸ್ಥಾನದಲ್ಲಿ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿರುವ ವರದಿಯಾಗಿದೆ,
ಒಡಿಶಾದಲ್ಲಿ ಆಗುತ್ತಿರುವ ಮಳೆಯಿಂದಾಗಿ ನೆರೆಯ ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಿನಗರಂ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ.
Comments are closed.