ರಾಷ್ಟ್ರೀಯ

ಕಾಶ್ಮೀರದಲ್ಲಿ ಭಾರೀ ಪ್ರತಿಭಟನೆ; ಒರ್ವನ ಸಾವು; ಆರು ಮಂದಿಗೆ ಗಾಯ

Pinterest LinkedIn Tumblr


ನವದೆಹಲಿ(ಆ. 07): ಜಮ್ಮು-ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಣಿವೆ ರಾಜ್ಯದಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹಲವು ಕಾಶ್ಮೀರಿಗಳು ರಸ್ತೆಗಳಿಗೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಒಬ್ಬ ಪ್ರತಿಭಟನಾಕಾರ ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ಧಾರೆ ಎಂದು ಎಎಫ್​ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶ್ರೀನಗರದಲ್ಲಿ ಬುಧವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸುವ ವೇಳೆ ಸಾವು ನೋವು ಘಟಿಸಿವೆ. ಕರ್ಫ್ಯೂ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿದ ಜನರ ಗುಂಪನ್ನು ಚದುರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಪೊಲೀಸರ ಪ್ರಕಾರ, ತಪ್ಪಿಸಿಕೊಳ್ಳಲು ಹೋದ ಒಬ್ಬ ಪ್ರತಿಭಟನಾಕಾರ ಝೀಲಂ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆನ್ನಲಾಗಿದೆ.

ಆದರೆ, ಕಾಶ್ಮೀರದಲ್ಲಿ ಇವತ್ತು ಹಿಂಸಾಚಾರ ನಡೆದಿರುವುದನ್ನು ಸರ್ಕಾರ ತಳ್ಳಿಹಾಕಿದೆ. 370ನೇ ವಿಧಿಯನ್ನು ರದ್ದುಗೊಳಸಿದ ಕೇಂದ್ರದ ಕ್ರಮವನ್ನು ಕಾಶ್ಮೀರಿಗಳು ಸ್ವಾಗತಿಸಿದ್ದಾರೆ. ಇದರಿಂದ ಗೂಂಡಾರಾಜ್ಯ ಅಂತ್ಯಗೊಂಡು ಕಣಿವೆ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಸಾಧಿಸಲು ಸಹಾಯಕವಾಗುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮುನ್ನ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನ ಕೈಗೊಂಡಿತ್ತು. ಹೀಗಾಗಿ, ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಹೆಚ್ಚು ಭುಗಿಲೇಳದಂತೆ ಸರ್ಕಾರ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

370ನೇ ವಿಧಿ ರದ್ದು ಮಾಡುವ ಮುನ್ನವೇ ಕೇಂದ್ರ ಸರ್ಕಾರವು ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ ಮೊದಲಾದ ಕಾಶ್ಮೀರೀ ಮುಖಂಡರನ್ನು ಗೃಹ ಬಂಧನದಲ್ಲಿರಿಸಿತ್ತು. ಹಾಗೆಯೇ, ಮೊಬೈಲ್ ಸಂಪರ್ಕವನ್ನೂ ಸ್ಥಗಿತಗೊಳಿಸಿತ್ತು. ಇವತ್ತು ಹಿಂಸಾಚಾರ, ಪ್ರತಿಭಟನೆಗಳು ನಡೆಯುವ ನಿರೀಕ್ಷೆಯಲ್ಲಿ ರಾಜಕಾರಣಿಗಳು ಸೇರಿದಂತೆ ನೂರಾರು ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ. ಕಾಶ್ಮೀರದ ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿರುವುದನ್ನು ಖಚಿತಪಡಿಸಿದ್ಧಾರೆ.

ಅಮೆರಿಕದಲ್ಲಿ ಪ್ರತಿಭಟನೆ:

ಇನ್ನು, ಅಮೆರಿಕ ವಾಷಿಂಗ್ಟನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮುಸ್ಲಿಮರ ಹಕ್ಕು ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ವರದಿಯಾಗಿದೆ. ಪಾಕಿಸ್ತಾನೀ ಅಮೆರಿಕನ್ ಮುಸ್ಲಿಮರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. “ಕಾಶ್ಮಿರದ ಜನರಿಗೆ ಸ್ವಾತಂತ್ರ್ಯ ಮತ್ತು ನ್ಯಾಯದ ಹಕ್ಕು ಇದೆ. ಕಾಶ್ಮೀರ ಕಣಿವೆಯಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಮರಳಿಸಲು ಭಾರತ ಸರ್ಕಾರದ ಮೇಲೆ ಅಮೆರಿಕ ಸರ್ಕಾರ ಒತ್ತಡ ಹಾಕಬೇಕು” ಎಂದು ಸಿಎಐಆರ್ ಸಂಘಟನೆಯ ಮುಖಂಡ ನಿಹಾದ್ ಅವಾದ್ ಅವರು ಮನವಿ ಮಾಡಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 35ಎ ಮತ್ತು 370ನೇ ವಿಧಿಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಹಾಗೆಯೇ ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. ಇವುಗಳಿಗೆ ಸಂಸತ್​ನ ಎರಡೂ ಸದನಗಳಲ್ಲಿ ಅನುಮೋದನೆಯೂ ಸಿಕ್ಕಿದೆ. ಇದೀಗ ರಾಷ್ಟ್ರಪತಿಗಳ ಅಂಕಿತದೊಂದಿಗೆ ಅಧಿಕೃತವಾಗಿ ಚಾಲನೆಗೆ ಬರಲಿದೆ.

ಇದೇ ವೇಳೆ, ಕಾಶ್ಮೀರಿಗಳಿಗೋಸ್ಕರ ಕೊನೆಯ ಉಸಿರಿರುವವರೆಗೂ ಹೋರಾಟ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ವಿಶೇಷಾಧಿಕಾರ ಕಿತ್ತ ಭಾರತ ಸರ್ಕಾರದ ಸೇನೆಯ ಮೇಲೆ ಕಾಶ್ಮೀರಿಗಳು ದಾಳಿ ಮಾಡುವ ಶಂಕೆ ಇದೆ. ಅಂಥದ್ದೊಂದು ದುರಂತ ಸಂಭವಿಸಿದರೆ ಅದನ್ನು ಪಾಕಿಸ್ತಾನದ ಮೇಲೆ ಎತ್ತಿಕಟ್ಟಬಹುದು. ಇದೇ ನೆವವಿಟ್ಟುಕೊಂಡು ಭಾರತವೇನಾದರೂ ದಾಳಿ ಮಾಡಿದರೆ ನಾವು ಸರಿಯಾಗಿಯೇ ಉತ್ತರ ನೀಡುತ್ತೇವೆ ಎಂದು ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ಧಾರೆ.

Comments are closed.