ನವದೆಹಲಿ; ಲೋಕಸಭಾ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ ಬಿಜೆಪಿ ಮತ್ತೊಂದು ಬಾರಿ ಸಂಪೂರ್ಣ ಬಹುಮತದ ಸರ್ಕಾರ ರಚಿಸಿದೆ. ಇಂದು ಸಂಜೆ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಮೋದಿ 2.0 ಕ್ಯಾಬಿನೆಟ್ನಲ್ಲಿ ಯಾರಿಗೆಲ್ಲ ಸಚಿವ ಸ್ಥಾನ? ಯಾರ್ಯಾರಿಗೆ ಯಾವ ಖಾತೆ? ಎಂಬ ಪ್ರಶ್ನೆ ಕಳೆದ ಕೆಲ ದಿನಗಳಿಂದ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಇಂದು ಸಂಜೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೆ ಎಲ್ಲಾ ಸಚಿವರು ಸಹ ಪ್ರಮಾಣ ಸ್ವೀಕರಿಸಲಿದ್ದಾರೆ. ಸಂಜೆ 4 ಗಂಟೆಯ ಒಳಗಾಗಿ ಸಚಿವ ಸಂಪುಟದ ಸಂಫೂರ್ಣ ವಿವರನ್ನು ಪ್ರಧಾನಿ ಸಚಿವಾಲಯ ರಾಷ್ಟ್ರಪತಿ ಭವನಕ್ಕೆ ಸಲ್ಲಿಸಬೇಕು. ಹೀಗಾಗಿ ಗುರುವಾರ ಬೆಳಗ್ಗೆಯಿಂದಲೇ ಸಚಿವರಾಗಿ ಆಯ್ಕೆಯಾದವರಿಗೆ ಪ್ರಧಾನಿ ಸಚಿವಾಲಯ ಕರೆ ಮಾಡಿ ತಿಳಿಸುತ್ತಿದ್ದು ಸಂಜೆ 4 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ.
ಪ್ರಸ್ತುತ ಬಿಜೆಪಿ ಹೈಕಮಾಂಡ್ ಸಂಭಾವ್ಯ ಸಚಿವರ ಹೆಸರುಗಳನ್ನಷ್ಟೆ ಸ್ಪಷ್ಟಪಡಿಸಿದೆ. ಆದರೆ, ಯಾರಿಗೆ ಯಾವ ಖಾತೆ ನೀಡಲಾಗುವುದು ಎಂಬ ಕುರಿತಾಗಿ ಮಾತ್ರ ಈವರೆಗೆ ಬಿಜೆಪಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಬುಧವಾರ ಹಾಗೂ ಗುರುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸತತ ಚರ್ಚೆ ನಡೆಸಿದ ಬಳಿಕ ಸಚಿವರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ.
ಪ್ರಧಾನಿ ಕಾರ್ಯಾಲಯದಿಂದ ನೂತನ ಸಚಿವರಿಗೆ ಕರೆ: ಈ ನಡುವೆ ನೂತನ ಸಚಿವರಾಗಿ ಆಯ್ಕೆಯಾದವರಿಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಮಾಡಿ ತಿಳಿಸಲಾಗುತ್ತಿದೆ. ಈಗಾಗಲೇ ಕರ್ನಾಟಕದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಅವರಿಗೆ ಸಚಿವ ಸ್ಥಾನ ಖಚಿತವಾಗಿದ್ದು ಕರೆ ಮಾಡಿ ತಿಳಿಸಲಾಗಿದೆ ಎಂಬ ಖಚಿತ ಮಾಹಿತಿ ನ್ಯೂಸ್18ಗೆ ಲಭ್ಯವಾಗಿದೆ. ಜತೆಗೆ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ಸಚಿವರಾಗಲಿದ್ದಾರೆ. ಅವರು ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿರುವ ಕಾರಣ, ಕರ್ನಾಟಕಕ್ಕೆ ಒಟ್ಟೂ 4 ಸ್ಥಾನ ಸಿಗಲಿದೆ ಎಂದು ಮೂಲಗಳು ಹೇಳುತ್ತಿವೆ.
ಇದಲ್ಲದೆ ಉತ್ತರಪ್ರದೇಶದ ಸಂಸದ ಮುಕ್ತಾರ್ ಅಬ್ಬಾಸ್ ನಖ್ವಿ, ಅಮೇಥಿಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಗೆ ಸೋಲುಣಿಸಿದ ಸಂಸದೆ ಸ್ಮೃತಿ ಇರಾನಿ, ಮಾಜಿ ಗೃಹಖಾತೆ ಸಚಿವ ರಾಜ್ನಾಥ್ ಸಿಂಗ್, ಮಧ್ಯಪ್ರದೇಶದ ಸಂಸದ ಪ್ರಹ್ಲಾದ್ ಪಟೇಲ್, ಮಹಾರಾಷ್ಟ್ರ ಸಂಸದರಾದ ಪ್ರಕಾಶ್ ಜಾವ್ಡೇಕರ್, ರಾಮ್ದಾಸ್ ಅಠಾವಳೆ, ಪಿಯೂಶ್ ಗೋಯಲ್.
ಬಿಹಾರದ ಸಂಸದ ಶಂಕರ್ ಪ್ರಸಾದ್, ಜಮ್ಮು-ಕಾಶ್ಮೀರದ ಡಾ. ಜೀತೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಬಾಬುಲ್ ಸುಪ್ರಿಯೋ, ತೆಲಂಗಾಣದ ಸಂಸದ ಕೃಷ್ಣ ರೆಡ್ಡಿ ಚಂಡಿಘಡ್ನ ಹರ್ಷಿಮ್ರತ್ ಕೌರ್ ಬಾದಲ್ ಹಾಗೂ ಗುಜರಾತ್ ರಾಜ್ಯಸಭಾ ಸದಸ್ಯರಾದ ಪುರುಷೋತ್ತಮ್ ರುಪಾಲ ಮನ್ಸುಕ್ ಎಲ್. ಮಾಂಡವಿಯಾ ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ.
Comments are closed.