ರಾಷ್ಟ್ರೀಯ

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ; ಔತಣಕೂಟ ಏರ್ಪಡಿಸಿದ್ದ ಅಮಿತ್​​ ಶಾ

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆಗೆ ಇನ್ನೇನು ಎರಡು ದಿನ ಬಾಕಿ ಉಳಿದಿದೆ. ಆಗಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿವೆ. ಇದೇ ಖುಷಿಯಲ್ಲಿ ತೇಲಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ, ಇಂದು ಮಿತ್ರಕೂಟ ಎನ್​​ಡಿಎ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಕೇಂದ್ರ ಸಚಿವರು ಪಾಲ್ಗೊಂಡಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ಅವರು, ಔತಣಕೂಟದಲ್ಲಿ ಭಾಗಿಯಾಗಿದ್ದ ಎಲ್ಲಾ ಕೇಂದ್ರ ಸಚಿವರಿಗೂ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಕೇಂದ್ರದಲ್ಲಿ ಎನ್​​ಡಿಎ ಸರ್ಕಾರ 5 ವರ್ಷ ಸುಗಮವಾಗಿ ನಡೆಸಲು ಸಹಕರಿಸಿದ ಎಲ್ಲಾ ಮಿತ್ರಪಕ್ಷಗಳಿಗೂ ಆಭಾರಿಯಾಗಿದ್ದೇನೆ ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಲಿದೆ. ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಲಿದ್ದಾರೆ. ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​​ಪಿ ಮೈತ್ರಿ ಕಾರಣಕ್ಕೆ ಬಿಜೆಪಿಗೆ ಹಿನ್ನಡೆಯಾದರೂ, ಪಶ್ಚಿಮ ಬಂಗಾಳದಲ್ಲಿ ಈ ಸೀಟುಗಳನ್ನು ಸರಿದೂಗಿಸಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹಾಗಾಗಿಯೇ ಅಮಿತ್​​ ಶಾ ಈ ಔತಣಕೂಟ ಆಯೋಜಿಸಿದ್ದರು ಎನ್ನಲಾಗುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ಹಲವು ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎನ್​​ಡಿಎ ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನ ಪಡೆಯಲಿದೆ. ನ್ಯೂಸ್ 24-ಚಾಣಕ್ಯ ಸಮೀಕ್ಷೆ ಪ್ರಕಾರ ಎನ್ ಡಿಎ 350 ಸ್ಥಾನ ಗಳಿಸಲಿದೆ. ಆಜ್ ತಕ್/ಇಂಡಿಯಾ ಟುಡೇ-ಆಯಕ್ಸಿಸ್ 339ರಿಂದ 365, ನ್ಯೂಸ್ 18-ಐಪಿಎಸ್ ಒಎಸ್ 336, ಟೈಮ್ಸ್ ನೌ-ವಿಎಂಆರ್ 306, ರಿಪಬ್ಲಿಕ್- ಜನ್ ಕೀ ಬಾತ್ 315 ಹಾಗೂ ಇಂಡಿಯಾ ಟಿವಿ-ಸಿಎನ್ ಎಕ್ಸ್ 315 ಸ್ಥಾನ ಗಳಿಸುವುದಾಗಿ ಸಮೀಕ್ಷೆಯಲ್ಲಿ ತಿಳಿಸಿವೆ.

ಇನ್ನು ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಗೆ 5 ರಿಂದ 7 ಸೀಟು, ಕೇಸರಿ ಪಕ್ಷಕ್ಕೆ 21 ರಿಂದ 33 ಸೀಟು ಲಭ್ಯವಾಗಲಿದೆ ಎನ್ನುತ್ತಿವೆ ಸಮೀಕ್ಷೆಗಳು.

ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಏನೇ ಆಗಲಿ ನಾವು ಕೇಂದ್ರ ಚುನಾವಣೆ ಆಯೋಗ ನೀಡಬೇಕಿರುವ ತೀರ್ಪಿಗೆ ಕಾಯಬೇಕಿದೆ.

Comments are closed.