ಬೆಂಗಳೂರು: ಉತ್ತರ ಪ್ರದೇಶ ರಾಜ್ಯದಲ್ಲಿ ನೆಹರೂ ಕುಟುಂಬದವರ ಹಿಡಿತದಲ್ಲಿರುವ ಕೆಲವೇ ಕ್ಷೇತ್ರಗಳಲ್ಲಿ ಅಮೇಥಿಯೂ ಒಂದು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಎದುರು ತೀವ್ರ ಪೈಪೋಟಿ ನೀಡಲು ಯಶಸ್ವಿಯಾಗಿದ್ದ ಬಿಜೆಪಿಯ ಸ್ಮೃತಿ ಇರಾನಿ ಅವರ ಪ್ರಯತ್ನ ಈ ಬಾರಿಯೂ ಕೈಗೂಡದಿರುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಕಳೆದ ಬಾರಿ ಸುಮಾರು 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ರಾಹುಲ್ ಗಾಂಧಿ ಅವರ ಗೆಲುವಿನ ಅಂತರ ಈ ಬಾರಿ ಇನ್ನಷ್ಟು ಕಡಿಮೆಯಾಗಬಹುದೆನ್ನಲಾಗಿದೆ.
1967ರಲ್ಲಿ ರಚನೆಯಾದ ಅಮೇಥಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆಯಾಗಿ ರೂಪುಗೊಂಡಿದ್ದು 80ರ ದಶಕದಲ್ಲಿ. ಗಾಂಧಿ ಕುಟುಂಬದ ಪಾಲಿನ ರಕ್ಷಾ ಕವಚವೆನಿಸಿದೆ. ಆದರೆ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ಇಲ್ಲಿ ಸೋತೇ ಇಲ್ಲ ಎನ್ನುವಂತಿಲ್ಲ. 1967ರಿಂದ ಈವರೆಗೆ ಈ ಕ್ಷೇತ್ರಕ್ಕೆ 15 ಬಾರಿ ಚುನಾವಣೆಗಳಾಗಿವೆ. 13 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ತುರ್ತು ಪರಿಸ್ಥಿತಿ ನಂತರ 1977ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಇಲ್ಲಿ ಕಾಂಗ್ರೆಸ್ಗೆ ಸೋಲಿನ ರುಚಿ ತೋರಿಸಿತ್ತು. ರವೀಂದ್ರ ಪ್ರತಾಪ್ ಸಿಂಗ್ ಅವರು ಸಂಜಯ್ ಗಾಂಧಿ ಅವರನ್ನೇ ಸೋಲಿಸಿದ್ದರು. 1998ರ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ಅಲೆಯ ನೆರವಿನಿಂದ ಇಲ್ಲಿನ ಬಿಜೆಪಿ ಅಭ್ಯರ್ಥಿ ಡಾ. ಸಂಜಯ್ ಸಿನ್ಹ ಅವರು ಕಾಂಗ್ರೆಸ್ ಭದ್ರಕೋಟೆ ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಅದನ್ನು ಹೊರತುಪಡಿಸಿದರೆ ಈ ಕ್ಷೇತ್ರವು ಕಾಂಗ್ರೆಸ್ನ ಹಿಡಿತದಲ್ಲೇ ಇದೆ. ರಾಜೀವ್ ಗಾಂಧಿ ಅವರಂತೂ ಇಲ್ಲಿ ಅಕ್ಷರಶಃ ಎದುರಾಳಿಗಳನ್ನ ನಾಲ್ಕು ಬಾರಿ ಸತತವಾಗಿ ಧೂಳೀಪಟ ಮಾಡಿದ್ದರು. 2 ಚುನಾವಣೆಗಳಲ್ಲಿ ಅವರು ಶೇ. 80ಕ್ಕಿಂತ ಹೆಚ್ಚು ಮತ ಗಳಿಸಿ ಜಯಭೇರಿ ಭಾರಿಸಿದ್ದರು.
2014ರಲ್ಲಿ ಸ್ಮೃತಿ ಇರಾನಿ ಅವರು ಮೋದಿ ಅಲೆಯ ಸಹಾಯದಿಂದ 3 ಲಕ್ಷ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಯಲ್ಲಿ ಸೋತರೂ ಸ್ಮೃತಿ ಅವರು ಈ ಕ್ಷೇತ್ರದೊಂದಿಗೆ ಸಂಪರ್ಕ ಬಿಟ್ಟಿರಲಿಲ್ಲ. ಇದು ಈ ಕ್ಷೇತ್ರದಲ್ಲಿ ಕಮಲವನ್ನು ಮತ್ತೆ ಬೇರೂರುವಂತೆ ಮಾಡಿತ್ತು. 2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವೇಳೆ ಅಮೇಥಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 4ರಲ್ಲಿ ಗೆದ್ದು ದಿಗ್ವಿಜಯ ಸಾಧಿಸಿದ್ದು ಇದಕ್ಕೆ ಸಾಕ್ಷಿ. ವಿಪರ್ಯಾಸವೆಂದರೆ ತನ್ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಸಮಾಜವಾದಿ ಪಕ್ಷ ಉಳಿದ ಒಂದನ್ನು ಗೆದ್ದುಕೊಂಡಿತ್ತು.
ಆದರೆ, ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರನ್ನು ಈ ಬಾರಿ ಬಚಾವ್ ಆಗುವುದಿದ್ದರೆ ಅದು ಸಮಾಜವಾದಿ ಪಕ್ಷದಿಂದಲೇ ಎನ್ನಬಹುದು. ಎಸ್ಪಿ ಪಕ್ಷ ಈ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಹಾಕಲಿಲ್ಲ. ಕಾಂಗ್ರೆಸ್ ಮತಗಳು ವಿಭಜನೆಯಾಗದಿರಲಿ ಎಂಬ ಉದ್ದೇಶದಿಂದ ಎಸ್ಪಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಇದು ರಾಹುಲ್ ಗೆಲುವಿಗೆ ಕಾರಣವಾಗಬಹುದಾದ ಅಂಶಗಳಲ್ಲಿ ಒಂದು ಎನ್ನುತ್ತವೆ ಮತಗಟ್ಟೆ ಸಮೀಕ್ಷೆಗಳು.
ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯ ಕಮಲದ ಪರವಾಗಿದ್ದ ಅಮೇಥಿ ಜನರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಾಂಪ್ರದಾಯಿಕ ನಿಷ್ಠೆಯನ್ನು ಬದಲಿಸದಿರಲು ನಿರ್ಧರಿಸಿರುವಂತಿದೆ.
ಅಮೇಥಿಯಲ್ಲಿ ಈ ಬಾರಿ ರಾಹುಲ್, ಸ್ಮೃತಿ ಇರಾನಿ ಸೇರಿ ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಕ್ಷಿಣ ಕನ್ನಡದ ಡಾ| ಯು.ಪಿ. ಶಿವಾನಂದ ಅವರೂ ಇಲ್ಲಿ ಸ್ಪರ್ಧಿಸಿರುವುದು ಕರ್ನಾಟಕದ ಮಟ್ಟಿಗೆ ಮತ್ತೊಂದು ವಿಶೇಷ.
ಈ ಹಿಂದಿನ ಫಲಿತಾಂಶಗಳು:
2014: ರಾಹುಲ್ ಗಾಂಧಿ, ಕಾಂಗ್ರೆಸ್
2009: ರಾಹುಲ್ ಗಾಂಧಿ, ಕಾಂಗ್ರೆಸ್
2004: ರಾಹುಲ್ ಗಾಂಧಿ, ಕಾಂಗ್ರೆಸ್
1999: ಸೋನಿಯಾ ಗಾಂಧಿ, ಕಾಂಗ್ರೆಸ್
1998: ಡಾ. ಸಂಜಯ್ ಸಿನ್ಹ್, ಬಿಜೆಪಿ
1996: ಸತೀಶ್ ಶರ್ಮಾ, ಕಾಂಗ್ರೆಸ್
1991: ಸತೀಶ್ ಶರ್ಮಾ, ಕಾಂಗ್ರೆಸ್ (ಉಪಚುನಾವಣೆ)
1991: ರಾಜೀವ್ ಗಾಂಧಿ, ಕಾಂಗ್ರೆಸ್
1989: ರಾಜೀವ್ ಗಾಂಧಿ, ಕಾಂಗ್ರೆಸ್
1984: ರಾಜೀವ್ ಗಾಂಧಿ, ಕಾಂಗ್ರೆಸ್
1981: ರಾಜೀವ್ ಗಾಂಧಿ, ಕಾಂಗ್ರೆಸ್ (ಉಪಚುನಾವಣೆ)
1980: ಸಂಜಯ್ ಗಾಂಧಿ, ಕಾಂಗ್ರೆಸ್
1977: ರವೀಂದ್ರ ಪ್ರತಾಪ್ ಸಿಂಗ್, ಜನತಾ ಪಕ್ಷ
1971: ವಿದ್ಯಾಧರ್ ಬಾಜಪೇಯಿ, ಕಾಂಗ್ರೆಸ್
1967: ವಿದ್ಯಾಧರ್ ಬಾಜಪೇಯಿ, ಕಾಂಗ್ರೆಸ್
2014ರ ಅಮೇಥಿ ಚುನಾವಣೆ ಫಲಿತಾಂಶದ ವಿವರ:
ರಾಹುಲ್ ಗಾಂಧಿ(ಕಾಂಗ್ರೆಸ್): 4,08,651 ವೋಟುಗಳು
ಸ್ಮೃತಿ ಇರಾನಿ(ಬಿಜೆಪಿ): 3,00,748
ಧರ್ಮೇಂದ್ರ ಪ್ರತಾಪ್ ಸಿಂಗ್(ಬಿಎಸ್ಪಿ): 57,716
ಡಾ. ಕುಮಾರ್ ವಿಶ್ವಾಸ್(ಎಎಪಿ): 25,527
Comments are closed.