ನವದೆಹಲಿ: “ಮಾಜಿ ಪ್ರಧಾನಿ ಇಂದಿರಾ ಗಾಂಧಿಯಂತೆ ನನ್ನ ಬೆಂಗಾವಲು ಪಡೆಯಿಂದಲೇ ನನ್ನ ಹತ್ಯೆ ಮಾಡಲಾಗುತ್ತದೆ,” ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.
“ಬಿಜೆಪಿ ಪಕ್ಷ ನನ್ನ ಸಾವಿಗೆ ಸಂಚು ರೂಪಿಸುತ್ತಿದ್ದು, ಮುಂದೊಂದು ದಿನ ನನ್ನ ಹತ್ಯೆ ಮಾಡಲಾಗುತ್ತದೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
“ಇಂದಿರಾಗಾಂಧಿಯನ್ನು ಅವರ ಬೆಂಗಾವಲು ಪಡೆ ಹತ್ಯೆ ಮಾಡಿದಂತೆ, ನನ್ನ ಖಾಸಗಿ ಭದ್ರತಾ ಅಧಿಕಾರಿಯಿಂದಲೇ ಬಿಜೆಪಿ ಒಂದು ದಿನ ನನ್ನನ್ನು ಹತ್ಯೆ ಮಾಡಿಸಲಿದೆ. ನನ್ನ ಭದ್ರತಾ ಅಧಿಕಾರಿ ಬಿಜೆಪಿಗೆ ವರದಿ ಮಾಡುತ್ತಾರೆ,” ಎಂದು ಪಂಜಾಬ್ನ ಸ್ಥಳೀಯ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೇಲೆ ನಿರಂತರ ದಾಳಿಗಳು ನಡೆಯುತ್ತಲೇ ಇರುವ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ಹೊರಬಂದಿದೆ. ಸಿಎಂ ಕಚೇರಿಯಲ್ಲಿಯೇ ಕಾರದ ಪುಡಿ ಎರಚಿ, ಚಾಕುವಿನಿಂದ ಹಲ್ಲೆ ಮಾಡಲು ವ್ಯಕ್ತಿಯೊಬ್ಬ ಮುಂದಾಗಿದ್ದ. ಅಲ್ಲದೇ ಬಹಿರಂಗ ಕಾರ್ಯಕ್ರಮಗಳಲ್ಲಿ ಅವರ ಮುಖಕ್ಕೆ ಕಪ್ಪು ಮಸಿ ಬಳಿಯುವಂತಹ ದಾಳಿಗಳು ಅವರ ಮೇಲೆ ನಿರಂತರವಾಗಿ ನಡೆಯುತ್ತಲೆ ಇದೆ.
ಕಳೆದ ಹದಿನೈದು ದಿನಗಳ ಹಿಂದೆ ದೆಹಲಿಯ ಮೋತಿ ನಗರ್ನಲ್ಲಿ ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಕೇಜ್ರಿವಾಲ್ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದರು.
Comments are closed.