ರಾಷ್ಟ್ರೀಯ

ನಾನು ‘ಎನ್​​​ಸಿಪಿ’ ಬಟನ್​​​ ಒತ್ತಿದ್ರೆ, ವೋಟು ಬಿಜೆಪಿಗೆ ಬಿದ್ದಿತ್ತು; ಶರದ್​​ ಪವಾರ್​​​

Pinterest LinkedIn Tumblr


ನವದೆಹಲಿ: ಇವಿಎಂ ಸಮಸ್ಯೆಗೆ ಮುಕ್ತಿ ಕಾಣಿಸಲು ಕೊನೆಗೂ ಕೇಂದ್ರ ವಿರೋಧ ಪಕ್ಷಗಳು ಒಂದಾಗಿವೆ ಎನ್ನುವುದು ಗೊತ್ತಿರುವ ಸಂಗತಿ. ಈ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್​ ಪೇಪರ್​ ಬಳಸುವಂತೆ ಕೇಂದ್ರ ಚುನಾವಣ ಆಯೋಗಕ್ಕೆ ಕಾಂಗ್ರೆಸ್​​ ನೇತೃತ್ವದಲ್ಲಿ 21 ವಿರೋಧ ಪಕ್ಷಗಳು ಆಗ್ರಹಿಸಿದ್ದವು ಕೂಡ. ಬಳಿಕ ಸುಪ್ರೀಂ ಕೋರ್ಟ್​​ನಲ್ಲಿಯೂ ಮೇಲ್ಮನವಿ ಸಲ್ಲಿಸಿದ್ದವು. ಆದರೆ, ಸುಪ್ರೀಂಕೋರ್ಟ್​ ಈ ವಿಚಾರಕ್ಕೆ ಮನ್ನಣೆ ನೀಡದೆ, ಅರ್ಜಿಯನ್ನು ತಿರಸ್ಕರಿಸಿತು. ನೇರವಾಗಿಯೇ ಕೇಂದ್ರ ವಿಪಕ್ಷಗಳ ಬ್ಯಾಲೆಟ್​​​​ ಪೇಪರ್​​ ಬಳಕೆ ಮಾಡಿ ಎಂಬ ಬೇಡಿಕೆಯನ್ನು ತಳ್ಳಿಹಾಕಿತ್ತು.

ಲೋಕಸಭಾ ಚುನಾವಣೆ ಮುಗಿಯಲು ಇನ್ನೆರಡು ಹಂತದ ಮತದಾನ ಮಾತ್ರ ಬಾಕಿಯಿದೆ. ಈ ಮಧ್ಯೆ ಮತ್ತೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ತಾಂತ್ರಿಕ ದೋಷದ ಕುರಿತಾದ ಚರ್ಚೆ ಮುನ್ನೆಲೆಗೆ ಬಂದಿದೆ. ಮೊದಲ ಹಂತದ ಚುನಾವಣೆಯಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಜಮ್ಮ-ಕಾಶ್ಮೀರದಲ್ಲಿ ಇವಿಎಂ ಯಂತ್ರ ಕೈಕೊಟ್ಟಿತ್ತು. ಸುಮಾರು 350ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಆರೋಪಿಸಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದರು. ಜತೆಗೆ ಮರುಮತದಾನಕ್ಕೆ ಕೂಡ ಆಗ್ರಹಿಸಿದರು.

ಈ ಬೆನ್ನಲ್ಲೇ ಎನ್​​ಸಿಪಿ ಹಿರಿಯ ನಾಯಕ ಶರದ್​​ ಪವಾರ್​​​ ಅವರು, ಎವಿಎಂ ಬಗ್ಗೆ ಮತ್ತೊಂದು ಆರೋಪ ಮಾಡಿದ್ದಾರೆ. ಹೈದರಬಾದ್​​ ಮತ್ತು ಗುಜರಾತ್​​ನಲ್ಲಿ ಕೆಲವರು ನನ್ನನ್ನು ಇವಿಎಂ ಬಟನ್​​ ಒತ್ತಲು ಹೇಳಿ, ಪರಿಶೀಲಿಸುವಂತೆ ಕೇಳಿಕೊಂಡರು. ಆಗ ಕೂಡಲೇ ನಾನು ಇವಿಎಂನಲ್ಲಿ ನನ್ನ ಪಕ್ಷ ಎನ್​​ಸಿಪಿ ಸಿಂಬಲ್​​​ ಬಟನ್​​ ಒತ್ತಿದೆ. ನಾನು ಎನ್​​ಸಿಪಿಗೆ ಒತ್ತಿದ್ರೆ, ವೋಟು ಬಿಜೆಪಿಗೆ ಬಿತ್ತು ಎಂದರು. ಹಾಗೆಯೇ ಇಲ್ಲಿನ ಇವಿಎಂ ಯಂತ್ರಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿವೆ ಎಂದು ಆಂತಕ ವ್ಯಕ್ತಪಡಿಸಿದರು.

ಈ ಹಿಂದೆಯೇ ಕೇಂದ್ರ ಚುನಾವಣೆಯ ಆಯೋಗದಿಂದ ನಿಖರತೆ, ಪಾರದರ್ಶಕತೆ ಮತ್ತು ನಿಸ್ಪಕ್ಷಪಾತ ಚುನಾವಣೆ ನಡೆಸಲು ಇವಿಎಂ ಬಳಸಬೇಡಿ ಎಂದು ಕಾಂಗ್ರೆಸ್​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ದೂರು ನೀಡಿದ್ದವು. ಅಲ್ಲದೇ ಇವಿಎಂ ಬದಲಿಗೆ ಬ್ಯಾಲೆಟ್​​ ಪೇಪರ್​​ ಬಳಸುವಂತೆ ಒತ್ತಾಯಿಸಿದ್ದವು.

Comments are closed.