ನವದೆಹಲಿ: ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಕ್ಕಾಗಿ ಮೂವರನ್ನು ಬಂಧಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಪರಾಕಿ ಬಾರಿಸಿದ್ದಾರೆ. ಭಾರತದಲ್ಲಿ ಜೈ ಶ್ರೀರಾಮ್ ಎನ್ನದೇ ಪಾಕಿಸ್ತಾನದಲ್ಲಿ ಹೇಳಬೇಕೆ ಎಂದು ದೀದಿಗೆ ಪ್ರಶ್ನಿಸಿದ್ದಾರೆ. ಅಲ್ಲದೇ ‘ನಾನೂ ‘ಜೈ ಶ್ರೀರಾಮ್’ ಮಂತ್ರ ಪಠಿಸುತ್ತೇನೆ. ನಿಮಗೆ ತಾಕತ್ತಿದ್ದರೆ ಬಂಧಿಸಿ’ ಎಂದು ಸವಾಲ್ ಎಸೆದಿದ್ದಾರೆ.
ಪಶ್ಚಿಮ ಬಂಗಾಳದ ಮಿಡ್ನಾಪುರ್ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಹೀಗೆ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಜೈ ಶ್ರೀರಾಮ್’ ಮಂತ್ರ ಪಠಿಸಿದವರನ್ನು ದೀದಿ ಜೈಲಿಗೆ ತಳ್ಳುತ್ತಿದ್ದಾರೆ. ಈಗ ನಾನೂ ಜೈ ಶ್ರೀರಾಮ್ ಎನ್ನುತ್ತೇನೆ. ನಿಮಗೆ ನನ್ನನ್ನು ಜೈಲಿಗೆ ಕಳಿಸಲು ತಾಕತ್ತಿದೆಯೇ. ಭಾರತದಲ್ಲಿ ಜೈ ಶ್ರೀರಾಮ್ ಎನ್ನದೇ ಪಾಕಿಸ್ತಾನದಲ್ಲಿ ಕೂಗಲೂ ಸಾಧ್ಯವೇ ಎಂದು ನೇರವಾಗಿಯೇ ಅಮಿತ್ ಶಾ ದೀದಿಗೆ ಪ್ರಶ್ನಿಸಿದರು.
ರಾಮ ಭಾರತ ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿದ್ದಾರೆ. ಕೋಟ್ಯಾಂತರ ಭಕ್ತರು ಆತನನ್ನು ದಿನನಿತ್ಯ ನೆನೆಯುತ್ತಾರೆ. ರಾಮನ ಮಂತ್ರ ಪಠಿಸುವುದುನ್ನು ಯಾರಾದರೂ ತಡೆಯಲು ಸಾಧ್ಯವೇ ಎಂದರು.
ಇನ್ನು ರಾಜ್ಯದ 42 ಸೀಟುಗಳ ಪೈಕಿ ಬಿಜೆಪಿ 23 ಗೆಲ್ಲಲಿದೆ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ನಿಮ್ಮ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸುಮಾರು 4,24,800 ಕೋಟಿ ಅನುದಾನ ಪಶ್ಚಿಮ ಬಂಗಾಳಕ್ಕೆ ನೀಡಿದ್ದೇವೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕೇವಲ 1,32,000 ಕೋಟಿ ಅನುದಾನ ನೀಡಿದ್ದರು. ಈ ಸಾಧನೆ ಮೇರೆಗೆ ಜನ ಮತ ಚಲಾಯಿಸಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಿಡಿಸಿದ್ಧಾರೆ.
ಇಲ್ಲಿನ ಘಾತಲ್ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ ಪ್ರಚಾರಕ್ಕೆಂದು ಸಿಎಂ ಮಮತಾ ಬ್ಯಾನರ್ಜಿ ತೆರಳುತ್ತಿರುವಾಗ ಕಾರಿಗೆ ಅಡ್ಡ ಬಂದ ಕೆಲವು ಬಿಜೆಪಿ ಕಾರ್ಯಕರ್ತರು, ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದರು. ಈ ಪೈಕಿ ಮೂವರನ್ನು ತಕ್ಷಣ ಬಂಧಿಸುವಂತೆ ಮಮತಾ ಬ್ಯಾನರ್ಜಿ ಆದೇಶಿಸಿದ್ದರು. ಜೈ ಶ್ರೀರಾಮ್ ಘೋಷಣೆ ಕೇಳುತ್ತಲೇ ಕೆರಳಿದ ಮಮತಾ ಬ್ಯಾನರ್ಜಿ, ಬಿಜೆಪಿ ಕಾರ್ಯಕರ್ತರನ್ನು ಬಂಧನಕ್ಕೆ ಆದೇಶ ಹೊರಡಿಸಿದ್ದರು.
Comments are closed.