ರಾಷ್ಟ್ರೀಯ

ಮಿಷನ್ ಶಕ್ತಿ ಅಮೋಘವೇ; ಪ್ರಧಾನಿಯಿಂದ ನೀತಿ ಸಂಹಿತೆ ಉಲ್ಲಂಘನೆ: ಸಿಪಿಎಂ ಆಕ್ಷೇಪ

Pinterest LinkedIn Tumblr


ನವದೆಹಲಿ: ಭೂಕಕ್ಷೆಯ ಮೇಲಿರುವ ಸೆಟಿಲೈಟ್​ಗಳನ್ನ ನಾಶ ಮಾಡಬಲ್ಲ ಮಿಷನ್ ಶಕ್ತಿ ಯೋಜನೆಯನ್ನು ಪ್ರಧಾನಿ ಘೋಷಣೆ ಮಾಡಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಮಿಷನ್ ಶಕ್ತಿಯಂಥ ಯೋಜನೆಯನ್ನು ಡಿಆರ್​ಡಿಓದಂಥ ಸಂಬಂಧಿತ ವೈಜ್ಞಾನಿಕ ಸಂಸ್ಥೆಯವರು ಘೋಷಣೆ ಮಾಡುವ ಬದಲು ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಮಾವೇಶದಲ್ಲಿ ಈ ಕೆಲಸ ಮಾಡಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡುವಾಗ ಈ ವಿಚಾರವನ್ನು ತಿಳಿಸಲು ಪ್ರಧಾನಿ ಅವರು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದಿದ್ದರೆ? ಪೂರ್ವಾನುಮತಿ ಇದ್ದದ್ದೇ ಆದಲ್ಲಿ ಆಯೋಗವು ಯಾವ ಆಧಾರದ ಮೇಲೆ ಮೋದಿ ಅವರ ಈ ಭಾಷಣಕ್ಕೆ ಅನುಮತಿ ಕೊಡಲಾಗಿದೆ? ಎಂದು ಯೆಚೂರಿ ಅವರು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಮಿಷನ್ ಶಕ್ತಿ ಯೋಜನೆಯನ್ನು ಸಾಕಾರ ಮಾಡಿದ್ದಕ್ಕೆ ಯೆಚೂರಿ ಅವರು ಭಾರತೀಯ ವಿಜ್ಞಾನಿಗಳನ್ನು ಕೊಂಡಾಡಿದ್ಧಾರೆ. “ಭೂಕಕ್ಷೆಯಲ್ಲಿರುವ ಸೆಟಿಲೈಟ್​ಗಳನ್ನು ಟಾರ್ಗೆಟ್ ಮಾಡಬಲ್ಲ ಕ್ಷಿಪಣಿ ಸಾಮರ್ಥ್ಯ ತಮ್ಮಲ್ಲಿದೆ ಎಂದು 2012ರಲ್ಲೇ ಡಿಆರ್​ಡಿಓ ಮುಖ್ಯಸ್ಥರು ಘೋಷಿಸಿದ್ದರು. ಖಂಡಾಂತರ ಕ್ಷಿಪಣಿ ಹಾಗೂ ಅಗ್ನಿ ಕ್ಷಿಪಣಿಗಳ ಯಶಸ್ಸಿನ ನಂತರ ಉಪಗ್ರಹ ನಾಶಕ ಕ್ಷಿಪಣಿ ಅಭಿವೃದ್ಧಿಗೆ ಭಾರತ ಮುಂದಾಯಿತು. ಮುಂಬರುವ ದಿನಗಳಲ್ಲಿ ಇನ್ನೂ ಎತ್ತರದ ಕಕ್ಷೆಗಳಲ್ಲಿರುವ ಸೆಟಿಲೈಟ್​ಗಳನ್ನು ಗುರಿ ಮಾಡಬಲ್ಲ ಕ್ಷಿಪಣಿಗಳನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಮಾಡಬಲ್ಲರು,” ಎಂದು ಸಿಪಿಐಎಂ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇವತ್ತು, ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್ ಶಕ್ತಿಯ ಪ್ರಯೋಗ ಯಶಸ್ವಿಯಾಗಿರುವುದನ್ನು ಘೋಷಿಸಿದರು. ಭೂಮಿಯ ಕೆಳ ಸ್ತರದ ಕಕ್ಷೆಯಲ್ಲಿದ್ದ ನಿರುಪಯುಕ್ತ ಉಪಗ್ರಹವೊಂದನ್ನು ಗುರಿ ಮಾಡಿ 3 ನಿಮಿಷದಲ್ಲಿ ಹೊಡೆದುರುಳಿಸಲಾಯಿತು. ಭೂಮಿಯಿಂದಲೇ ಲೇಸರ್ ಕಿರಣಗಳ ಮೂಲಕ ಉಪಗ್ರಹವನ್ನು ನಾಶ ಮಾಡಲಾಯಿತು.

Comments are closed.