ಶ್ರೀನಗರ: ಸಿಆರ್ಪಿಎಫ್ ಯೋಧರೊಬ್ಬರು ತನ್ನ ಮೂವರು ಸಹೋದ್ಯೋಗಿಗಳನ್ನ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ನಿನ್ನೆ ಉಧಾಮ್ಪುರ್ ಶಿಬಿರದಲ್ಲಿ ಮೂವರ ಮೇಲೆ ಗುಂಡು ಹಾರಿಸಿದ ಯೋಧ ಅಜಿತ್ ಸಿಂಗ್, ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಿರಿಯ ಸಿಆರ್ಪಿಎಫ್ ಅಧಿಕಾರಿಗಳು ಕೂಡಲೇ ಶಿಬಿರದ ಬಳಿ ದೌಡಾಯಿಸಿದ್ದಾರೆ. 187ನೇ ಬೆಟಾಲಿಯನ್ನ ಸಿಆರ್ಪಿಎಫ್ ಕಮಾಂಡೆಂಟ್ ಹರಿಂದರ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೂವರು ಯೋಧರು ಸಾವನ್ನಪ್ಪಿದ್ದಾರೆ. ಅವರ ಮೇಲೆ ಗುಂಡು ಹಾರಿಸಿದ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಅಜಿತ್ ಸಿಂಗ್ ಸಹೋದ್ಯೋಗಿಗಳೊಂದಿಗೆ ಮನಸ್ತಾಪದ ಹಿನ್ನೆಲೆ ತನ್ನ ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿರುವ ಮೂವರು ಹೆಡ್ ಕಾನ್ಸ್ಟೇಬಲ್ಗಳು ರಾಜಸ್ಥಾನದ ಪೋಕರ್ಮಲ್, ದೆಹಲಿಯ ಯೋಗಿಂದರ್ ಶರ್ಮಾ ಹಾಗೂ ಹರಿಯಾಣದ ಮೇದ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡಿರುವ ಅಜಿತ್ ಸಿಂಗ್ ಕಾನ್ಪುರದವರಾಗಿದ್ದು, ಸದ್ಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Comments are closed.