ರಾಷ್ಟ್ರೀಯ

ಪೊಲ್ಲಾಚಿ ಸೆಕ್ಸ್ ಸ್ಕ್ಯಾಂಡಲ್: ದೇಶವನ್ನು ಬೆಚ್ಚಿ ಬಿಳಿಸಿದ ಘಟನೆ

Pinterest LinkedIn Tumblr


ಪೊಲ್ಲಾಚಿ: ಸಾಮಾಜಿಕ ಜಾಲತಾಣಗಳ ಸದ್ಬಳಕೆ ಅದೆಷ್ಟು ಮುಖ್ಯ ಅನ್ನೋದಿಕ್ಕೆ ಈ ಘಟನೆ ಉದಾಹರಣೆಯಾಗಬಲ್ಲದು. ಇದರಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಈ ಮೋಸ ಹೋದ ಯುವತಿಯರ ಕಣ್ಣೀರು ಹೇಳುತ್ತಿವೆ.

ತಮಿಳುನಾಡಿನ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬಿಳಿಸಿದ್ದು, ಯುವತಿಯರನ್ನು ಬಲೆಗೆ ಹಾಕಿಕೊಂಡು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಖದೀಮರ ಗುಂಪೊಂದನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪೊಲ್ಲಾಚಿ ಸೆಕ್ಸ್ ಸ್ಕ್ಯಾಂಡಲ್?:

ನಾಲ್ವರು ಖದೀಮರ ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು ,ನಂತರ ಅವರೊಂದಿಗೆ ಬಲವಂತದ ಸೆಕ್ಸ್ ವಿಡಿಯೋ ಮಾಡುವ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ.

ಮೊದಲಿಗೆ ಶಬರಿರಾಜನ್ ಅಲಿಯಾಸ್ ರಿಷ್ವದ್ ಎಂಬಾತ ಯುವತಿಯರನ್ನು ಬಲೆಗೆ ಬೀಳಿಸುತ್ತಿದ್ದ. ನಂತರ ಆಕೆಯನ್ನು ಹೊಟೇಲ್ ಗೆ ಬರುವಂತೆ ಒತ್ತಾಯಿಸಿ ಅಲ್ಲಿ ಈ ಯುವಕರ ಗುಂಪು ಆಕೆಯೊಂದಿಗೆ ಬಲವಂತದ ಸೆಕ್ಸ್ ಮಾಡಿ ವಿಡಿಯೋ ಮಾಡುತ್ತಿತ್ತು. ನಂತರ ಆಕೆಗೆ ವಿಡಿಯೋ ತೋರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿತ್ತು.

ಬಯಲಾಗಿದ್ದು ಹೇಗೆ?:

ಪೊಲ್ಲಾಚಿಯ ಯುವತಿಯೋರ್ವಳಿಗೆ ಫೋನ್ ಕರೆ ಮಾಡಿ ಬಸ್ ನಿಲ್ದಾಣದ ಬಳಿ ಬರುವಂತೆ ಹೇಳಿದ್ದ ರಿಷ್ವದ್, ಆಕೆಯನ್ನು ತನ್ನ ಗೆಳೆಯರೊಂದಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಕಾರಿನಲ್ಲೇ ಅಶ್ಲೀಲ ವಿಡಿಯೋ ಮಾಡಿದ್ದಾರೆ. ನಂತರ ಆಕೆಯನ್ನು ಅಜ್ಞಾತ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ನಂತರ ಸಂತ್ರಸ್ತ ಯುವತಿಗೆ ನಿರಂತರವಾಗಿ ಕರೆ ಮಾಡಿ ಹಣ ಕೊಡದಿದ್ದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇವರ ಕಿರುಕುಳಕ್ಕೆ ಬೇಸತ್ತ ಯುವತಿ ಮನೆಯಲ್ಲಿ ವಿಷಯ ತಿಳಿಸಿದ್ದಾಳೆ. ನಂತರ ಮನೆಯವರು ರಿಷ್ವದ್ ನನ್ನು ಪತ್ತೆ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಈ ಗುಂಪೊಇನ ಇತರ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಲವು ಭೀಭತ್ಸ ಸತ್ಯಗಳನ್ನು ಹೊರ ಹಾಕಿದ್ದು, ಈಗಾಗಲೇ ನಾಲ್ವರು ಅನ್ಯ ಯುವತಿಯರಿಗೂ ಇದೇ ರೀತಿ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ. ಅಲ್ಲದೇ ಆರೋಪಿಗಳು ಮತ್ತಷ್ಟು ಯುವತಿಯರನ್ನು ಖೆಡ್ಡಾಗೆ ಕೆಡವಲು ಪ್ಲ್ಯಾನ್ ಮಾಡಿದ್ದರು ಎಂಬ ಸತ್ಯವೂ ಬಯಲಾಗಿದೆ.

ಸಂತ್ರಸ್ತ ಯುವತಿಯ ಹೆಸರು ಹೇಳಿದ ಎಸ್‌ಪಿ:

ಈ ಮಧ್ಯೆ ಸಂತ್ರಸ್ತೆಯರ ಹೆಸರನ್ನು ಹೇಳುವಂತಿಲ್ಲ ಎಂಬ ಕಾನೂನು ಇದ್ದರೂ ಪೊಲ್ಲಾಚಿ ಎಸ್ ಪಿ ಪಾಂಡಿರಾಜನ್ ಬಹಿರಂಗಪಡಿಸಿದ್ದಾರೆ. ಇದು ಹೊಸ ವಿವಾದ ಸೃಷ್ಟಿಸಿದ್ದು, ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಅಲ್ಲದೇ ಈ ಖದೀಮರಿಂದ ಮೋಸಗೊಳಗಾದ ಬೇರೆ ಯುವತಿಯರು ದೂರು ನೀಡಬಾರದು ಎಂಬ ಉದ್ದೇಶದಿಂದಲೇ ಸಂತ್ರಸ್ತೆಯ ಹೆಸರು ಬಹಿರಂಗಗೊಳಿಸಲಾಗಿದೆ ಎಂದು ಡಿಎಂಕೆಯ ಕನಿಮೊಳಿ ಆರೋಪಿಸಿದ್ದಾರೆ.

ಇನ್ನು ಪೊಲ್ಲಾಚಿ ಸಂತ್ರಸ್ತೆಯ ಹೆಸರು ಬಹಿರಂಗಗೊಳಿಸಿರುವ ಎಸ್‌ಪಿ ಕ್ರಮವನ್ನು ನ್ಯಾಯಾಲಯ ಖಂಡಿಸಿದ್ದು, ಸಂತ್ರಸ್ತೆಗೆ ಪರಿಹಾರ ನೀಡಲು ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.

Comments are closed.