ನವದೆಹಲಿ: ಪುಲ್ವಾಮ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಭಾರತದಲ್ಲಿ ಹಲವಾರು ಉಗ್ರ ಕೃತ್ಯಗಳನ್ನು ಎಸಗಿದ್ದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಲಿವರ್ ಕ್ಯಾನ್ಸರ್ನಿಂದ ಇಸ್ಲಾಮಾಬಾದ್ನಲ್ಲಿ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಈತ ಸತ್ತಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಂದಿಲ್ಲ. ಈತನ ಕುಕೃತ್ಯದಿಂದಾಗಿ ಭಾರತ ಮತ್ತು ಪಾಕ್ ನಡುವೆ ಎರಡು ದಿನ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.
ಮಸೂದ್ ಅಜರ್ ಇಸ್ಲಾಮಾಬಾದ್ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ವರದಿಗಳು ಹೇಳುವ ಪ್ರಕಾರ ಈತ ಶನಿವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದಾಗ್ಯೂ ಪಾಕಿಸ್ತಾನ ಅಥವಾ ಜೈಶ್-ಇ-ಉಗ್ರ ಸಂಘಟನೆ ಈತನ ಸಾವನ್ನು ದೃಢಪಡಿಸಿಲ್ಲ.
ಮಾರ್ಚ್ 1ರಂದು ಸಿಎನ್ಎನ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ನೀಡಿದ ಸಂದರ್ಶನದಲ್ಲಿ ಮಸೂದ್ ಅಜರ್ ತಮ್ಮ ದೇಶದಲ್ಲಿಯೇ ಇರುವುದನ್ನು ಒಪ್ಪಿಕೊಂಡಿದ್ದರು. ಮತ್ತು ಆತ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದರು.
“ನನಗೆ ಬಂದ ಮಾಹಿತಿ ಪ್ರಕಾರ, ಮಸೂದ್ ಪಾಕಿಸ್ತಾನದಲ್ಲಿಯೇ ಇದ್ದಾನೆ. ಮತ್ತು ಆತ ಮನೆಯನ್ನು ಬಿಟ್ಟು ಹೋಗಲಾರದಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಭಾರತ ಸರ್ಕಾರ ಮಸೂದ್ ವಿರುದ್ಧ ಸರಿಯಾದ ಮತ್ತು ಬಲವಾದ ಸಾಕ್ಷ್ಯವನ್ನು ನೀಡಿದರೆ ಮಾತ್ರ ಪಾಕಿಸ್ತಾನ ಸರ್ಕಾರ ಮಸೂದ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ,” ಎಂದು ಸಂದರ್ಶನದಲ್ಲಿ ಖುರೇಷಿ ತಿಳಿಸಿದ್ದರು.
ಪುಲ್ವಾಮದಲ್ಲಿ ಬಾಂಬ್ ಸ್ಫೋಟದಿಂದಾಗಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದರು. ಈ ದಾಳಿಯ ಹೊಣೆಯನ್ನು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಆನಂತರ ಈ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವಂತೆ ಭಾರತ ವಿಶ್ವಸಂಸ್ಥೆಯಲ್ಲಿ ಪ್ರಯತ್ನಿಸಿತ್ತು.
ಯಾರು ಈ ಮಸೂದ್ ಅಜರ್?
ಮಸೂದ್ ಅಜರ್ 1968ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಬಹವಲ್ಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನ ಮಗನಾಗಿ ಜನಿಸಿದ್ದ.
ಅಜರ್ ಜಮ್ಮು ಮತ್ತು ಕಾಶ್ಮೀರವನ್ನು ಪೋರ್ಚುಗೀಸ್ ಪಾಸ್ಪೋರ್ಟ್ ಮೇಲೆ ಪ್ರವೇಶಿಸಿದ್ದ ಮತ್ತು ಇಲ್ಲಿ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದ. ಭಯೋತ್ಪಾದನಾ ಕೃತ್ಯ ನಡೆಸಿದ ಪ್ರಕರಣದಲ್ಲಿ ಈತನನ್ನು ಭಾರತ 1994ರಲ್ಲಿ ಬಂಧಿಸಿತ್ತು.
ಜೈಲಿನಲ್ಲಿದ್ದಾಗ ಈತ ಮತ್ತು ಇತರ ಉಗ್ರರು ಸುರಂಗದ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಸುರಂಗದೊಳಗೆ ಮೊದಲು ಮಸೂದ್ ಅಜರ್ ಮುಂದೆ ಹೋಗುತ್ತಿದ್ದ. ಆದರೆ, ಅವನ ಬೃಹತ್ ಮೈಕಟ್ಟಿನ ಕಾರಣದಿಂದ ಕಿರಿದಾದ ಸುರಂಗದಲ್ಲಿ ಸಿಲುಕಿಕೊಂಡ. ಆಗ ಆತನನ್ನು ಮತ್ತೆ ಬಂಧಿಸಿ ಕರೆತರಲಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.
ಅದಾದ ಐದು ವರ್ಷಗಳ ಕಾಲವೂ ಆತ ಜೈಲಿನಲ್ಲೇ ಇದ್ದ. ಆದರೆ, 1999ರಲ್ಲಿ ಮಸೂದ್ ಅಜರ್ನ ಸಹೋದರ ಇಬ್ರಾಯಿಂ ಅಥಾರ್ ಅಂದು ತಾಲಿಬಾನ್ ಆಡಳಿತವಿದ್ದ ಕಂದಾಹಾರ್ನಲ್ಲಿ ಭಾರತದ ವಿಮಾನವನ್ನು ಅಪಹರಣ ಮಾಡಿದ್ದ. ನಂತರ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು, ಮಸೂದ್ ಅಜರ್ ಸೇರಿ ಇತರ ಉಗ್ರರನ್ನು ಬಿಡುಗಡೆ ಮಾಡುವಂತೆ ಷರತ್ತು ವಿಧಿಸಿ, ತನ್ನ ಅಣ್ಣನನ್ನು ಭಾರತದ ಜೈಲಿನಿಂದ ಬಿಡಿಸಿಕೊಂಡಿದ್ದ.
Comments are closed.