ನವದೆಹಲಿ: ಪಾಕಿಸ್ತಾನ ಮತ್ತು ಭಾರತ ನಡುವಿನ ಉಂಟಾಗಿದ್ದ ಬಿಗುವಿನ ವಾತಾವರಣ ಮತ್ತು ನಂತರದಲ್ಲಿ ನಡೆದ ರಾಜಕೀಯ ಮೇಲಾಟಗಳ ನಡುವೆಯೇ ಭಾರತ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಏರ್ ಚೀಫ್ ಮಾರ್ಷಲ್ ಧನೋವಾ ಅವರು, ಬಾಲಾಕೋಟ್ ಏರ್ ಸ್ಟ್ರೈಕ್ನಲ್ಲಿ ಎಷ್ಟು ಮಂದಿ ಸತ್ತಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. “ಸತ್ತವರ ಸಂಖ್ಯೆಯನ್ನು ನಾವು ಲೆಕ್ಕ ಹಾಕುವುದಿಲ್ಲ,” ಎಂದು ಧನೋವಾ ಹೇಳಿದ್ದಾರೆ.
ತಮಿಳುನಾಡಿನ ಕೊಯಿಂಬತ್ತೂರಿನಲ್ಲಿ ಧನೋವಾ ಮಾತನಾಡಿದ್ದಾರೆ. ಜೈಷ್ – ಎ -ಮೊಹಮ್ಮದ್ ಸಂಘಟನೆಯ ಕ್ಯಾಂಪ್ ಎನ್ನಲಾದ ಬಾಲಾಕೋಟ್ ಪ್ರದೇಶದ ಮೇಲೆ ಭಾರತ ವಾಯುಸೇನೆ ಫೆಬ್ರವರಿ 26ನೇ ತಾರೀಖು ಮುಂಜಾನೆ ದಾಳಿ ಮಾಡಿತ್ತು. ದಾಳಿಯಲ್ಲಿ ಉಗ್ರರು ಮೃತಪಟ್ಟಿದ್ದಾರೆ ಎಂದು ಭಾರತ ಹೇಳಿಕೊಂಡಿದ್ದರೆ, ಯಾರಿಗೂ ಏನೂ ಆಗಿಲ್ಲ ಎಂದು ಪಾಕಿಸ್ತಾನ ಸಮಜಾಯಿಷಿ ನೀಡಿತ್ತು. ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವ ಸಾಧ್ಯತೆಯನ್ನು ಧನೋವಾ ಪತ್ರಿಕಾಗೋಷ್ಠಿ ಸೃಷ್ಟಿಸಿತ್ತಾದರೂ ತಾರ್ಕಿಕ ಅಂತ್ಯ ನೀಡಿಲ್ಲ.
ಬಾಲಾಕೋಟ್ನಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿಯನ್ನು ಸರ್ಕಾರ ನೀಡಲಿದೆ ಎಂದು ಧನೋವಾ ಹೇಳಿದ್ದಾರೆ.
“ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸ್ಥಿತಿಯಲ್ಲಿ ವಾಯುಸೇನೆ ಇಲ್ಲ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ. ನಾವು ಮೃತದೇಹಗಳನ್ನು ಲೆಕ್ಕಹಾಕುವುದಿಲ್ಲ. ನಮ್ಮ ಟಾರ್ಗೆಟ್ ಮುಟ್ಟಲು ನಮಗೆ ಸಾಧ್ಯವಾಯಿತಾ ಇಲ್ಲವಾ ಎಂಬುದಷ್ಟೇ ನಮಗೆ ಮುಖ್ಯ,” ಎಂದು ಧನೋವಾ ಹೇಳಿದ್ದಾರೆ.
ಫೆಬ್ರವರಿ 14ರಂದು ಜೈಷ್ ಉಗ್ರ ಸಂಘಟನೆಯ ಸದಸ್ಯ ಆದಿಲ್ ಅಹ್ಮದ್ ದಾರ್ ಎಂಬ ಯುವಕ ಪುಲ್ವಾಮದಲ್ಲಿ ಸಿಆರ್ಪಿಎಫ್ ವಾಹನಗಳ ಮೇಲೆ ಆತ್ಮಾಹುತಿ ದಾಳಿ ಮಾಡಿದ್ದ. ಇದರ ಪರಿಣಾಮದಿಂದ ಭಾರತದ 40 ಸಿಆರ್ಪಿಎಫ್ ಸೈನಿಕರು ಸಾವನ್ನಪ್ಪಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26ರಂದು ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ವೈಮಾನಿಕ ದಾಳಿ ಮಾಡಿತ್ತು. ಆದರೆ ದಾಳಿಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.
Comments are closed.