ರಾಷ್ಟ್ರೀಯ

ಕುಂಭ ಮೇಳದಲ್ಲಿ ಸ್ಚಚ್ಛ ಕಾರ್ಮಿಕರ ಪಾದ ತೊಳೆದ ಮೋದಿ

Pinterest LinkedIn Tumblr


ನವದೆಹಲಿ: ಕೋಟ್ಯಂತರ ಜನರು ಕುಂಭ ಮೇಳಕ್ಕೆ ಭೇಟಿ ನೀಡಿದಾಗ ಗಂಗಾ ನದಿ ಮಲಿನಗೊಳ್ಳುವುದು ಸಹಜ. ಆದರೆ, ಈ ಬಾರಿ ಗಂಗೆ ಹೆಚ್ಚು ಮಲಿನಗೊಳ್ಳದೆ ಪರಿಶುದ್ಧವಾಗಿಯೇ ಇದ್ದಳು. ಇದಕ್ಕೆ ಕಾರಣ ಸ್ವಚ್ಛ ಕಾರ್ಮಿಕರು. ಇವತ್ತು ಪ್ರಧಾನಿ ಮೋದಿ ಕುಂಭ ಮೇಳಕ್ಕೆ ಹೋದಾಗ ಸ್ವಚ್ಛ ಕಾರ್ಮಿಕರ ಪಾದವನ್ನು ತೊಳೆದು ಗೌರವಿಸಿದ ಘಟನೆ ನಡೆಯಿತು. ಕುಂಭ ಮೇಳ ನಡೆಯುವ ಪ್ರಯಾಗ್ ರಾಜ್(ಅಲಹಾಬಾದ್) ನಗರದಲ್ಲಿ ನಡೆದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಅವರು ಸ್ವಚ್ಛ ಕಾರ್ಮಿಕರ ಶ್ರಮವನ್ನು ಶ್ಲಾಘಿಸಿದರು.

“ಇವರು ಬೆಳಗ್ಗೆಯಿಂದ ರಾತ್ರಿಯವರೆಗೂ ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಇವರ ನಿಸ್ವಾರ್ಥ ಕೆಲಸಗಳ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ” ಎಂದು ಮೋದಿ ಹೊಗಳಿದರು.

ಗಂಗಾ ಆರತಿ ಬೆಳಗಿದ ಪ್ರಧಾನಿ ಮೋದಿ ಅವರು ನಂತರ ಎಲ್ಲರಿಗೂ ಅಚ್ಚರಿಯಾಗುವಂತೆ ಸ್ವಚ್ಛ ಕಾರ್ಮಿಕರತ್ತ ತಿರುಗಿ ಅವರ ಪಾದವನ್ನು ನೀರಿನಿಂದ ತೊಳೆದರು. ಅಲ್ಲಿದ್ದ ಕಾರ್ಮಿಕರ ಆನಂದಕ್ಕೆ ಪಾರವೇ ಇರಲಿಲ್ಲ. ಅದೊಂದು ಅಪೂರ್ವ ಕ್ಷಣವಾಗಿತ್ತು. ಪ್ರಧಾನಿಯಿಂದ ಪಾದತೊಳೆಸಿಕೊಂಡವರಲ್ಲಿ ಒಬ್ಬ ಮಹಿಳೆಯೂ ಇದ್ದರು. “ಇದು ಕನಸೋ ನನಸೋ ಗೊತ್ತಾಗುತ್ತಿಲ್ಲ. ಇದನ್ನು ಎಲ್ಲರ ಹತ್ತಿರ ಹೇಳಿಕೊಳ್ಳುತ್ತೇನೆ. ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಲು ಯೋಗ್ಯರಾಗಿದ್ದಾರೆ,” ಎಂದು ಒಬ್ಬ ಕಾರ್ಮಿಕ ಖುಷಿಯಿಂದ ಹೇಳಿಕೊಂಡಿದ್ಧಾನೆ.

ಸ್ವಚ್ಛ ಕಾರ್ಮಿಕ ಪಾದ ತೊಳೆದ ಘಟನೆ ತನ್ನ ಪಾಲಿಗೆ ಅವಿಸ್ಮರಣೀಯವಾದುದು ಎಂದು ಮೋದಿ ಕೂಡ ಹೇಳಿಕೊಂಡಿದ್ಧಾರೆ. ಬಳಿಕ ಕಾರ್ಯಕ್ರಮದಲ್ಲಿ ಮಾತು ಮುಂದುವರಿಸಿದ ಮೋದಿ, ಗಂಗಾ ನದಿ ಸ್ವಚ್ಛತೆಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು.

“ಇಷ್ಟು ಪರಿಶುದ್ಧ ಗಂಗೆಯನ್ನು ನಾನು ಹಿಂದೆ ನೋಡಿರಲಿಲ್ಲ. ಇದೆಲ್ಲಾ ಸಾಧ್ಯವಾಗಿದ್ದು ನಮಾಮಿ ಗಂಗೆ ಯೋಜನೆಯಿಂದ. ಸ್ವಚ್ಛತೆಯ ವಿಚಾರದಲ್ಲಿ ಪ್ರಯಾಗರಾಜ್ ನಗರವು ಇಡೀ ದೇಶಕ್ಕೇ ಒಂದು ಸ್ಫೂರ್ತಿಯಾಗಿದೆ. ಈ ಪ್ರದೇಶವು ಆದ್ಯಾತ್ಮಿಕತೆ, ನಂಬಿಕೆ ಮತ್ತು ಆಧುನಿಕತೆಯ ಜಾಗವಾಗಬೇಕೆಂದು ನಾನು ಕಳೆದ ವರ್ಷ ಹೇಳಿದ್ದೆ. ಆ ಕನಸು ಈಗ ಸಾಕಾರಗೊಂಡಿದೆ,” ಎಂದು ಮೋದಿ ಹರ್ಷಪಟ್ಟರು.

Comments are closed.