ನವದೆಹಲಿ: ಪುಲ್ವಾಮ ಉಗ್ರ ದಾಳಿ ಘಟನೆ ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಭದ್ರತಾ ಪಡೆಗಳು ಇವತ್ತು ಮಧ್ಯಾಹ್ನ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರಗಾಮಿಗಳನ್ನು ಹತ್ಯೆಗೈದಿದ್ದಾರೆ. ಕುಲಗಮ್ನಲ್ಲಿ ನಡೆದ ಈ ಎನ್ಕೌಂಟರ್ನಲ್ಲಿ ಒಬ್ಬ ಪೊಲೀಸ್ ಪೊಲೀಸ್ ಅಧಿಕಾರಿ ಹಾಗೂ ಒಬ್ಬ ಯೋಧ ಕೂಡ ಬಲಿಯಾಗಿದ್ದಾರೆ. ಇತರ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಮೂವರು ಸ್ಥಳೀಯ ನಾಗರಿಕರೂ ಗಾಯಗೊಂಡಿದ್ದಾರೆ.
ಕುಲಗಾಮ್ನಲ್ಲಿ ಉಗ್ರಗಾಮಿಗಳು ನೆಲೆಯೂರಿದ್ದಾರೆಂಬ ಮಾಹಿತಿ ಆಧರಿಸಿ ಸಿಆರ್ಪಿಎಫ್ ಮತ್ತು ವಿಶೇಷ ಕಾರ್ಯಾಚರಣೆ ಪಡೆ(ಎಸ್ಓಜಿ) ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಟುರಿಗಾಮ್ ಗ್ರಾಮದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ಎಸಗಿದ್ದಾರೆ. ಆಗ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದ್ದಾರೆ. ಈ ಗುಂಡಿನ ಕಾಳಗದಲ್ಲಿ 3 ಜೈಷ್ ಉಗ್ರರು ಸೇರಿ ಐವರು ಸಾವನ್ನಪ್ಪಿದ್ದಾರೆ.
ಜಮ್ಮುವಿನ ದೋಡಾ ಜಿಲ್ಲೆಯ 2011ರ ಬ್ಯಾಚ್ನ ಐಪಿಎಸ್ ಅಧಿಕಾರಿ ಅಮನ್ ಠಾಕೂರ್ ಅವರು ತಲೆಗೆ ಗುಂಡು ತಗುಲಿ ಬಲಿದಾನ ಆಯಿತು. ಜೈಷ್ ಉಗ್ರಗಾಮಿಗಳ ನಿಗ್ರಹ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಅಧಿಕಾರಿಗಳಲ್ಲಿ ಠಾಕೂರ್ ಕೂಡ ಒಬ್ಬರು. ಕುಲಗಮ್ನ ಡಿವೈಎಸ್ಪಿಯಾಗಿ ಇವರು ತೋರಿದ ಎದೆಗಾರಿಕೆಯನ್ನು ಪರಿಗಣಿಸಿ ಇತ್ತೀಚೆಗಷ್ಟೇ ಡಿಜಿಪಿ ಅವರು ಸನ್ಮಾನ ಮಾಡಿದ್ದರು. ಇನ್ನು, ಇವತ್ತು ನಡೆದ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಇನ್ನೊಬ್ಬ ಯೋಧರನ್ನು ಸಿಆರ್ಪಿಎಫ್ನ ರಣವೀರ್ ಸೋಮವೇರ್ ಎಂದು ಗುರುತಿಸಲಾಗಿದೆ.
ಫೆ. 14ರಂದು ಪುಲ್ವಾಮದಲ್ಲಿ ಉಗ್ರನ ಆತ್ಮಾಹುತಿ ದಾಳಿ ಘಟನೆ ನಡೆದ ನಂತರ ಕಾಶ್ಮೀರದಲ್ಲಿ ನಡೆದ 2ನೇ ಪ್ರಮುಖ ಎನ್ಕೌಂಟರ್ ಇದಾಗಿದೆ. ಕೆಲ ದಿನಗಳ ಹಿಂದೆ ದಕ್ಷಿಣ ಕಾಶ್ಮೀರದಲ್ಲೇ ನಡೆದ ಎನ್ಕೌಂಟರ್ನಲ್ಲಿ ಮೂವರು ಜೈಷ್ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದವು. ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜೈಷ್ ಸಂಘಟನೆಯ ಪ್ರಮುಖ ಕಮಾಂಡರ್ ಎನ್ನಲಾದ ಇಬ್ಬರು ಉಗ್ರರಿಗೂ ಮುಕ್ತಿ ಕೊಡಲಾಗಿತ್ತು.
Comments are closed.