ರಾಷ್ಟ್ರೀಯ

1999ರಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆ ನಾಯಕ ಮಸೂದ್ ಅಝರ್ ನನ್ನು ಬಿಟ್ಟದ್ದು ಯಾರು: ಸಿಧು ಮತ್ತೆ ವಿವಾದ

Pinterest LinkedIn Tumblr


ನವದೆಹಲಿ: ಪುಲ್ವಾಮಾ ಭಯೋತ್ಪಾದನಾ ದಾಳಿಯ ಬಗ್ಗೆ ಇತ್ತೀಚೆಗೆ ವಿವಾದಾತ್ಮಕವಾಗಿ ಪ್ರತಿಕ್ರಯಿಸಿ ದೇಶಾದ್ಯಂತ ಸುದ್ದಿಯಾಗಿದ್ದ ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನನವಜೋತ್ ಸಿಂಗ್ ಸಿಧು ಮತ್ತೆ ತಮ್ಮ “ಹೇಳಿಕೆ” ಮೂಲಕವೇ ಸುದ್ದಿಯಾಗಿದ್ದಾರೆ. 1999 ರ ಕಂದಹಾರ್ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಸಿಧು “ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ನನ್ನು 1999ರಲ್ಲಿ ಬಿಡುಗಡೆಗೊಳಿಸಿದವರು ಯಾರು ಎಂದು ನಾನು ತಿಳಿಯಬಯಸುತ್ತೇನೆ” ಎಂದಿದ್ದಾರೆ.
“1999ರ ಕಂದಹಾರ್ ಘಟನೆಯಲ್ಲಿ ಯಾರು ಪಾಲ್ಗೊಂಡಿದ್ದಾರೆಂದು ನಾನು ಕೇಳಬಯಸುತ್ತೇನೆ, ನಮ್ಮ ಸೈನಿಕರ ಸಾವಿಗೆ ಯಾರು ಜವಾಬ್ದಾರರು?ನಮ್ಮ ಹೋರಾಟ ಉಗ್ರವಾದದ ವಿರುದ್ಧವಾಗಿದೆ.ಆದರೆ ಅದಕ್ಕೆ ಸೈನಿಕರೇಕೆ ಸಾಯಬೇಕು?ಇದಕ್ಕೇಕೆ ಶಾಶ್ವತ ಪರಿಹಾರ ಸಾಧ್ಯವಿಲ್ಲ? ” ಅವರು ಕೇಳಿದ್ದಾರೆ.
ಇಂದು ವರದಿಗಾರರೊಂದಿಗೆ ಮಾತನಾಡಿದ ಸಿಧು ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
1999ರಲ್ಲಿ ಐಸಿ 814 ವಿಮಾನವನ್ನು ಅಪಹರಿಸಿದ ಉಗ್ರರು ಅದನ್ನು ಕಂದಹಾರ್ ಗೆ ತೆಗೆದುಕೊಂಡು ಹೋಗಿದ್ದರು.ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ಆಗ ಭಾರತದ ಜೈಲಿನಲ್ಲಿದ್ದ ಮೂವರು ಮೋಸ್ಟ್ ವಾಂಟೆಡ್ ಉಗ್ರರನ್ನು ಬಿಡುಗಡೆಗೊಳಿಸಿ ಅಪಹೃತ ವಿಮಾನದಲ್ಲಿದ್ದ 180 ಜನ ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವ ರಕ್ಷಿಸಿತ್ತು. ಆ ವೇಳೆ ಬಿಡುಗಡೆಯಾಗಿದ್ದ ಉಗ್ರರ ಪೈಕಿ ಮೊನ್ನೆ ಗುರುವಾರ ಪುಲ್ವಾಮಾ ದಾಳಿ ನಡೆಸಿದ್ದ ಜೈಷ್-ಇ-ಮೊಹಮ್ಮದ್ ಸಂಘಟನೆ ನಾಯಕ ಮಸೂದ್ ಅಝರ್ ಸಹ ಒಬ್ಬನಾಗಿದ್ದ.

Comments are closed.