ಜೈಶ್-ಎ-ಮೊಹಮ್ಮದ್ ಅಥವಾ ಜೆಇಎಂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾಗಿದೆ. ಇದರ ಮುಖ್ಯ ಧ್ಯೇಯ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವುದು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವುದು. 2000ದಿಂದ ಅಸ್ತಿತ್ವಕ್ಕೆ ಬಂದ ಈ ಉಗ್ರ ಸಂಘಟನೆ ಈವರೆಗೂ ಜಮು-ಕಾಶ್ಮೀರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ದಾಳಿ ನಡೆಸಿದೆ. ಭಾರತದ ಹೆಬ್ಬಾಗಿಲಾಗಿರುವ ಕಾಶ್ಮೀರದಲ್ಲಿ ಮುಸ್ಲಿಮರು ವಿಮೋಚನೆ ಹೊಂದಬೇಕು ಎಂಬುದು ಈ ಸಂಘಟನೆಯ ವಾದ. ಹೀಗೆ ವಿಮೋಚನೆ ದೊರೆತ ನಂತರ ತನ್ನ ಸ್ವಂತ ಸೇನೆಯನ್ನು ಹೊಂದಿ ದೇಶದ ಇತರೆ ಭಾಗಗಳಲ್ಲಿ ಜಿಹಾದ್ (ಯುದ್ಧ) ಸಾರುವುದು ಈ ಸಂಘಟನೆಯ ಉದ್ದೇಶವಾಗಿದೆ.
ದೇಶದಲ್ಲಿ ಈವರೆಗೂ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹಲವು ಪೈಶಾಚಿಕ ಕೃತ್ಯಗಳನ್ನು ಎಸಗಿ, ನೂರಾರು ಅಮಾಯಕ ಜನರನ್ನು ಬಲಿ ಪಡೆದಿದೆ. 2001- ಭಾರತದ ಸಂಸತ್ ಭವನದ ಮೇಲೆ ದಾಳಿ, 2016 ಸೆಪ್ಟೆಂಬರ್ ಪಠಾಣ್ಕೋಟ್ ಮೇಲೆ ದಾಳಿ ಹಾಗೂ 2016 ಉರಿ ದಾಳಿ ಸೇರಿ ಈವರೆಗೂ ದೇಶದಲ್ಲಿ ಹಲವು ಪೈಶಾಚಿಕ ದಾಳಿಯನ್ನು ಈ ಉಗ್ರ ಸಂಘಟನೆ ನಡೆಸಿದೆ.
ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ತಾಲಿಬಾನ್ ನೊಂದಿಗೆ ಹೆಚ್ಚು ನಿಕಟ ಸಂಪರ್ಕ ಹೊಂದಿದೆ. ಅಘ್ಘಾನಿಸ್ತಾನದಲ್ಲಿ ಅಲ್ ಖೈದಾ ಜೊತೆಗೂ ಸಂಪರ್ಕ ಹೊಂದಿದೆ.
2002ರಲ್ಲಿ ಪಾಕಿಸ್ತಾನ ಈ ಉಗ್ರ ಸಂಘಟನೆಯನ್ನು ನಿಷೇಧಿಸಿತ್ತು. ಆದರೂ ಬೇರೆಯ ಹೆಸರಿನಲ್ಲಿ ಎಲ್ಲ ಸವಲತ್ತನ್ನು ಸರ್ಕಾರದಿಂದ ಒದಗಿಸಲಾಗಿತ್ತು ಎಂದು ಹಲವು ವರದಿಗಳು ಹೇಳಿವೆ.
ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸೇರಿ ಜೆಎಎಂ ಭಾರತದ ಸಂಸತ್ ಭವನದ ಮೇಲೆ 2001ರ ಡಿಸೆಂಬರ್ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಐದು ಮಂದಿ ದೆಹಲಿ ಪೊಲೀಸ್ ಸಿಬ್ಬಂದಿ, ಸಿಆರ್ಪಿಎಫ್ ಓರ್ವ ಮಹಿಳಾ ಸಿಬ್ಬಂದಿ, ಸಂಸತ್ ಭವನದ ಇಬ್ಬರು ಸಿಬ್ಬಂದಿ ಹಾಗೂ ಓರ್ವ ಪತ್ರಕರ್ತ ಸೇರಿ ಒಂಭತ್ತು ಮಂದಿ ಬಲಿಯಾಗಿದ್ದರು. ದಾಳಿ ವೇಳೆ ಐವರು ಉಗ್ರರನ್ನು ಸದೆಬಡಿಯಲಾಗಿತ್ತು.
2016ರಂದು ಇದೇ ಉಗ್ರ ಸಂಘಟನೆ ಪಠಾಣ್ಕೋಟ್ ಸೈನಿಕರ ಏರ್ಬೇಸ್ ಲಾಂಚ್ ಪ್ಯಾಡ್ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಸ್ಥಳಕ್ಕೆ ಭೇಟಿ ನೀಡಿದ್ದ ಒಂದು ವಾರದ ನಂತರ ಈ ದಾಳಿ ನಡೆದಿತ್ತು.
2016ರಂದು ನಡೆದ ಉರಿ ದಾಳಿಯ ಹೊಣೆಯನ್ನು ಇದೇ ಜೈಶ್-ಎ-ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿದೆ. ಉರಿ ದಾಳಿ ಕಳೆದ ಎರಡು ದಶಕಗಳಲ್ಲೇ ನಡೆದ ಅತ್ಯಂತ ಭೀಕರ ದಾಳಿಯಾಗಿತ್ತು. ಈ ಘಟನೆಯಲ್ಲಿ 19 ಮಂದಿ ಸೈನಿಕರು ಅಸುನೀಗಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಈ ಸಂಘಟನೆ ಇಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಪಹರಣ ಮಾಡಲು 2007ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆ ರೂಪಿಸಿತ್ತು. ಇವರನ್ನು ಅಪಹರಣ ಮಾಡಿ, ಭಾರತದಲ್ಲಿ ಸೆರೆಮನೆಯಲ್ಲಿರುವ 42 ಉಗ್ರರನ್ನು ಬಿಡಿಸಿಕೊಳ್ಳುವ ಸಂಚು ರೂಪಿಸಿತ್ತು. ಆದರೆ, ಈ ಉಪಾಯ ಇಂಟಲಿಜೆನ್ಸಿಯಿಂದ ವಿಫಲವಾಯಿತು.
Comments are closed.