ರಾಷ್ಟ್ರೀಯ

ಸತ್ತಿರುವ ಮಗ ಬದುಕಿ ಬರುತ್ತಾನೆಂದು 38 ದಿನ ಸಮಾಧಿ ಬಳಿಯೇ ಇದ್ದ!

Pinterest LinkedIn Tumblr


ನವದೆಹಲಿ: ಮಗನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಮಂತ್ರವಾದಿ ಮಾತು ನಂಬಿ 7 ಲಕ್ಷ ಹಣವನ್ನೂ ಕಳೆದುಕೊಂಡಿದ್ದಲ್ಲದೆ, 38 ದಿನ ಗೋರಿವಾಸ ಅನುಭವಿಸಬೇಕಾದ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ನೆಲ್ಲೋರ್ ಜಿಲ್ಲೆಯ ಪೆಟ್ಲೂರು ಗ್ರಾಮದ 56 ವರ್ಷದ ತುಪ್ಪಕುಲ ರಾಮು ಅವರು ಮಂತ್ರವಾದಿಯಿಂದ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಮಗ ಬದುಕಿ ಬರುತ್ತಾನೆಂಬ ಮಂತ್ರವಾದಿ ಮಾತು ನಂಬಿ 38 ದಿನಗಳಿಂದ ಸಮಾಧಿ ಬಳಿಯೇ ಇದ್ದ ರಾಮು ಅವರ ಮನವೊಲಿಸಿ ಮನೆಗೆ ಕರೆತರುವಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದರು.

ರಾಮು ಅವರ 26 ವರ್ಷ ಮಗ ಟಿ. ಶ್ರೀನಿವಾಸುಲು ಇತ್ತೀಚೆಗಷ್ಟೇ ಹಂದಿಜ್ವರಕ್ಕೆ ಬಲಿಯಾಗಿ ತಿರುಪತಿಯಲ್ಲಿ ಸಾವನ್ನಪ್ಪಿದ್ದರು. 2014ರಿಂದಲೂ ಕುವೇತ್​ನಲ್ಲಿದ್ದ ಇವರು 3 ತಿಂಗಳ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದರು. ದುರದೃಷ್ಟವಶಾತ್ ಮಹಾ ರೋಗ ಬಡಿದು ಮರಣ ಹೊಂದಿದರು. ಮಗನ ಸಾವಿನ ಶಾಕ್​ನಲ್ಲಿದ್ದ ತುಪ್ಪಕುಲ ರಾಮು ಅವರಿಗೆ ಮಂತ್ರವಾದಿಯೊಬ್ಬ ಸಿಕ್ಕು, ನಿಮ್ಮ ಮಗನ ಸಮಾಧಿ ಬಳಿ 41 ದಿನವಿದ್ದರೆ ಆತ ಬದುಕಿ ಬರುತ್ತಾನೆ ಎಂದು ನಂಬಿಸುತ್ತಾನೆ. ಮಗ ಬದುಕುತ್ತಾನೆಂದರೆ ಯಾರಿಗೆ ತಾನೆ ಖುಷಿಯಾಗುವುದಿಲ್ಲ…? ಅದೇ ಖುಷಿಯಲ್ಲಿ ರಾಮು ಅವರು ಮಂತ್ರವಾದಿಗೆ 7 ಲಕ್ಷ ರೂಪಾಯಿ ಕೂಡ ಕೊಡುತ್ತಾರೆ. ನಂತರ ಮಗನ ಸಮಾಧಿ ಬಳಿ 41 ದಿನ ಇರಲು ಹೋಗುತ್ತಾರೆ. ಈ ಮಾಹಿತಿ ಪೊಲೀಸರಿಗೆ ಗೊತ್ತಾಗುವಷ್ಟರಲ್ಲಿ 38 ದಿನ ಗತಿಸಿರುತ್ತದೆ. ಕೂಡಲೇ ಸ್ಥಳಕ್ಕೆ ಹೋಗುವ ಪೊಲೀಸರು, ರಾಮು ಅವರಿಗೆ ತಿಳಿವಳಿಕೆ ನೀಡಿ ವಾಪಸ್ ಬರುವಂತೆ ಮನವೊಲಿಸುತ್ತಾರೆ.

ತುಪ್ಪಕುಲ ರಾಮು ಅವರು ಪೊಲೀಸರ ಬಲವಂತಕ್ಕೆ ವಾಪಸ್ ಬಂದರೂ ಅವರ ಮನಸಲ್ಲಿ ಮಂತ್ರವಾದಿ ಕಟ್ಟಿದ ಕನಸು ಹಾಗೆಯೇ ಹಚ್ಚಹಸುರಾಗಿದೆ. ಮಗ ಮತ್ತೆ ಜೀವಂತವಾಗಿ ಬರುತ್ತಾನೆಂದು ಈಗಲೂ ನಂಬಿ ಕೂತಿದ್ದಾರೆ. ಇದೇ ನಂಬಿಕೆಯಲ್ಲಿ ರಾಮು ಅವರು ಮಂತ್ರವಾದಿ ವಿರುದ್ಧ ಯಾವುದೇ ದೂರು ನೀಡಿಲ್ಲ. ಹೀಗಾಗಿ, ಪೊಲೀಸರೂ ಕೂಡ ಮಂತ್ರವಾದಿ ವಿರುದ್ಧ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿ ಪ್ರಕಟವಾಗಿದೆ.

Comments are closed.