ನೈನಿತಾಲ್ : ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಆರ್ಎಸ್ಎಸ್ ಒತ್ತಾಯಿಸುತ್ತಿರುವ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಈ ಸಂಘಟನೆ ಕಾನೂನಿಗೆ ಅಗೌರವ ನೀಡುತ್ತಿದೆ. ನಮ್ಮ ಪಕ್ಷ ಆಡಳಿತಕ್ಕೆ ಬಂದರೆ ಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದೆ.
ಕಾಂಗ್ರೆಸ್ ನಾಯಕ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಈ ರೀತಿ ಹೇಳಿಕೆ ನೀಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. “ಬಿಜೆಪಿ ಮಿತಿ ಮೀರಿ ವರ್ತಿಸುತ್ತಿದೆ. ಯಾರು ಕಾನೂನನ್ನು ಮುರಿಯುತ್ತಾರೋ ಅವರು ಮರ್ಯಾದಾ ಪುರುಷೋತ್ತಮ ರಾಮನ ಭಕ್ತನಾಗಲು ಸಾಧ್ಯವಿಲ್ಲ. ನಾವು ಕಾನೂನಿಗೆ ಗೌರವ ನೀಡುತ್ತೇವೆ. ಕಾಂಗ್ರೆಸ್ ಅಧಿಕಾರ ಬಂದಮೇಲೆ ರಾಮ ಮಂದಿರ ನಿರ್ಮಾಣವಾಗಲಿದೆ,” ಎಂದು ಹೇಳುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಮಾತ್ರ ಅರ್ಹ ಎಂದು ಸೂಚ್ಯವಾಗಿ ಹೇಳಿದ್ದಾರೆ.
2025ರ ಒಳಗೆ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಆರ್ಎಸ್ಎಸ್ನ ಎರಡನೇ ಮುಖ್ಯಸ್ಥ ಭಯ್ಯಾಜಿ ಜೋಶಿ ಶುಕ್ರವಾರ ಹೇಳಿಕೊಂಡಿದ್ದರು. ಅಲ್ಲದೆ, ಈ ಕ್ರಮದಿಂದ ದೇಶಕ್ಕೆ ಮುಂದಿನ 150 ವರ್ಷ ಒಳ್ಳೆಯದಾಗುತ್ತದೆ ಎಂದು ಹೇಳಿಕೊಂಡಿದ್ದರು. “1952ರಲ್ಲಿ ಸೋಮನಾಥ ದೇವಾಲಯ ನಿರ್ಮಾಣ ಮಾಡಲಾಯಿತು. ಅದಾದ ನಂತರ ದೇಶ ಅಭಿವೃದ್ಧಿ ವೇಗ ಪಡೆದುಕೊಂಡಿತ್ತು. 2025ರಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ ನಂತರ ದೇಶಕ್ಕೆ ಒಳಿತಾಗಲಿದೆ. ನಂತರ 150 ವರ್ಷಗಳ ಕಾಲ ದೇಶಕ್ಕೆ ಯಾವುದೇ ಕೇಡು ಎದುರಾಗದು,” ಎಂದಿದ್ದರು ಭಯ್ಯಾಜಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹರೀಶ್ ರಾವತ್ ಈ ಹೇಳಿಕೆ ನೀಡಿದ್ದಾರೆ.
ರಾಮ ಮಂದಿರ ವಿವಾದ ಸದ್ಯ ಸುಪ್ರೀಂಕೋರ್ಟ್ನಲ್ಲಿದೆ. ಈಗಾಗಲೇ ನ್ಯಾಯಾಲಯ ಐದು ಜನರ ಬೆಂಚ್ ಕೂಡ ನಿರ್ಮಾಣ ಮಾಡಿದೆ. ಆದರೆ, ಈ ಸಾಂವಿಧಾನಿಕ ಪೀಠದಿಂದ ನ್ಯಾಯಮೂರ್ತಿ ಉದಯ್ ಲಲಿತ್ ಹಿಂದೆ ಸರಿದಿದ್ದರಿಂದ ವಿಚಾರಣೆಯನ್ನು ಜ.29ಕ್ಕೆ ಮುಂದೂಡಲಾಗಿತ್ತು.
Comments are closed.