ರಾಷ್ಟ್ರೀಯ

34 ವರ್ಷಗಳಲ್ಲಿ ಭಾರತ ಬಂದ್ ಮಾಡಿ ಸರ್ವನಾಶ ಮಾಡಿದ್ದು ಸಾಕು: ಮಮತಾ ಬ್ಯಾನರ್ಜಿ

Pinterest LinkedIn Tumblr


ಕೋಲ್ಕೊತ: ಕಾರ್ಮಿಕ ಸಂಘಟನೆಗಳು ನೀಡಿರುವ ಬಂದ್‌ ಕರೆಯಿಂದ ರಾಜ್ಯದಲ್ಲಿ ಯಾವುದೇ ಪರಿಣಾಮವಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರ ಸರಕಾರದ ‘ಜನ ವಿರೋಧಿ ನೀತಿ’ಗಳ ವಿರುದ್ಧ 10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು 48 ಗಂಟೆಗಳ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಯಾವುದೇ ಬಂದ್‌ಗೂ ಬೆಂಬಲ ನೀಡದಿರಲು ನಾವು ನಿರ್ಧರಿಸಿದ್ದೇವೆ. ಬಂದ್ ನಡೆಸಿದ್ದು ಸಾಕು. 34 ವರ್ಷಗಳ ಕಾಲ ಅವರು (ಎಡಪಕ್ಷಗಳು) ಬಂದ್‌ಗಳನ್ನು ನಡೆಸಿ ರಾಜ್ಯವನ್ನು ಸರ್ವನಾಶಮಾಡಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ಬಂದ್ ನಡೆಯುವುದಿಲ್ಲ’ ಎಂದು ಮಮತಾ ವಿಧಾನಸಭಾ ಕಾರ್ಯಾಲಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮಂಗಳವಾರ ಮತ್ತು ಬುಧವಾರ ರಾಜ್ಯ ಸರಕಾರಿ ನೌಕರರು ಯಾವುದೇ ರಜೆ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಕಳೆದ ವಾರವೇ ರಾಜ್ಯ ಸರಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿತ್ತು.

ಕೋಲ್ಕೊತ ಮಹಾನಗರದಲ್ಲಿ ಸೋಮವಾರದಿಂದ 500 ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಮಮತಾ ಸರಕಾರ ಆದೇಶಿಸಿದೆ. ಯಾವುದೇ ಅನಪೇಕ್ಷಿತ ಘಟನೆಗಳನ್ನು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಖಾಸಗಿ ಬಸ್ ಮಾಲೀಕರು ಹಾಗೂ ಟ್ಯಾಕ್ಸಿ ಸಂಘಟನೆಗಳು, ಆಪ್ ಆಧರಿತ ಕ್ಯಾಬ್‌ಗಳು ಎಂದಿನಂತೆ ಸಂಚಾರ ನಡೆಸಲು ನಿರ್ಧರಿಸಿದ್ದಾರೆ.

ಸಾಮಾನ್ಯ ಜನಜೀವನಕ್ಕೆ ಧಕ್ಕೆ ತರಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಆದೇಶಿಸಿದೆ. ವಾಹನ ಸಂಚಾರಕ್ಕೆ ತಡೆಯೊಡ್ಡುವುದಾಗಲಿ, ಕಚೇರಿಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದಾಗಲಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Comments are closed.