ಮಂಡ್ಸೌರ್: ಮಧ್ಯಪ್ರದೇಶದಲ್ಲಿ ಕಮಲನಾಥ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರೈತನೋರ್ವ ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ಮಂಡ್ಸೌರ್ ಮಂಡಿಗೆ ತಾನು ಬೆಳೆದ ಈರುಳ್ಳಿ ಮಾರಲು ಹೋಗಿದ್ದ ರೈತನೋರ್ವ ಈರುಳ್ಳಿಯ ಬೆಲೆಯ ಕುಸಿತದ ಆಘಾತ ತಾಳಲಾರದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಬೆರುಲಾ ಮಾಳವಿಯಾ ಎಂಬ ರೈತ ಮಂಡ್ಸೌರ್ನ ಮಂಡಿಗೆ ತನ್ನ 27 ಕ್ವಿಂಟಾಲ್ ಈರುಳ್ಳಿ ಮಾರಲು ಹೋಗಿದ್ದಾರೆ. ಆಗ ಆ 27 ಕ್ವಿಂಟಾಲ್ ಈರುಳ್ಳಿಗೆ 10,440 ರೂ. ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದಾರೆ. ಒಂದು ಕ್ವಿಂಟಾಲ್ ಈರುಳ್ಳಿಯ ಬೆಲೆ 372 ರೂ. ಆಗಿದ್ದರಿಂದ ಭಾರೀ ಕುಸಿತಗೊಂಡ ಈರುಳ್ಳಿ ಬೆಲೆಯನ್ನು ಸಹಿಸಲಾರದೆ ಹೃದಯಾಘಾತದಿಂದ 40 ವರ್ಷದ ರೈತ ಅಲ್ಲೇ ಕುಸಿದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಈರುಳ್ಳಿ ಬೆಲೆಯಲ್ಲಿ ಇನ್ನೂ ಸುಧಾರಣೆ ಕಂಡಿಲ್ಲ. ಮಾಲ್ವಾದ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 50ರಿಂದ 800 ರೂ.ನಂತೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬೆಳೆಯಲಾಗುತ್ತದೆ. ಹೋಲ್ಸೇಲ್ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಒಂದು ಕ್ವಿಂಟಾಲ್ಗೆ 100ರಿಂದ 200 ರೂ. ನಿಗದಿಮಾಡಲಾಗಿದೆ.
Comments are closed.