ನವದೆಹಲಿ: ತೀವ್ರ ಪೈಪೋಟಿ ನಡೆದಿದ್ದ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನ ಕೊನೆಗೂ ಅಶೋಕ್ ಗೆಹ್ಲೋಟ್ ಪಾಲಾಗಿದೆ. ಸಿಎಂ ರೇಸ್ನಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಪಟ್ಟು ಹಿಡಿದಿದ್ದ ಸಚಿನ್ ಪೈಲಟ್ ಅವರಿಗೆ ಕಾಂಗ್ರೆಸ್ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ.
ರಾಜಸ್ಥಾನ ನೂತನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿದ್ದ ಕೆ.ಸಿ.ವೇಣುಗೋಪಾಲ್ ಮಧ್ಯಾಹ್ನ ಜಂಟಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ಪ್ರಕಟಿಸಿದರು.
ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಸಚಿನ್ ಪೈಲಟ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್ ಕಳೆದ 36 ಗಂಟೆಗಳಿಂದ ನಿರಂತರ ಸಭೆಗಳನ್ನು ನಡೆಸಿದೆ. ಈ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಪಾಲ್ಗೊಂಡಿದ್ದರು.
ಮಧ್ಯಪ್ರದೇಶದಲ್ಲೂ ಮುಖ್ಯಮಂತ್ರಿ ಗಾದಿಗೆ ಕಮಲನಾಥ್ ಮತ್ತು ಜ್ಯೋತಿರಾಧ್ಯ ಸಿಂದ್ಯಾ ನಡುವೆಯೂ ತೀವ್ರ ಪೈಪೋಟಿ ಏರ್ಪಟ್ಟಿತ್ತು. ನೆನ್ನೆ ರಾಹುಲ್ ಗಾಂಧಿ ಅವರು ಕಮಲನಾಥ್ ಅವರನ್ನು ಸಿಎಂ ಆಗಿ ಘೋಷಣೆ ಮಾಡಿದರು. ಘೋಷಣೆಗೂ ಮುನ್ನ ರಾಹುಲ್ ಇವರಿಬ್ಬರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದರಂತೆ ಇಂದು ಕೂಡ ರಾಜಸ್ಥಾನದ ಇಬ್ಬರೂ ಮುಖಂಡರೊಂದಿಗೆ ನಿಂತಿರುವ ಫೋಟೋದೊಂದಿಗೆ ‘ದ ಯುನೈಟೆಡ್ ಕಲರ್ಸ್ ಆಫ್ ರಾಜಸ್ಥಾನ’ (ರಾಜಸ್ಥಾನದ ಏಕತೆಯ ಬಣ್ಣಗಳು) ಎಂದು ಟ್ವೀಟ್ ಮಾಡಿದ್ದರು. ಈ ಮೂಲಕ ಎಲ್ಲರೂ ಒಗ್ಗಟ್ಟಾಗಿ ಸಾಗಲಿದ್ದೇವೆ ಎಂಬ ಸಂದೇಶ ನೀಡಿದ್ದರು.
Comments are closed.