ಕಡಪ: ತಂದೆಯ ಜೊತೆ ತವರು ಮನೆಗೆ ಹೋಗುವುದಾಗಿ ಗಂಡನ ಬಳಿ ಹೇಳಿ ಹೋಗಿದ್ದ ಪತ್ನಿ ನಂತರ ಆಕೆ ಮಾಡಿದ್ದನ್ನು ಕೇಳಿ ಪತಿ ಬೆಚ್ಚಿಬಿದ್ದಿರುವ ಘಟನೆ ಕಡಪದಲ್ಲಿ ನಡೆದಿದೆ.
ತನ್ನ ಬಾಳ ಸಂಗಾತಿಯನ್ನು ನೆನೆಯುತ್ತಾ ತವರು ಮನೆಗೆ ಗಂಡ ಫೋನ್ ಮಾಡಿದಾಗ ಆಕೆ ತವರಿಗೆ ಬಂದಿಲ್ಲ ಎಂಬ ವಿಷಯ ಕೇಳಿ ಗಂಡ ಕಂಗಲಾಗಿದ್ದಾನೆ. ಹೆಣ್ಣಿನ ಕಡೆಯವರಿಗೆ ವರದಕ್ಷಿಣೆ ನೀಡಿ ಮದುವೆಯಾಗಿದ್ದ ಗಂಡ ಇದೀಗ ತಲೆ ಮೇಲೆ ಕೈಯಿಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಕಾಶಂ ಜಿಲ್ಲೆಯ ಮಾದಿನಿಪುರಂ ಗ್ರಾಮದ ನಿವಾಸಿಯಾಗಿರುವ ಅನಂತರೆಡ್ಡಿ ಮಗಳಾದ ಮೌನಿಕಾಳನ್ನು ಖಾಜಿಪೇಟದ ಕೊಮ್ಮಲೂರು ಗ್ರಾಮದ ನಿವಾಸಿ ರಾಮಕೃಷ್ಣಾರೆಡ್ಡಿ ಎಂಬುವರು ಕಳೆದ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು.
ಕಳೆದ ಆಗಸ್ಟ್ 27ರಂದು ಪ್ರಕರಣ ನಡೆದಿದ್ದು ತಂದೆ ಜತೆ ತವರಿಗೆ ಹೋಗಿ ಬರುವುದಾಗಿ ಹೇಳಿ ಮೈತುಂಬಾ ಒಡವೆ ಹಾಗೂ ನಗದನ್ನು ತೆಗೆದುಕೊಂಡ ಮೌನಿಕಾ ತವರು ಮನೆಗೆ ಹೋಗದೆ ಬೇರೆ ಕಡೆಗೆ ತೆರಳಿರುತ್ತಾರೆ. ಹೊಸದಾಗಿ ಮದುವೆಯಾಗಿದ್ದರಿಂದ ರಾಮಕೃಷ್ಣ ಮೌನಿಕಾ ಮನೆಗೆ ಕರೆ ಮಾಡಿದಾಗ ಆಕೆ ಮನೆಗೆ ಬಂದಿಲ್ಲ ಎಂಬ ವಿಚಾರ ತಿಳಿಯುತ್ತದೆ. ಕೂಡಲೇ ರಾಮಕೃಷ್ಣಾ ಪೊಲೀಸರಿಗೆ ದೂರು ನೀಡುತ್ತಾರೆ.
ತನಿಖೆ ಶುರು ಮಾಡಿದ ಪೊಲೀಸರು ಮೌನಿಕಾಳ ಮೊಬೈಲ್ ಫೋನ್ ಟ್ರಾಕ್ ಮಾಡುವ ಮೂಲಕ ಆಕೆಯನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ನಡೆಸಿದಾಗ ಮೌನಿಕಾ ಅದಾಗಲೇ ಆರು ಮದುವೆಯಾಗಿದ್ದು ಎಲ್ಲರ ಜತೆ ಸಂಸಾರ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾಗಿ ತಿಳಿಸಿದ್ದಾಳೆ. ಈ ಮಾತು ಕೇಳಿದ ರಾಮಕೃಷ್ಣಾರೆಡ್ಡಿ ದಂಗಾಗಿದ್ದಾರೆ. ಒಟ್ಟಿನಲ್ಲಿ ಸುಂದರವಾಗಿದ್ದ ಯುವತಿಯನ್ನು ವಿವಾಹವಾಗಿ ಸುಂದರ ಬದುಕು ನಡೆಸಬೇಕೆಂದಿದ್ದ ರಾಮಕೃಷ್ಣಾರಿಗೆ ಬರಸಿಡಿಲು ಬಡಿದಂಗಾಗಿದೆ.
ಒಟ್ಟಿನಲ್ಲಿ ಆರು ಜನರನ್ನು ನಂಬಿಸಿ ವಿವಾಹವಾಗಿ ಅವರಿಗೆ ಮೋಸ ಮಾಡಿದ ಮೌನಿಕಾಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Comments are closed.