ರಾಷ್ಟ್ರೀಯ

ತಾರಕ್ಕೇರಿದ ಸಿಬಿಐ ಒಳಜಗಳ: ಅಸ್ತಾನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ಅಂಡಮಾನ್ ಗೆ ಎತ್ತಂಗಡಿ

Pinterest LinkedIn Tumblr

ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಆಂತರಿಕ ಕಲಹ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ಎ.ಕೆ. ಬಸ್ಸಿಯವರನ್ನು ಅಂಡಮಾನ್ ಗೆ ವರ್ಗಾವಣೆ ಮಾಡಲಾಗಿದೆ.

ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರನ್ನೂ ಕಡ್ಡಾಯ ರಜೆಯ ಮೇಲೆ ಕಳುಹಿಸಿದ ನಂತರ ಸಿಬಿಐ ನಿರ್ದೇಶಕರಾಗಿ ನಿನ್ನೆ ರಾತ್ರಿ ಅಧಿಕಾರ ವಹಿಸಿಕೊಂಡ ಎಂ. ನಾಗೇಶ್ವರ್ ರಾವ್ ಅವರು, ತನಿಖಾ ಸಂಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಸ್ತಾನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಡೆಪ್ಯುಟಿ ಪೊಲೀಸ್ ಅಧೀಕ್ಷಕ ಎ.ಕೆ.ಬಸ್ಸಿ ಅವರನ್ನು ಪೋರ್ಟ್ ಬ್ಲೇರ್ ವರ್ಗಾವಣೆ ಮಾಡಲಾಗಿದೆ ಎಂದು ಸಿಬಿಐ ತಿಳಿಸಿದೆ.

ನಾಗೇಶ್ವರ್ ರಾವ್ ಅವರು ಬಸ್ಸಿ ಸ್ಥಾನಕ್ಕೆ ಸತೀಶ್ ದಾಗರ್ ಅವರನ್ನು ನೇಮಕ ಮಾಡಿದ್ದು, ಅವರು ಅಸ್ತಾನ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಲಿದ್ದಾರೆ.

ಸತೀಶ್ ದಾಗರ್ ಅವರು ಈ ಮುಂಚೆ ಡೆರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹಿಮ್ ವಿರುದ್ಧ ತನಿಖೆ ನಡೆಸಿದ್ದರು.

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಸ್ತಾನ ಹಾಗೂ ವರ್ಮಾ ಇಬ್ಬರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಿದ್ದು, ಇದನ್ನು ಪ್ರಶ್ಮಿಸಿ ಅಲೋಕ್ ವರ್ಮಾ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.

Comments are closed.