ಛತ್ತೀಸ್ಗಢ: ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯ ನೋವು ಇನ್ನೂ ಮಾಸಿಲ್ಲ. ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡ ನೋವು ಎಲ್ಲರ ಮನದಲ್ಲಿದೆ. ಆದರೆ ಛತ್ತೀಸ್ಗಢದ ಬಿಜೆಪಿ ಸಚಿವರಿಬ್ಬರು ವಾಜಪೇಯಿಯವರ ಗೌರವಾರ್ಥವಾಗಿ ಅಯೋಜಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ವೇದಿಕೆ ಮೇಲೆ ಹಾಸ್ಯ ಮಾಡುತ್ತಾ ಕುಳಿತಿದ್ದರು. ಈಗ ಆ ವಿಡಿಯೋ ವೈರಲ್ ಆಗಿದ್ದು, ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ರಾಜ್ಯ ಕೃಷಿ ಸಚಿವ ಬೃಜ್ ಮೋಹನ್ ಅಗರ್ವಾಲ್ ಹಾಗೂ ಆರೋಗ್ಯ ಸಚಿವ ಅಜಯ್ ಚಂದ್ರಾಕರ್ ಶ್ರದ್ಧಾಂಜಲಿ ಸಭೆಯಲ್ಲಿ ಗಂಭೀರವಾಗಿರದೆ ಪರಸ್ಪರ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ವೇದಿಕೆ ಮೇಲೆ ಕುಳಿತ್ತಿದ್ದರು. ಅಷ್ಟೇ ಅಲ್ಲದೇ ಸಚಿವ ಚಂದ್ರಾಕರ್ ಜೋರಾಗಿ ನಗುತ್ತಾ ತಮ್ಮ ಮುಂದಿರುವ ಟೇಬಲ್ನ್ನು ಬಡಿಯುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ. ಆಗ ರಾಜ್ಯ ಬಿಜೆಪಿ ಅಧ್ಯಕ್ಷ ಧರಂಲಾಲ್ ಕೌಶಿಕ್ ಚಂದ್ರಾಕರ್ ಅವರ ಕೈ ಹಿಡಿದು ನಗಬಾರದೆಂದು ಸನ್ನೆ ಮಾಡುತ್ತಾರೆ.
ವಿಪಕ್ಷ ಕಾಂಗ್ರೆಸ್ ಇಬ್ಬರು ಸಚಿವರನ್ನೂ ತರಾಟೆಗೆ ತೆಗೆದುಕೊಂಡಿದೆ. ‘ಬಿಜೆಪಿ ನಾಯಕರು ವಾಜಪೇಯಿ ಅವರಿಗೆ ಗೌರವ ತೋರಿಸುವುದು ಸಾಧ್ಯವಿಲ್ಲವಾದರೆ ಕನಿಷ್ಠ ಅಗೌರವ ತೋರದಿರಲಿ. ವಾಜಪೇಯಿ ಕಾಲವಾದ ನಂತರ ಈ ಬಿಜೆಪಿ ಸಚಿವರ ವರ್ತನೆಯು ಅಗಲಿದ ಹಿರಿಯ ನಾಯಕನ ಮೇಲೆ ಗೌರವ ಎಷ್ಟಿದೆ ಎಂದು ತೋರಿಸುತ್ತಿದೆ’ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೈಲೇಶ್ ನಿತಿನ್ ತ್ರಿವೇದಿ ಕಿಡಿಕಾರಿದ್ದಾರೆ.
ಬಿಜೆಪಿಯ ಉನ್ನತ ನಾಯಕತ್ವ ಅಟಲ್ ಜೀ ಅವರು ಬದುಕಿದ್ದಾಗ ಬಿಜೆಪಿ ಕಡೆಗಣಿಸಿತ್ತು. ಅಟಲ್ ಅವರ ನಿಧನದ ನಂತರ ಬಿಜೆಪಿ ಮತ್ತು ರಮಣ್ ಸಿಂಗ್ ವಾಜಪೇಯಿ ಅವರಿಗೆ ತೋರಿಸುತ್ತಿರುವ ಪ್ರೀತಿ ಮತ್ತು ಗೌರವ ಕೇವಲ ನಾಟಕ’ ಎಂದು ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ದೇಶದ ಪ್ರಮುಖ ನದಿಗಳಲ್ಲಿ ವಿಸರ್ಜಿಸಿದ ಬಳಿಕ ಬುಧವಾರ ಈ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಸಹ ಇದ್ದರು.
Comments are closed.