ರಾಷ್ಟ್ರೀಯ

ಸಭೆ ಚುನಾವಣೆಯಲ್ಲಿ ಸೋತಿದ್ದ ವಾಜಪೇಯಿಯನ್ನು ನೋಡಲು ಭಾರೀ ಜನಸಮೂಹವೇ ನೆರೆದಿತ್ತು!

Pinterest LinkedIn Tumblr


1984ರಲ್ಲಿ, ಆಗತಾನೆ ಲೋಕಸಭೆ ಚುನಾವಣೆ ನಡೆದು ಬಿಜೆಪಿ ದಯನೀಯವಾಗಿ ಸೋತಿತ್ತು. ಇಂದಿರಾ ಹತ್ಯೆಯ ಅನುಕಂಪದ ಅಲೆಯಲ್ಲಿ ತೇಲಿದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಡಿ.24ರಂದು ಮುಂಬಯಿಗೆ ಬಂದಿದ್ದ ಅಟಲ್‌ ಬಿಹಾರಿ ವಾಜಪೇಯಿ, ಶಿವಾಜಿ ಪಾರ್ಕ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಅವರನ್ನು ನೋಡಲು ಸಾವಿರಾರು ಜನ ಸೇರಿದ್ದರು. ವಾಜಪೇಯಿ ಮಾತನಾಡಲು ನಿಂತಾಗ ಜೋರಾದ ಚಪ್ಪಾಳೆ ಮೊಳಗಿತು. 10 ಸೆಕೆಂಡ್‌ ಮೌನರಾದ ವಾಜಪೇಯಿ, ‘‘ಸೋತುಹೋದ ಅಟಲ್‌ ಬಿಹಾರಿ ಹೇಗೆ ಕಾಣುತ್ತಾರೆಂದು ನೋಡಲು ಇಷ್ಟೊಂದು ಜನ ಇಲ್ಲಿ ಸೇರಿರಬೇಕು…’’ ಎಂದರು. ಜನರಿಂದ ಇನ್ನೊಮ್ಮೆ ಜೋರಾದ ಚಪ್ಪಾಳೆ, ನಗು. ನಂತರ ಬಂತು ವಾಜಪೇಯಿಯವರ ವಿಶಿಷ್ಟವಾದ ವಿಡಂಬನೆಯ ಮಾತು: ‘‘ಇಷ್ಟೊಂದು ಜನ ನೀವು ಮತದಾನದ ದಿನ ಎಲ್ಲಿ ಹೋಗಿದ್ದಿರಿ?’’

ವಾಜಪೇಯಿ ಕುರಿತು ಈ ಪ್ರಸಂಗವನ್ನು ನೆನಪಿಸಿಕೊಂಡವರು ಕಾಂದಿವಿಲಿಯ ಶಾಸಕ ಅತುಲ್‌ ಭಕ್ತಾಲ್ಕರ್‌. ವಾಜಪೇಯಿ ಜೊತೆ ಮುಂಬಯಿಗರಿಗೆ ವಿಶಿಷ್ಟ ನೆನಪುಗಳಿವೆ. ಅಂಬೇಡ್ಕರ್‌ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ವರ್ಲಿಯಲ್ಲಿ ಅಟಲ್‌ ಅವರು ಮಾಡಿದ ಭಾಷಣ, ದಲಿತ ಮತ್ತು ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯದ ಅಗತ್ಯವನ್ನು ಪ್ರತಿಪಾದಿಸಿ, ಬಿಜೆಪಿಗೆ ದಲಿತವರ್ಗದಲ್ಲಿ ಬೆಂಬಲದ ವೇದಿಕೆಯನ್ನು ಸೃಷ್ಟಿಸಲು ಸಹಕಾರಿಯಾಯಿತು. ಇದೇ ಶಿವಾಜಿ ಪಾರ್ಕ್‌ನಲ್ಲೇ ಆಡ್ವಾಣಿಯವರು, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ವಾಜಪೇಯಿಯವರ ಹೆಸರನ್ನು ಘೋಷಿಸಿದ್ದರು. 2009ರಲ್ಲಿ ಇಲ್ಲಿಯೇ ಅಟಲ್‌ ಅವರು ಇನ್ನು ಮುಂದೆ ಪಕ್ಷವನ್ನು ಆಡ್ವಾಣಿಯವರು ಮುನ್ನಡೆಸಲಿದ್ದಾರೆ ಎಂದು ಘೋಷಿಸಿದ್ದರು. ಆ ಹೊತ್ತಿಗಾಗಲೇ ಅಟಲ್‌ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು.

ಎಲ್ಲೆಡೆಯಿಂದ ಬಂದ ಜನರು

ಉತ್ತರಪ್ರದೇಶದಿಂದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿ ,ತಮಿಳುನಾಡಿನಿಂದ ಬಂದವರು, ಕೆಲವರು ರೈಲಿನಲ್ಲಿ, ಕೆಲವರು ಸೈಕಲ್‌ಗಳಲ್ಲಿ ಬಂದವರು. ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಸಂಸ್ಕಾರದಲ್ಲಿ ಭಾಗವಹಿಸಲು ಸಾವಿರಾರು ಮಂದು ದೇಶದ ನಾನಾ ಕಡೆಗಳಿಂದ ರಾಜಧಾನಿಗೆ ಆಗಮಿಸಿದ್ದರು. ಶವಸಂಸ್ಕಾರ ನಡೆದ ಸ್ಥಳ ಇಂಥ ಭಾವುಕ, ಶೋಕತಪ್ತ ಜನರಿಂದ ತುಂಬಿ ತುಳುಕುತ್ತಿತ್ತು.

ಉ.ಪ್ರ.ದ ಬಾಘ್‌ಪತ್‌ನಿಂದ ಸ್ಕೂಟರ್‌ನಲ್ಲೇ ಪ್ರಯಾಣಿಸಿ ಬಂದಿದ್ದ ಆಕಾಶ್‌ಕುಮಾರ್‌ ಎಂಬ ವ್ಯಕ್ತಿಗೆ ವಾಜಪೇಯಿಯವರ ಕವನಗಳು ತುಂಬ ಇಷ್ಟ. ನಾಲ್ಕನೇ ತರಗತಿಯಲ್ಲಿದ್ದಾಗ ಅಟಲ್‌ ಅವರ ಭಾಷಣ ಕೇಳಿ ಅವರತ್ತ ಆಕರ್ಷಿತರಾದರು. ಚೆನ್ನೈಯಿಂದ ವಿಮಾನದಲ್ಲಿ ಪ್ರಯಾಣಿಸಿ ಬಂದಿದ್ದ ನಟೇಶನ್‌ ಮತ್ತು ಗಣೇಶನ್‌ ಅವರು ವಿಮಾನದಿಂದ ಇಳಿದ ಕೂಡಲೇ ಅಟಲ್‌ ಅವರ ಪಾರ್ಥಿವ ಶರೀರವನ್ನಿಟ್ಟಿದ್ದ ಕೃಷ್ಣ ಮೆನನ್‌ ಮಾರ್ಗದಲ್ಲಿದ್ದ ಅವರ ನಿವಾಸದತ್ತ ಧಾವಿಸಿದ್ದರು. ಉತ್ತರಾಖಂಡದ ಉತ್ತರಾಕ್ಷಿ ಎಂಬಲ್ಲಿಂದ ಆಗಮಿಸಿದ ಯೋಗೇಶ್‌ ಕುಮಾರ್‌ ಎಂಬವರಲ್ಲಿ, 1984ರಲ್ಲಿ ವಾಜಪೇಯಿಯವರು ತಮ್ಮ ಊರಿಗೆ ಭೇಟಿ ನೀಡಿದಾಗಿ ನೆನಪುಗಳಿದ್ದವು; ಆಗಿನ ಫೊಟೊಗಳನ್ನೂ ಅವರು ಪ್ರದರ್ಶಿಸಿದರು.

ವಾಜಪಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ದೇಶದ ನಾನಾ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಜನರಿಂದ ತುಂಬಿದ್ದ ವಾಜಪೇಯಿ ನಿವಾಸದ ಮುಂದಿನ ಸ್ಥಳ, ದೇಶದ ಏಕತೆಯನ್ನೂ ಪ್ರತಿಪಾದಿಸುವಂತಿತ್ತು. ಹವಾಮಾನ ಪ್ರತಿಕೂಲವಾಗಿದ್ದರೂ, ಶವವನ್ನಿಟ್ಟಿದ್ದ ಬಿಜೆಪಿ ಮುಖ್ಯ ಕಚೇರಿಯಿಂದ ಅಂತಿಮ ಸಂಸ್ಕಾರ ನಡೆದ ಸ್ಮೃತಿ ಸ್ಥಳದತ್ತ 7 ಕಿ.ಮೀ.ನಷ್ಟು ದೂರ ನೂರಾರು ಜನ ನಡೆದೇ ಕ್ರಮಿಸಿದರು. ಮೆರವಣಿಗೆಯಾದ್ಯಂತ ಭಾವುಕ ಜನರಿಂದ ಶವವನ್ನಿಟ್ಟಿದ್ದ ವಾಹನದತ್ತ ಪುಷ್ಪವೃಷ್ಟಿಯಾಯಿತು.

ಮಧ್ಯಪ್ರದೇಶದ ಉಮೇಶ ಶ್ರೀವಾಸ್ತವ ಮುಂತಾದವರು, ರೈಲಿನಲ್ಲಿ ಸ್ಥಳ ಕಾದಿರಿಸಿದ್ದರೂ ಅದು ಸಿಗದೆ, ಕೊನೆಯ ಕ್ಷಣದಲ್ಲಿ ವಿಮಾನದಲ್ಲಿ ಬರಬೇಕಾಯಿತೆಂದರು. ವಾಜಪೇಯಿಯವರ ಭಾಷಣಗಳಿಂದ ಅವರೆಡೆಗೆ ಆಕರ್ಷಿತರಾಗಿದ್ದ ಅವರು ಪಕ್ಷದ ಕೆಲಸದಲ್ಲಿ ನಂತರ ತೊಡಗಿಸಿಕೊಂಡರಂತೆ. ಹಸಿವು, ನಿದ್ದೆಗಳ ಪರಿವೆಯಿಲ್ಲದೆ ಅವರು ತಮ್ಮ ಮೆಚ್ಚಿನ ನಾಯಕನ ಮುಖದರ್ಶನಕ್ಕಾಗಿ ಬಿಜೆಪಿ ಕಚೇರಿ ಮುಂದೆ ಕಾದಿದ್ದರು.

Comments are closed.