ರಾಷ್ಟ್ರೀಯ

ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿ 6 ಜನ ಬಲಿ ತೆಗೆದುಕೊಂಡ ಚಾಲಕ

Pinterest LinkedIn Tumblr


ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಬಳಿಯ ಸುಂದರಪುರಂನಲ್ಲಿ ಅಪಘಾತಕ್ಕೆ ಸ್ಥಳದಲ್ಲೇ 6 ಮಂದಿ ಬಲಿಯಾಗಿದ್ದಾರೆ. ಐಯ್ಯರ್ ಆಸ್ಪತ್ರೆಯ ಬಸ್ ನಿಲ್ದಾಣಕ್ಕೆ ವೇಗವಾಗಿ ಬಂದ ಆಡಿ ಎಸ್‌ಯುವಿ ಕಾರು ಅಲ್ಲಿದ್ದ ಜನರ ಮೇಲೆ ನುಗ್ಗಿದೆ. ಹೀಗಾಗಿ ಬಸ್ ನಿಲ್ದಾಣದ ಬಳಿಯಿದ್ದ ನಾಲ್ವರು ಮಹಿಳೆಯರು ಸೇರಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿದೆ.

ಖಾಸಗಿ ಕಾಲೇಜೊಂದರ ಮಾಲೀಕನಿಗೆ ಸೇರಿದ ಎಸ್‌ಯುವಿಯ ಚಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ವಾಹನ ಚಲಾಯಿಸುವಾಗ ಆ ಗಳಿಗೆಯಲ್ಲಿ ನಿದ್ದೆ ಬಂದ ಕಾರಣ ಅಪಘಾತ ನಡೆದಿದೆ ಎಂದು ಹೇಳಿಕೊಂಡಿದ್ದಾನೆ. ಅಪಘಾತ ನಡೆದ ಬೆನ್ನಲ್ಲೇ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯಲ್ಲಿ ಪಾದಚಾರಿಗಳಾದ ನಾರಾಯಣನ್(70), ಹಂಸವೇಣಿ (34), ಶ್ರೀ ರಂಗದಾಸ್ (69) , ಸುಭಾಷಿಣಿ (18), ಕುಪ್ಪಥಾಲ್ (70) ಹಾಗೂ ರುಕ್ಮಣಿ ಮೃತಪಟ್ಟಿದ್ದು (65), ಇವರೆಲ್ಲರೂ ಸುಂದರಪುರಂ ನಿವಾಸಿಗಳು ಎಂದು ಗುರುತಿಸಲಾಗಿದೆ. ಇನ್ನು, 55 ವರ್ಷದ ಸೋಮಸುಂದರಂಗೆ ತೀವ್ರ ಗಾಯಗಳಾಗಿದ್ದು, ಕೊಯಮತ್ತೂರು ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜತೆಗೆ ಸುರೇಶ್ ( 45 ) ಹಾಗೂ ನಟರಾಜ್ ( 70 ) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಗದೀಶ್ ಕುಮಾರ್ ( 34 ) ಎಸ್‌ಯುವಿಯನ್ನು ಚಲಾಯಿಸಿದ್ದು, ಮೊದಲು ರಸ್ತೆ ಬಳಿ ನಿಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ, ಅವರನ್ನು ಎಳೆದುಕೊಂಡು ಹೋಗಿ ಇತರರ ಮೇಲೆ ಆಡಿ ಕಾರು ಹರಿದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು, ಆಟೋಗೆ ಡಿಕ್ಕಿ ಹೊಡೆದು ನಿಂತುಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ನಂತರ, ಸ್ಥಳದಲ್ಲಿದ್ದ ಜನರು ವ್ಯಕ್ತಿಯನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು, ಕಾರಿನಲ್ಲಿ ಏರ್‌ ಬ್ಯಾಗ್ ಇದ್ದ ಕಾರಣ ಅಪಘಾತದಲ್ಲಿ ಕಾರು ಚಾಲಕನಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಬದಲಾಗಿ ಜನರು ಆತನನ್ನು ಥಳಿಸಿದ್ದರಿಂದ ಗಾಯಗಳಾಗಿದ್ದು, ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಮಾಲೀಕನನ್ನು ಕರೆದೊಯ್ಯಲು ಖಾಸಗಿ ಕಾಲೇಜಿನಿಂದ ವಾಹನ ಚಲಾಯಿಸುತ್ತಿದ್ದೆ ಎಂದು ಘಟನೆ ಬಳಿಕ ಜಗದೀಶ್ ಹೇಳಿದ್ದಾನೆ. ಅಲ್ಲದೆ, ಬೆಂಗಳೂರಿಗೆ ವಾಹನ ಚಲಾಯಿಸಿದ್ದ ತಾನು ವಾಪಸ್ ಬಂದಿದ್ದೆ. ಇದರಿಂದಾಗಿ ಸುಸ್ತಾದ ಕಾರಣ ನಿದ್ದೆ ಬಂದಿತ್ತು ಎಂದು ಹೇಳಿಕೊಂಡಿದ್ದಾನೆ. ಇನ್ನು, ಮದ್ಯಪಾನ ಮಾಡಿರಲಿಲ್ಲ ಎಂದು ಆತ ಹೇಳಿದ್ದರೂ ಸಹ, ಆರೋಗ್ಯ ಪರೀಕ್ಷೆ ವೇಳೆ ಆತನ ದೇಹದ ರಕ್ತದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಸಂಚಾರಿ ತನಿಖಾ ವಿಭಾಗ ಜಗದೀಶ್‌ ವಿರುದ್ಧ ಹಲವು ಸೆಕ್ಷನ್‌ಗಳ ಅನುಸಾರ ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Comments are closed.