ರಾಷ್ಟ್ರೀಯ

ಆರೋಗ್ಯ ಚೇತರಿಸಿಕೊಳ್ಳಲೆಂದು ನಾಸ್ತಿಕ ಕರುಣಾನಿಧಿಗಾಗಿ ಆಸ್ತಿಕರ ಪೂಜೆ!

Pinterest LinkedIn Tumblr


ಚೆನ್ನೈ: ಜೀವನ ಪರ್ಯಂತ ನಾಸ್ತಿಕರಾಗಿದ್ದ ಡಿಎಂಕೆ ವರಿಷ್ಠ ಅಧ್ಯಕ್ಷ ಕರುಣಾನಿಧಿ ಅವರ ಆರೋಗ್ಯ ಚೇತರಿಸಿಕೊಳ್ಳಲೆಂದು ಸಾವಿರಾರು ಆಸ್ತಿಕರು ಪೂಜೆ-ಪುರಸ್ಕಾರ ಮಾಡುತ್ತಿದ್ದಾರೆ.

ಕರುಣಾನಿಧಿ ಅನಾರೋಗ್ಯದ ಸುದ್ದಿ ಹೊರಬೀಳುತ್ತಿದ್ದಂತೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದು, ತನ್ನ ನೆಚ್ಚಿನ ನಾಯಕನ ಆರೋಗ್ಯ ಸುಧಾರಿಸಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತಿದ್ದಾರೆ.

ಕರುಣಾನಿಧಿ ದಾಖಲಾಗಿರುವ ಕಾವೇರಿ ಆಸ್ಪತ್ರೆಯ ಬಳಿ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಯಿಸುತ್ತಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಎಂ.ಕರುಣಾನಿಧಿ (94) ಅವರ ರಕ್ತದೊತ್ತಡ ದಿಢೀರ್‌ ಇಳಿಕೆಯಾಗಿದ್ದರಿಂದ ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕರುಣಾನಿಧಿ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ. ಜ್ವರ ಹಾಗೂ ಮೂತ್ರ ಸೋಂಕಿನಿಂದ ಬಳಲುತ್ತಿರುವ ಅವರಿಗೆ ತಜ್ಞರ ವೈದ್ಯರಿಂದ ಚಿಕಿತ್ಸೆ ಮುಂದುವರಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಶನಿವಾರ ತಿಳಿಸಿವೆ.

ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಗೋಪಾಲಪುರಂ ನಿವಾಸಕ್ಕೆ ಕರೆತರಲಾಗಿದ್ದ ಕರುಣಾನಿಧಿ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಬಿಗಡಾಯಿಸಿದ್ದರಿಂದ ಶುಕ್ರವಾರ ಬೆಳಗ್ಗೆಯೇ ರಾಜಕೀಯ, ಸಿನಿಮಾ ರಂಗದ ಗಣ್ಯರು ಅವರ ಮನೆಗೆ ಭೇಟಿಕೊಟ್ಟು ಆರೋಗ್ಯ ವಿಚಾರಿಸಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸೇರಿದಂತೆ ಹಲವರು ಕರುಣಾನಿಧಿ ಶೀಘ್ರ ಚೇತರಿಕೆ ಹಾರೈಸಿ ಟ್ವೀಟ್‌ ಮಾಡಿದ್ದರು. ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿರುವುದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.

Comments are closed.