ನವದೆಹಲಿ: ಗುಂಪು ಹಲ್ಲೆ ಬಗ್ಗೆ ದೇಶಾದ್ಯಂತ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹಿಂದು ಯುವತಿಯನ್ನು ಮದುವೆಯಾಗಲು ಹೋಗಿದ್ದ ಮುಸ್ಲಿಂ ವ್ಯಕ್ತಿಯನ್ನು ಒಂದು ಗುಂಪಿನ ಜನರು ಮನಬಂದಂತೆ ಥಳಿಸಿರುವ ಘಟನೆ ಘಾಜಿಯಾಬಾದ್ನ ನ್ಯಾಯಾಲಯದ ಮುಂದೆ ನಡೆದಿದೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭೂಪಾಲ್ ನಿವಾಸಿಯಾದ ಸಾಹೇಲ್ ಸೋಮವಾರ ಮಧ್ಯಾಹ್ನ ಹಿಂದು ಯುವತಿಯನ್ನು ರಿಜಿಸ್ಟರ್ ಮದುವೆಯಾಗಲು ನ್ಯಾಯಾಲಯಕ್ಕೆ ಹೋಗಿದ್ದ. ಈ ವೇಳೆ ಮದುವೆ ವಿಧಾನದ ಬಗ್ಗೆ ಚರ್ಚಿಸುತ್ತಿರುವಾಗಲೇ ಗುಂಪೊಂದು ಏಕಾಏಕಿ ದಾಳಿ ಮಾಡಿದೆ. ಅಂತರ್ಜಾತಿ ವಿವಾಹ ಎಂಬುದರ ಮಾಹಿತಿ ತಿಳಿದು ದಾಳಿ ನಡೆಸಲಾಗಿದೆ. ಇದನ್ನು ನೋಡಿದ ಪೊಲೀಸರು ದಾಳಿಕೋರರಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಈ ಸಂಬಂಧ ಘಾಜಿಯಬಾದ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ವಿನೋದ್ ಹಾಗೂ ನವನೀತ್ ಮತ್ತು ಅನೇಕ ಅಪರಿಚಿತರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಸಿಹಾನಿ ಗೇಟ್ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್ ಪಾಂಡೆ ತಿಳಿಸಿದ್ದಾರೆ.
ಮದುವೆಯಾಗಲು ಹೊರಟಿದ್ದ ಜೋಡಿಗಳು ನೋಯ್ಡಾದಲ್ಲಿ ಕೆಲಸದಲ್ಲಿದ್ದಾರೆ. ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಘಟನೆಯಿಂದ ಸಾಹೇಲ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಭವಿಸುತ್ತಿದ್ದಂತೆ ಭಯಗೊಂಡ ಯುವತಿ ಅಲ್ಲಿಂದ ಪರಾರಿಯಾಗಿದ್ದಾಳೆ.
ಗುಂಪು ಹತ್ಯೆ ಬಗ್ಗೆ ಹೊಸ ಕಾನೂನು ರಚಿಸಲು ಕೇಂದ್ರ ಸರ್ಕಾರ ಸಚಿವ ಸಮಿತಿ ರಚಿಸಿದ ಎರಡೇ ದಿನದಲ್ಲಿ ಇಂಥಹ ಘಟನೆ ಮತ್ತೆ ಮರುಕಳಿಸಿದೆ. (
Comments are closed.