ಬಸ್ತಿ: ಮೊಬೈಲ್ ಫೋನ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಅಂತ ತನ್ನ ಸ್ವಂತ ಮಗನನ್ನೇ ವ್ಯಕ್ತಿಯೊಬ್ಬರು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಲ್ಲದೆ, ಯಾರಿಗೂ ಗೊತ್ತಾಗಬಾರದೆಂದು ಮಗನ ಹೆಣವನ್ನು ಹೂತಿಟ್ಟಿದ್ದಾನೆ.
ತನ್ನ ಮಗ ಹೆಚ್ಚಾಗಿ ಮೊಬೈಲ್ ಫೋನ್ನಲ್ಲಿ ಆಟಗಳನ್ನು ಆಡುತ್ತಿದ್ದನೆಂಬ ಕಾರಣಕ್ಕೆ ಬಸ್ತಿಯ ರಾಕೇಶ್ ಗುಪ್ತಾ ಎಂಬಾತ ತನ್ನ ಪುತ್ರನನ್ನು ಕೊಲೆ ಮಾಡಿ ಹೂತಿಟ್ಟಿದ್ದಾನೆ. ಬಳಿಕ, ಬಾಲಕನ ಅಜ್ಜ ಪೊಲೀಸರಿಗೆ ದೂರು ನೀಡಿದ್ದಕ್ಕೆ ಪೊಲೀಸರು ತನಿಖೆ ನಡೆಸಿದ್ದಾರೆ. ನಂತರ, ಬಾಲಕನ ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಿದ ಪೊಲೀಸರಿಗೆ ತಂದೆಯೇ ಕೊಲೆ ಮಾಡಿರುವ ಬಗ್ಗೆ ಹೆಚ್ಚು ಸಾಕ್ಷ್ಯಗಳು ದೊರೆತಿವೆ. ಆದರೆ, ಆರಂಭದಲ್ಲಿ ಆರೋಪಿ ತಂದೆ ಪೊಲೀಸರನ್ನು ದಾರಿ ತಪ್ಪಿಸಲು ಹೋದರೂ ಸಹ, ನಂತರ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಬಗ್ಗೆ ಬಾಬಾಗಂಜ್ ಪೊಲೀಸ್ ಠಾಣೆಯ ಎಸ್ಪಿ ದಿಲೀಪ್ ಕುಮಾರ್ ಮಾಹಿತಿ ನೀಡಿದ್ದು, ಬಾಲಕನ ಅಜ್ಜ ದೂರು ನೀಡಿದ ಬಳಿಕ ಆತನ ಮೃತದೇಹವನ್ನು ಹೊರಗೆ ತೆಗೆದು ತನಿಖೆ ನಡೆಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ರಾಕೇಶ್ ಹಾಗೂ ಆತನ ಎರಡನೇ ಹೆಂಡತಿ ತನಿಖೆಗೆ ಸಹಕರಿಸದೆ ಪೊಲೀಸರ ದಾರಿ ತಪ್ಪಿಸುತ್ತಿದ್ದರು. ತನ್ನ ಪುತ್ರ ರಾಹುಲ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುಳ್ಳು ಹೇಳುತ್ತಿದ್ದರು. ಆದರೆ, ಅವರನ್ನು ತೀವ್ರವಾಗಿ ವಿಚಾರಿಸಿದ ಬಳಿಕ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದೂ ದಿಲೀಪ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಓದಿನಲ್ಲಿ ಆತನಿಗೆ ಆಸಕ್ತಿ ಇರಲಿಲ್ಲ. ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ. ಹೀಗಾಗಿ, ನಾವು ಆತನಿಗೆ ಹೊಡೆಯುತ್ತಿದ್ದೆವು ಹಾಗೂ ಕೂಡಿ ಹಾಕುತ್ತಿದ್ದೆವು ಎಂದು ಪೋಷಕರು ಹೇಳಿದ್ದರು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಅಲ್ಲದೆ, ರಾಹುಲ್ನನ್ನು ಕೊಲೆ ಮಾಡಿದ ದಿನ ಅವನು ಶಾಲೆಗೆ ಚಕ್ಕರ್ ಹಾಕಿ ಮೊಬೈಲ್ನಲ್ಲಿ ಆಟವಾಡುತ್ತಿದ್ದನು. ಬಳಿಕ, ತಂದೆ ರಾಕೇಶ್ ಅವನನ್ನು ಕೂಗಿದರೂ ಸಹ ಈತ ಬರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ತಂದೆ ಅವನನ್ನು ಹೊಡೆದಾಗ ಆತ ನೆಲದ ಮೇಲೆ ಬಿದ್ದನು. ನಂತರ ತನ್ನ ಕಾಲಿನ ಪಾದದಿಂದ ಅವನ ಎದೆಯನ್ನು ಒತ್ತಿದ ವೇಳೆ ರಾಹುಲ್ ಮೃತಪಟ್ಟನು ಎಂದು ಮೃತ ರಾಹುಲ್ ತಂದೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
Comments are closed.