ಮಿಡ್ನಾಪುರ: ನನ್ನ ಸರ್ಕಾರ ನಿಮ್ಮ ಸರ್ಕಾರ, 2022ರ ವೇಳೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ರೈತರ ಸಮಾವೇಶದಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು, ನನ್ನ ಸರ್ಕಾರ ನಿಮ್ಮ ಸರ್ಕಾರ. ನಮ್ಮ ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿಂದು ‘ಮಾ ಮಾಟಿ ಮನುಷ್’ ಮುಖವನ್ನು ಎಲ್ಲರೂ ನೋಡುತ್ತಿದ್ದಾರೆ. ಇಲ್ಲಿ ಸಿಂಡಿಕೇಟ ರಾಜಕೀಯ ನಡೆಯುತ್ತಿದ್ದು, ಪ್ರತಿಸ್ಪರ್ಧಿಗಳನ್ನು ಹತ್ಯೆ ಮಾಡುವ ಕೆಲಸವನ್ನು ಅದು ಮಾಡುತ್ತಿದೆ. ಈ ಸಿಂಡಿಕೇಟ್ ಅನುಮತಿಯಿಲ್ಲದೆಯೇ ಪಶ್ಚಿಮ ಬಂಗಾಳದಲ್ಲಿ ಏನನ್ನೂ ಮಾಡಲೂ ಸಾಧ್ಯವಿಲ್ಲ. ಪೂಜೆ ಮಾಡುವುದೂ ಕೂಡ ರಾಜ್ಯದಲ್ಲಿ ಕಷ್ಟಕರವಾಗಿ ಹೋಗಿದೆ ಎಂದು ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇವಲ ವೋಟ್ ಬ್ಯಾಂಕ್ ಗಾಗಿ ಸಿಂಡಿಕೇಟ್ ಕಾರ್ಯನಿರ್ವಹಿಸುತ್ತಿದೆ. ಅಧಿಕಾರದಲ್ಲಿರುವ ಸಲುವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ನಡೆದ ಹಿಂಸಾಚಾರವನ್ನು ಇದೇ ವೇಳೆ ಪ್ರಸ್ತಾಪಿಸಿದ ಮೋದಿಯವರು, ಪ್ರಜಾಸತ್ತೆಯಲ್ಲಿ ನಂಬಿಕೆ ಇಲ್ಲದಿರುವುದನ್ನು ಇಂದು ಜಗಜ್ಜಾಹೀರು ಮಾಡಿದೆ. ನಿಮ್ಮ ವಿರೋಧಿಗಳನ್ನು ಕೊಂದು ಮುಗಿಸಿ ಎಂಬ ಸಿಂಡಿಕೇಟ್ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸುವ ಹಣವನನ್ನು ಸಿಂಡಿಕೇಟ್ ಅನುಮತಿ ಇಲ್ಲದೆ ಯಾವುದಕ್ಕೂ ಬಳಸುವುಂತಿಲ್ಲ ಎಂಬಂತಾಗಿದೆ ಎಂದಿದ್ದಾರೆ.
ಒಂದೆಡೆ ಪ್ರಧಾನಿ ಮೋದಿ ರ್ಯಾಲಿ ನಡೆಸುತ್ತಿದ್ದರೆ, ಮತ್ತೊಂದೆಡೆ ಇದಕ್ಕೆ ವಿರುದ್ಧವಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ ರ್ಯಾಲಿ ನಡೆಸಲು ತೀರ್ಮಾನಿಸಿದೆ. ಆಗಸ್ಟ್ 9 ರಂದು ರ್ಯಾಲಿ ನಡೆಸುವುದಾಗಿ ರಾಜ್ಯದೆಲ್ಲೆಡೆ ಮಮತಾ ಬ್ಯಾನರ್ಜಿಯವರ ಭಾವಚಿತ್ರ ವಿರುದ್ಧ ದೊಡ್ಡ ದೊಡ್ಡ ಬ್ಯಾನರ್ ಹಾಗೂ ಕಟೌಟ್ ಗಳನ್ನು ಹಾಕಿದೆ.
Comments are closed.