ರಾಷ್ಟ್ರೀಯ

ಸಲಿಂಗಕಾಮ ಹಿಂದುತ್ವಕ್ಕೆ ವಿರುದ್ಧ: ಸುಬ್ರಮಣಿಯನ್ ಸ್ವಾಮಿ

Pinterest LinkedIn Tumblr


ಹೊಸದಿಲ್ಲಿ: ಸಲಿಂಗಕಾಮಿಯಾಗಿರುವುದು ‘ಸಹಜ ಸ್ಥಿತಿಯಲ್ಲ’; ಅದು ‘ಹಿಂದುತ್ವಕ್ಕೆ ವಿರುದ್ಧವಾದ ಪ್ರವೃತ್ತಿ’. ಅಂತಹ ಸ್ಥಿತಿಯನ್ನು ಗುಣಪಡಿಸಲು ಸಾಧ್ಯವೇ ಎಂದು ವೈದ್ಯಕೀಯ ಸಂಶೋಧನೆಗಳು ನಡೆಯಬೇಕು’ ಎಂದು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.

‘ಸಲಿಂಗಕಾಮ ಎಂಬುದು ಸಹಜವಾದ ವರ್ತನೆಯಲ್ಲ. ನಾವು ಅದನ್ನು ವೈಭವೀಕರಿಸಲಾಗದು. ಅದು ಹಿಂದುತ್ವಕ್ಕೆ ವಿರುದ್ಧವಾದುದು. ಅದನ್ನು ಗುಣಪಡಿಸಬಹುದೇ ಎಂಬ ವೈದ್ಯಕೀಯ ಸಂಶೋಧನೆಗಾಗಿ ನಾವು ಹೆಚ್ಚು ಬಂಡವಾಳ ಹೂಡಬೇಕಿದೆ’ ಎಂದು ಡಾ. ಸ್ವಾಮಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ ಅನ್ವಯ ಸಲಿಂಗಕಾಮ ಅಪರಾಧ. ಈ ಕುರಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಲೈಂಗಿಕ ಆಸಕ್ತಿಗಳ ರಕ್ಷಣೆ ಹಾಗೂ ಮಹಿಳಾ ಸಲಿಂಗಕಾಮಿಗಳು (ಲೆಸ್ಬಿಯನ್‌), ಪುರುಷ ಸಲಿಂಗಕಾಮಿಗಳು (ಗೇ), ಉಭಯಲಿಂಗಿಗಳು, ಪುರುಷ ಅಥವಾ ಮಹಿಳೆ ಎಂದು ಗುರುತಿಸಿಕೊಳ್ಳಲು ಬಯಸದವರ ಹಿತಾಸಕ್ತಿಗಳ ಕುರಿತ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ.

ಸೆಕ್ಷನ್ 377ಕ್ಕೆ ವಿರುದ್ಧವಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ನಡೆಸುವ ಬದಲು ಏಳು ಅಥವಾ 9 ನ್ಯಾಯಾಧೀಶರ ಪೀಠದಿಂದ ನಡೆಸುವಂತೆ ಸರಕಾರ ಪರಿಗಣಿಸಬೇಕು ಎಂದು ಸ್ವಾಮಿ ಒತ್ತಾಯಿಸಿದರು.

ಸಲಿಂಗಕಾಮ ಎಂಬುದು ಒಂದು ‘ಅನುವಂಶಿಕ ದೋಷ’ ಎಂದು ಡಾ. ಸ್ವಾಮಿ 2015ರಲ್ಲೇ ಟ್ವೀಟ್‌ ಮಾಡಿದ್ದರು.

ತಮ್ಮ ಲೈಂಗಿಕತೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಸಲಿಂಗಕಾಮಿಗಳನ್ನು ಶಿಕ್ಷಿಸುವುದಕ್ಕಾಗಿ ಸೆಕ್ಷನ್‌ 377ರ ಅಗತ್ಯವಿದೆ ಎಂದು ಅವರು ಈ ವರ್ಷದ ಜನವರಿಯಲ್ಲಿ ಪ್ರತಿಪಾದಿಸಿದ್ದರು. ಎಲ್‌ಜಿಬಿಟಿಕ್ಯೂ ಸಮುದಾಯ ‘ಖಾಸಗಿ’ಯಾಗಿ ಏನು ಬೇಕಾದರೂ ಮಾಡಿಕೊಳ್ಳಲಿ; ಆದರೆ ತಮ್ಮ ಲೈಂಗಿಕತೆಯನ್ನು ‘ಪ್ರದರ್ಶಿಸುವ’ ಅಗತ್ಯವಿಲ್ಲ ಎಂದು ಸ್ವಾಮಿ ಹೇಳಿದ್ದಾರೆ.

‘ಎಲ್ಲಿಯವರೆಗೆ ಅವರು ಅದನ್ನು ಪ್ರದರ್ಶಿಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೂ ತಮ್ಮ ಸಂಗಾತಿಗಳನ್ನು ಅಯ್ದುಕೊಳ್ಳಲು ಅವರು ಸ್ವತಂತ್ರರು. ಅದಕ್ಕೆ ಕಾನೂನಿನ ಅಡ್ಡಿಯಿಲ್ಲ’ ಎಂದು ಸ್ವಾಮಿ ಹೇಳಿದರು.

ಸೆಕ್ಷನ್‌ 377ರ ವಿರುದ್ಧ ಅರ್ಜಿಗಳ ಕುರಿತು ತನ್ನ ಪ್ರತಿಕ್ರಿಯೆ ಸಲ್ಲಿಸಲು ವಿಳಂಬಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇನ್ನಷ್ಟು ಕಾಲಾವಕಾಶ ನೀಡಲಾಗದು, ಕೇಂದ್ರ ಸರಕಾರ ಕೂಡಲೇ ತನ್ನ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೋರ್ಟ್ ತಾಕೀತು ಮಾಡಿದೆ.

Comments are closed.