ಅಹಮದಾಬಾದ್: ಸಿನಿಮಾ ನೋಡಲು ಅಡ್ಡಿ ಪಡಿಸಿದನೆಂಬ ಕಾರಣಕ್ಕೆ ಬಾಲಕನಿಗೆ ಚಾಕು ಇರಿದು ಹತ್ಯೆಗೈಯ್ಯಲೆತ್ನಿಸಿದ ಬೆಚ್ಚಿಬೀಳಿಸುವ ಘಟನೆ ಹಳೆ ನಗರ ಪ್ರದೇಶದಲ್ಲಿ ಜೂನ್ 18ರಂದು ನಡೆದಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕನ ಹೊಟ್ಟೆ, ಭುಜ ಮತ್ತು ಕಣ್ಣಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
16 ವರ್ಷದ ಬಾಲಕ ಕಾಲುಪುರದ ನಿವಾಸಿಯಾಗಿದ್ದು, ಸರಸ್ಪುರ ಪ್ರದೇಶದಲ್ಲಿರುವ ಚಿತ್ರಮಂದಿರದಲ್ಲಿ ಬಿ ಗ್ರೇಡ್ ಸಿನಿಮಾ ನೋಡುತ್ತಿದ್ದ. ಇದ್ದಕ್ಕಿದ್ದಂತೆ ಆತ ಎದ್ದು ನಿಂತಿದ್ದು ಹಿಂದೆ ಕುಳಿತಿದ್ದ ನಾಲ್ವರು ಯುವಕರಿಗೆ ಸಿಟ್ಟು ತರಿಸಿದೆ. ಸಿನಿಮಾ ನೋಡಲು ಅಡ್ಡಿ ಪಡಿಸುತ್ತಿದ್ದಾನೆಂದು ಆರೋಪಿಸಿದ ದುಷ್ಕರ್ಮಿಗಳು ಬಾಲಕನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ.
ನನ್ನ ಮಗ ಎದ್ದು ನಿಂತನೆಂದು ಚಾಕುವಿನಿಂದ ಇರಿದಿರುವುದು ಎಷ್ಟು ಸರಿ. ಮಾತನಾಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿಕೊಳ್ಳಬಹುದಿತ್ತು. ಇದು ನಿಜಕ್ಕೂ ಅಮಾನುಷ. ಗಂಭೀರವಾಗಿ ಗಾಯಗೊಂಡಿರುವ ಮಗ ಆಸ್ಪತ್ರೆಗೆ ದಾಖಲಾಗಿದ್ದು, ಇನ್ನು ಕೂಡ ಚೇತರಿಸಿಕೊಂಡಿಲ್ಲ. ಅವನ ಕಿಸೆಯಿಂದ 400 ರೂಪಾಯಿಯನ್ನು ಸಹ ಅವರು ಎತ್ತಿಕೊಂಡಿದ್ದಾರೆ, ಎಂದು ಬಾಲಕನ ತಾಯಿ ಹೇಳಿದ್ದಾರೆ.
ಆರೋಪಿಗಳಲ್ಲಿಬ್ಬರನ್ನು ಗುರುತಿಸಲಾಗಿದ್ದು, ಮತ್ತಿಬ್ಬರ ಸುಳಿವು ಸಿಕ್ಕಿಲ್ಲ. ಪರಾರಿಯಾಗಿರುವ ನಾಲ್ವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Comments are closed.