ಕೊಚ್ಚಿ/ಕಣ್ಣೂರು: ಮನೆ ಬಿಟ್ಟು ಹೋಗಿದ್ದ ಯುವ ಜೋಡಿಯೊಂದು ರಾತ್ರಿ ರಕ್ಷಣೆ ಮತ್ತು ಆಶ್ರಯ ಕೋರಿ ತ್ರಿಕ್ಕಕರ ಪೊಲೀಸರ ಮೊರೆ ಹೋಗಿದೆ.
ಸಾಜನ ಕೆ. ಸಲೀಂ ಮತ್ತು ಅನಸ್ ಯೂಸುಫ್ ಜೋಡಿ ಶನಿವಾರ ಕೊಚ್ಚಿಗೆ ಬಂದಿದ್ದು, ವಜ್ಹಕಲದಲ್ಲಿರುವ ಸಂಬಂಧಿಯ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಸಾಜನ ಪೋಷಕರು ಮಗಳು ಕಾಣೆಯಾಗಿರುವುದಾಗಿ ದೂರು ನೀಡಿರುವುದನ್ನು ತಿಳಿದ ಜೋಡಿ ಪೊಲೀಸರ ಎದುರು ಹಾಜರಾಗಲು ನಿರ್ಧರಿಸಿತು. ಅದೇ ರೀತಿ ಪೊಲೀಸರೆದುರು ರಾತ್ರಿ ಹಾಜರಾಗಿದ್ದು, ಸಾಜನ ಅವರನ್ನು ಪೊಲೀಸರು ಕೇರ್ ಹೋಂಗೆ ಕರೆದೊಯ್ದರು.
ಬಳಿಕ ಪೊಲೀಸರ ರಕ್ಷಣೆಯೊಂದಿಗೆ ಆಕೆಯನ್ನು ಕಣ್ಣೂರಿಗೆ ಕರೆದೊಯ್ದು ಅಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರುಪಡಿಸಲಾಗಿದೆ.
ಅನಸ್ ಎರುಮೇಲಿ ನಿವಾಸಿಯಾಗಿದ್ದು, ಕಣ್ಣುರಿನ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಜನ್ ಮನೆಯವರು ಇವರಿಬ್ಬರ ಸಂಬಂಧವನ್ನು ವಿರೋಧಿಸುತ್ತಿದ್ದಾರೆ. ಆದರೆ ಈ ಜೋಡಿ ಪ್ರಾಪ್ತ ವಯಸ್ಕರಾಗಿದ್ದು, ಮದುವೆಯಾಗಲು ಕಾನೂನಿನ ಅಡಚಣೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಜನ ಮತ್ತು ತಾನು ಸಂಬಂಧಿಗಳಾಗಿದ್ದು ಕಳೆದ ಆರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ತಲಶ್ಯೇರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯನ್ನು ಪೋಷಕರು ಮನೆಯೊಳಗೆ ಕೂಡಿ ಹಾಕಿದ ಬಳಿಕ ನಾವು ಓಡಿ ಹೋಗಲು ನಿರ್ಧರಿಸಿರುವುದಾಗಿ ಅನಸ್ ಪೊಲೀಸರಿಗೆ ತಿಳಿಸಿದ್ದಾರೆ.
Comments are closed.