ರಾಷ್ಟ್ರೀಯ

ವಿತ್ತ ಸಚಿವಾಲಯ ಬಂದ್‌ ಮಾಡಿ; ಜೇಟ್ಲಿಗೆ ರಾಹುಲ್‌ ಅಣಕು ಪತ್ರ

Pinterest LinkedIn Tumblr


ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವಾಲಯದಲ್ಲಿ ವಿತ್ತ ಸಚಿವ ಅರುಣ್‌ ಜೇಟ್ಲಿ ಮತ್ತು ವಿತ್ತ ಸಚಿವಾಲಯದ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಇಬ್ಬರೂ ಅನುಪಸ್ಥಿತರಾದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿಕಾರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಿತ್ತ ಸಚಿವರಿಗೆ ಅಣಕು ಪತ್ರ ಬರೆದಿದ್ದಾರೆ.

ಸಚಿವ ಅರುಣ್‌ ಜೇಟ್ಲಿ ಅವರು ಕಳೆದ ಏಪ್ರಿಲ್‌ನಿಂದ ಅಸ್ವಸ್ಥರಾಗಿ ಕಚೇರಿಯಿಂದ ದೂರ ಇದ್ದಾರೆ. ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಅವರು ತಮ್ಮ ಆಧ್ಯಾತ್ಮಿಕ ಗುರುವಿನೊಂದಿಗೆ ಆತ್ಮ ಶಾಂತಿಯನ್ನು ಅರಸುತ್ತಾ ರಜೆ ಮೇಲೆ ಹೋಗಿದ್ದಾರೆ. ಆದುದರಿಂದ ನಾನು ಕೇಂದ್ರ ಹಣಕಾಸು ಸಚಿವಾಲಯವನ್ನು ಮುಚ್ಚಲು ನಿರ್ಧರಿಸಿದ್ದೇನೆ. ಪ್ರಧಾನಿಯವರ ಕಾರ್ಯಾಲಯವು ಈ ಮೊದಲಿನಂತೆ ಎಲ್ಲ ಹಣಕಾಸು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ರಾಹುಲ್‌ ಗಾಂಧಿ ಮೋದಿ ಹೆಸರಲ್ಲಿ ವ್ಯಂಗ್ಯಭರಿತವಾಗಿ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಅವರು ತಮ್ಮ ಟ್ವೀಟ್‌ ಜತೆಗೆ ಇತ್ತೀಚೆಗಿನ ಮಾಧ್ಯಮವೊಂದರ ವರದಿಯನ್ನೂ ಪೋಸ್ಟ್‌ ಮಾಡಿದ್ದಾರೆ. ಜೇಟ್ಲಿ ಒಂದು ತಿಂಗಳಿನಿಂದ ಕಿಡ್ನಿ ಸಮಸ್ಯೆಯಿಂದ ಕಚೇರಿಗೆ ಬಂದಿಲ್ಲ. ಆಧಿಯಾ ಅವರು ಮೇ 20ರವರೆಗೂ ತಮ್ಮ ಗುರುಗಳಾದ ಮೈಸೂರಿನ ಸ್ವಾಮಿ ವಿಶಾರದಾನಂದ ಅವರಿಂದ ಯೋಗ ಮತ್ತು ಧ್ಯಾನವನ್ನು ಕಲಿಯಲು ರಜೆ ಹಾಕಿದ್ದಾರೆ. ಇವರಿಬ್ಬರ ಅನುಪಸ್ಥಿತಿಯಿಂದ ಸಚಿವಾಲಯದಲ್ಲಿ ಉಸ್ತುವಾರಿಗಳೇ ಇಲ್ಲದಂತಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Comments are closed.