ರಾಷ್ಟ್ರೀಯ

2019ರಲ್ಲಿ ದಕ್ಷಿಣದಲ್ಲಿ ಕಮಲಕ್ಕೆ ಕಾದಿದೆಯೇ ಕಠಿಣ ಪರೀಕ್ಷೆ?

Pinterest LinkedIn Tumblr


ದೇಶದ ಸಮಗ್ರ ಅಭಿವೃದ್ಧಿಯೊಂದಿಗೆ ಕಾಂಗ್ರೆಸ್‌ ಮುಕ್ತ ಭಾರತವೇ ತನ್ನ ಗುರಿ ಎಂದು ಹೇಳಿಕೊಂಡು ದೇಶಾದ್ಯಂತ ಅಧಿಕಾರದ ಗದ್ದುಗೆ ಏರುತ್ತಿರುವ ಬಿಜೆಪಿಗೆ ದಕ್ಷಿಣ ರಾಜ್ಯಗಳು ಮಾತ್ರ ಮುಳ್ಳಿನ ಹಾಸಿಗೆಯೇ. 2014ರ ಲೊಕಸಭೆ ಚುನಾವಣೆಯನ್ನು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎದುರಿಸಿ ಪ್ರಚಂಡ ಬಹುಮತದಿಂದ ಕೇಂದ್ರದ ಅಧಿಕಾರ ಹಿಡಿದಿದ್ದ ಬಿಜೆಪಿಗೆ, 2019ರ ಲೋಕಸಭೆ ಚುನಾವಣೆಯಲ್ಲಿ ಹಲವಾರು ಕಾರಣಗಳಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ಮಾತ್ರ ನುಂಗಲಾರದ ತುತ್ತಾಗುವ ಎಲ್ಲ ಸಾಧ್ಯತೆಗಳಿವೆ. ಕೇವಲ ದಕ್ಷಿಣ ಭಾರತದ ರಾಜ್ಯಗಳು ಅಂತಲ್ಲ. ಮುಂದೆ ನಡೆಯಲಿರುವ ಇಡೀ ಲೊಕಸಭೆ ಚುನಾವಣೆಯೇ ಬಿಜೆಪಿಗೆ ದೊಡ್ಡ ಸವಾಲು. ಏಕೆಂದರೆ ಶತಾಯ ಗತಾಯ ಬಿಜೆಪಿಯನ್ನು ಸೊಲಿಸ ಬೇಕೆಂದು ವಿಪಕ್ಷಗಳೆಲ್ಲವೂ ಒಟ್ಟಾಗಿ ಬಿಜೆಪಿ ವಿರುದ್ಧ ತೊಡೆ ತಟ್ಟಿವೆ.

2014ರ ಲೋಕಸಭೆಯ ಚುನಾವಣೆಯ ಅನಂತರ ನಡೆದ ಬಹುತೇಕ ವಿಧಾನಸಭೆ ಚುನಾವಣೆಗಳಲ್ಲಿ ಚುನಾವಣಾ ಚಾಣಕ್ಯ ಎಂದೇ ಕರೆಸಿಕೊಳ್ಳುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಮೋದಿ ಜೋಡಿ ಯಶಸ್ಸನ್ನು ಕಾಣುತ್ತಾ ಬಂದಿದೆ. ಆದರೆ ಇದೇ ಯಶಸ್ಸು ಇನ್ನೂ ಮುಂದುವರೆಯುತ್ತಾ ಎನ್ನುವ ಅನುಮಾನವೂ ಇದೆ. ಈ ಅನುಮಾನಕ್ಕೆ ಒಂದಿಷ್ಟು ನಿಖರ ಕಾರಣಗಳೂ ಇವೆ. ಜಾತಿ, ಮತೀಯವಾದ, ನದಿ ನೀರು ಹಂಚಿಕೆ ಹೀಗೆ ಹತ್ತು ಹಲವು ಕಾರಣಗಳು ದಕ್ಷಿಣ ಭಾರತದ ಮತದಾರರು ಬಿಜೆಪಿ ಮೇಲೆ ಮುನಿಸಿಕೊಳ್ಳಲು ಕಾರಣವಾಗಿವೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಹೊರತು ಪಡಿಸಿದರೆ ಉಳಿದ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಬಹಳ ಕಡಿಮೆ. ಕೇರಳದಲ್ಲಂತೂ ಕಮಲ ಅರಳಿಸಲು ಹಿಂದಿನಿಂದಲೂ ಬಿಜೆಪಿ ಸತತ ಪ್ರಯತ್ನ ಮಾಡುತ್ತಲೇ ಬಂದಿದೆ. ಹೀಗಿದ್ದರೂ ಅಲ್ಲಿಯ ಮತದಾರರು ಇಲ್ಲಿಯವರೆಗೆ ಮೆಚ್ಚಿದ್ದು ಮಾತ್ರ ಕಾಂಗ್ರೆಸ್‌ ಮತ್ತು ಎಡಪಂಥೀಯರನ್ನೇ. ಇನ್ನು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸುತ್ತಿರುವ ಆಡಳಿತಾರೂಢ‌ ತೆಲಗುದೇಶಂ ಪಕ್ಷ ಎನ್‌ಡಿಎ ಮೈತ್ರಿಕೂಟದಿಂದಲೇ ಹೊರ ನಡೆದಿದ್ದರೆ, ಇತ್ತ ತಮಿಳುನಡಿನಲ್ಲಾದರೂ ಹಿಡಿತ ಸಾಧಿಸಬೇಕೆಂದಿದ್ದ ಬಿಜೆಪಿಗೆ ನಟ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ರಾಜಕೀಯಕ್ಕೆ ಧುಮುಕುವ ಮೂಲಕ ಡಬಲ್‌ ಶಾಕ್‌ ನೀಡಿದ್ದಾರೆ.

ಕರ್ನಾಟಕವೇ ಹೆಬ್ಟಾಗಿಲು
ದಕ್ಷಿಣ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಲು ಬಿಜೆಪಿಗೆ ಕರ್ನಾಟಕವೇ ಹೆಬ್ಟಾಗಿಲು. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಹೇಳಿರುವಂತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ದಕ್ಷಿಣ ಭಾರತದ ಉಳಿದ ರಾಜ್ಯಗಳಲ್ಲಿ ಬಿಜೆಪಿ ಹಿಡಿತ ಸಾಧಿಸಲು ಸುಲಭವಾಗುತ್ತದೆ. ಇನ್ನೇನು ಕರ್ನಾಟಕ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿಗೆ ಒಳ್ಳೆಯ ಅವಕಾಶವಿದೆ. ಆದರೆ ಈ ಅವಕಾಶವನ್ನು ಬಿಜೆಪಿ ಎಷ್ಟು ಸದುಪಯೋಗ ಪಡಿಸಿಕೊಳ್ಳುತ್ತದೆ ಎನ್ನುವುದೇ ಇಲ್ಲಿ ಮುಖ್ಯವಾದದ್ದು. ಏಕೆಂದರೆ ರಾಜ್ಯದಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಆಡಳಿತಾ ರೂಢ ಪಕ್ಷದ ವೈಫ‌ಲ್ಯಗಳನ್ನು ಎತ್ತಿ ತೋರಿಸುವಲ್ಲಿ ಸಂಪೂರ್ಣ ವಿಫ‌ಲವಾಗಿದೆ. ಆಂತರಿಕ ಕಚ್ಚಾಟದಲ್ಲಿಯೇ ಇಷ್ಟು ಕಾಲ ಮುಳುಗಿಹೋಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಈ ಬಾರಿಯ ಗೆಲುವು ಸುಲಭದ ಮಾತೇನಲ್ಲ. ಹಿಂದುತ್ವದ ತಳಹದಿಯಲ್ಲಿಯೇ ನೆಲೆ ಕಂಡುಕೊಂಡ ಬಿಜೆಪಿ ರಾಜ್ಯದಲ್ಲಿನ ಕಾಂಗ್ರೆಸ್‌ ಸರಕಾರ ವೀರಶೈವ ಮತ್ತು ಲಿಂಗಾಯಿತರನ್ನು ಒಡೆಯಲು ಹೊರಟಿದ್ದರೂ ಇದಕ್ಕೆ ಪ್ರತಿಯಾಗಿ ಪರಿಣಾಮಕಾರಿ ಹೋರಾಟ ಸಂಘಟಿಸುವಲ್ಲಿ ಎಡವಿದೆ. ಹೀಗಾಗಿ ಸದ್ಯಕ್ಕೆ ಬಿಜೆಪಿ ಗೆಲುವು 50-50 ಎನ್ನಲಾಗುತ್ತದೆ. ಒಂದು ವೇಳೆ ಗೆದ್ದರೆ 2019ರ ಮಹಾಸಮರಕ್ಕೆ ಅಖಾಡ ಸಜ್ಜುಗೊಳ್ಳಿಸಲು ಸುಲಭವಾಗಬಹುದು. ಗೆಲ್ಲದಿದ್ದರೆ ಪಕ್ಷ ಇನ್ನಷ್ಟು ತಿಣುಕಾಡಬೇಕು. ಹೀಗಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗಿಂತಲೂ ಬಿಜೆಪಿಗೆ ಹೆಚ್ಚು ಮಹತ್ವದ್ದಾಗಿದೆ. ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸಕೊಳ್ಳಬೇಕಾದರೆ ಬಿಜೆಪಿಗೆ ಕರ್ನಾಟಕವೊಂದೇ ಗತಿ. ಉಳಿದೆಡೆ ಅದರದ್ದು ಲೆಕ್ಕಕುಂಟು ಆಟಕ್ಕಿಲ್ಲ ಎನ್ನುವ ಸ್ಥಿತಿ.

ಬಿಸಿ ತುಪ್ಪವಾಗಿರುವ ಕಾವೇರಿ, ಮಹದಾಯಿ
ಕರ್ನಾಟಕ- ತಮಿಳುನಾಡು, ಕರ್ನಾಟಕ- ಗೋವಾ ರಾಜ್ಯಗಳ ನಡುವೆ ಉಲ್ಬಣಿಸಿರುವ ಕಾವೇರಿ, ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಬಿಜೆಪಿ ತನ್ನ ನಿಲುವನ್ನು ಇನ್ನೂ ಸ್ಪಷ್ಟ ಪಡಿಸಿಲ್ಲ. ಕಾವೇರಿ ನಿರ್ವಹಣ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದ್ದರೂ ಕೂಡ ಕೇಂದ್ರ ಇನ್ನೂ ಆಸಕ್ತಿ ತೋರಿಸಿಲ್ಲ. ಆಸಕ್ತಿ ಎನ್ನುವುದಕ್ಕಿಂತಲೂ ಕೇಂದ್ರದ್ದು ಕತ್ತರಿ ನಡುವೆ ಇರುವ ಅಡಕೆಯ ಸ್ಥಿತಿ. ಅತ್ತ ಕಾವೇರಿ ನಿರ್ವಹಣಾ ಮಂಡಳಿ ರಚಿಸದಿದ್ದರೆ ತಮಿಳಿಗರ ಆಕ್ರೋಶಕ್ಕೆ ಕಾರಣವಾಗಬೇಕು. ಇತ್ತ ರಚಿಸಿದರೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಬೇಕು. ಮಹದಾಯಿ ಕತೆಯೂ ಇದೆ. ಈ ಎರಡೂ ವಿಷಯಗಳಲ್ಲಿ ಬಿಜೆಪಿ ತೆಗೆದುಕೊಳ್ಳುವ ನಿರ್ಧಾರ ಮುಂಬರುವ ಲೋಕಸಭೆಯ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ.

ಆದಾಯ ಹಂಚಿಕೆ ಸಮಸ್ಯೆ
ಇತ್ತೀಚೆಗೆ ತಿರುವನಂತಪುರದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಹಣಕಾಸು ಸಚಿವರ ಸಭೆಯೊಂದು ನಡೆಯಿತು. ಈ ಸಭೆಗೆ ಕಾರಣವಿಷ್ಟೆ, 15ನೇ ಹಣಕಾಸು ಆಯೋಗದ ಪ್ರಕಾರ ಜನಸಂಖ್ಯೆಯ ಅಧಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಣ ಹಂಚಿಕೆ ಆಗಬೇಕು. ಈ ಪ್ರಕಾರ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳಿಗೆ ಹಂಚಿಕೆ ಆಗುವ ಆದಾಯವು ಕಡಿಮೆಯೇ. ಹೀಗಾದಲ್ಲಿ ದಕ್ಷಿಣ ರಾಜ್ಯಗಳಿಗೆ ಸಿಗುವುದು ತುಂಬಾ ಕಡಿಮೆ ಆದಾಯ. ಏಕೆಂದರೆ ಉಳಿದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಸಾಧಿಸಿವೆ. ಸಿಗುವ ಆದಾಯ ಕಡಿಮೆಯಾದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂಬುದು ದಕ್ಷಿಣ ರಾಜ್ಯಗಳ ವಾದ. ಒಂದು ವೇಳೆ ಹಣಕಾಸು ಆಯೋಗದ ಶಿಫಾರಸ್ಸನ್ನು ಕೇಂದ್ರ ಚಾಚೂ ತಪ್ಪದೆ ಪಾಲಿಸಿದಲ್ಲಿ ದಕ್ಷಿಣ ರಾಜ್ಯಗಳನ್ನು ನಿರ್ಲಕ್ಷಿಸಿದ ಆರೋಪವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಇದು ಮುಂಬರುವ ಚುನಾವಣೆಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಪಕ್ಷದ ಹಿನ್ನೆಡೆಗೆ ಕಾರಣವಾಗಬಹುದು.

ದಕ್ಷಿಣದಲ್ಲಿ ಬಿಜೆಪಿಯ ಬಲಾಬಲ
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದಿಂದ ಗೆದ್ದಿದ್ದರೂ ಉಳಿದ ಭಾಗಗಳಿಗೆ ಹೋಲಿಸಿದರೆ ದಕ್ಷಿಣ ರಾಜ್ಯಗಳಲ್ಲಿ ಗಳಿಸಿದ್ದು ಬೆರಳೆಣಿಕೆ ಸೀಟುಗಳನ್ನು ಮಾತ್ರ. 28 ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ದಕ್ಕಿದ 17 ಸೀಟುಗಳು ದಕ್ಷಿಣದ ರಾಜ್ಯವೊಂದರಲ್ಲಿ ಬಿಜೆಪಿಯ ಅತಿ ಹೆಚ್ಚಿನ ಗಳಿಕೆ. 20 ಸ್ಥಾನವನ್ನು ಹೊಂದಿರುವ ಕೇರಳದಲ್ಲಿ ಖಾತೆಯೂ ತೆರದಿರಲಿಲ್ಲ. 25 ಸ್ಥಾನಗಳನ್ನು ಹೊಂದಿರುವ ಆಂಧ್ರ ಪ್ರದೇಶ ಮತ್ತು 2 ಸ್ಥಾನಗಳನ್ನು ಹೊಂದಿರುವ ಗೋವಾದಲ್ಲಿ ತಲಾ 2, ತಮಿಳುನಾಡಿನ 39 ಸ್ಥಾನಗಳು ಮತ್ತು ತೆಲಂಗಾಣದ 19 ಸ್ಥಾನಗಳಲ್ಲಿ ತಲಾ ಒಂದು ಸೀಟನ್ನು ಮಾತ್ರ ಗೆದ್ದಿತ್ತು.

ಮುಂದಿನ ದಾರಿ
2019ರ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ನಡೆಸಿದ್ದು, ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಪಡೆಯ ಬಹುದಾದ ಕಡಿಮೆ ಸ್ಥಾನಗಳನ್ನು ಸರಿದೂಗಿಸಲು ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪಡೆಯಬಹುದಾದ ಸ್ಥಾನಗಳನ್ನು ಇಮ್ಮಡಿಗೊಳಿಸಲು ಸಿದ್ಧತೆ ನಡೆಸಿದೆ. ಮಾಜಿ ಕಾಂಗ್ರೆಸ್ಸಿಗ, ಸದ್ಯ ಈಶಾನ್ಯ ಭಾರತದಲ್ಲಿ ಬಿಜೆಪಿಯ ನೀಲಿಗಣ್ಣಿನ ಹುಡುಗ ಹಿಮಂತ ಬಿಸ್ವಾ ಸರ್ಮಾ ಈ ಪ್ರದೇಶದಲ್ಲಿ ಪಕ್ಷ ವಿಸ್ತರಣೆಗೆ ನೆರವಾಗಬಹುದೆಂಬ ನಿರೀಕ್ಷೆಯಲ್ಲಿ ಬಿಜೆಪಿಯಿದೆ. ಮಿಜೋರಾಂ ಹೊರತುಪಡಿಸಿ ಈಶಾನ್ಯದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಶಕ್ತಿಶಾಲಿಯಾಗಿವೆ. ಮುಂದಿನ ಚುನಾವಣೆಯಲ್ಲಿ ಈ ಪ್ರದೇಶದ 25 ಸ್ಥಾನಗಳಲ್ಲಿ ಕನಿಷ್ಟ 20 ಸ್ಥಾನಗಳನ್ನಾದರೂ ಗೆಲ್ಲಬೇಕೆಂಬ ಲೆಕ್ಕಾಚಾರ ಬಿಜೆಪಿಯದ್ದು. ಬಿಜೆಪಿ ಸ್ವರ್ಣಯುಗ ಇನ್ನೂ ಆರಂಭವಾಗಿಲ್ಲ. ಕೇರಳ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಗೆಲುವು ಸಾಧಿಸಿದ ಮೇಲೆ ಸ್ವರ್ಣಯುಗ ಆರಂಭವಾಗುತ್ತದೆ ಎಂದು ತ್ರಿಪುರಾದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದ ಸಂದರ್ಭದಲ್ಲಿ ಅಮಿತ್‌ ಶಾ ಹೇಳಿದ್ದರು. ಈ ಹೇಳಿಕೆ ಉತ್ತರ ಮತ್ತು ಪಶ್ಚಿಮ ರಾಜ್ಯಗಳು ಬಿಜೆಪಿಗೆ ಎಷ್ಟು ಪ್ರಮುಖವಾದವು ಎನ್ನುವುದನ್ನು ತಿಳಿಸುತ್ತದೆ. ಇದೇ ವೇಳೆ ದ್ರಾವಿಡ ನಾಡು ವಾದ ಮತ್ತೂಮ್ಮೆ ಕೇಳಿ ಬರುತ್ತಿದೆ. ಡಿಎಂಕೆ ಇತ್ತೀಚೆಗೆ ದ್ರಾವಿಡ ನಾಡು ಸ್ಥಾಪನೆಯ ಮಾತನ್ನಾಡುತ್ತಿದೆ. ದ್ರಾವಿಡ ನಾಡು ಎಂದರೆ ದಕ್ಷಿಣ ರಾಜ್ಯಗಳು ಒಂದಾಗಿ ಪ್ರತ್ಯೇಕ ದೇಶ ಮಾಡಿಕೊಳ್ಳುವುದು ಎಂದು ಅರ್ಥ.ಹಾಗೆಂದು ಇದು ಹೊಸ ವಾದವೇನೂ ಅಲ್ಲ, ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕೆಲವು ಪಕ್ಷಗಳು ಮತ್ತೂಮ್ಮೆ ಈ ವಾದಕ್ಕೆ ಜೋತುಬೀಳಬಹುದು. ಹೀಗಾದರೆ ಇನ್ನೂ ಒಂದು ಸಮಸ್ಯೆ ಕೇಂದ್ರ ಅರ್ಥಾತ್‌ ಬಿಜೆಪಿಯ ಹೆಗಲೇರಿದಂತಾಗುತ್ತದೆ. ಈ ಸಮಸ್ಯೆಗಳ ಬಲೆಯಿಂದ ಬಿಡಿಸಿಕೊಂಡರಷ್ಟೇ ದಕ್ಷಿಣ ಭಾರತದಲ್ಲಿ ಪೂರ್ಣವಾಗಿ ಕಮಲ ಅರಳಲು ವೇದಿಕೆ ಸಿದ್ಧವಾಗಬಹುದು.

ಪ್ರಸನ್ನ ಹೆಗಡೆ ಊರಕೇರಿ

-Udayavani

Comments are closed.