ರಾಷ್ಟ್ರೀಯ

ಕಥುವಾ ಗ್ಯಾಂಗ್ ರೇಪ್ ಸರಿ ಎಂದಿದ್ದ ಬ್ಯಾಂಕ್ ನೌಕರ ವಜಾ

Pinterest LinkedIn Tumblr


ಕೊಚ್ಚಿ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಫೇಸ್‌ಬುಕ್‌ನಲ್ಲಿ ಸಮರ್ಥಿಸಿಕೊಂಡಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬರನ್ನು ಕೋಟಕ್ ಮಹಿಂದ್ರಾ ಬ್ಯಾಂಕ್ ಸೇವೆಯಿಂದ ವಜಾಗೊಳಿಸಿದೆ.

ವಿಷ್ಣು ನಂದಕುಮಾರ್ ಎಂಬುವವರೇ ಕೆಲಸ ಕಳೆದುಕೊಂಡಿರುವ ಉದ್ಯೋಗಿ. ತನ್ನ ಫೇಸ್‍ಬುಕ್‌ನಲ್ಲಿ ಕಥುವಾ ಗ್ಯಾಂಗ್ ರೇಪ್ ಬಗ್ಗೆ ಮಲಯಾಳಂ ಭಾಷೆಯಲ್ಲಿ ಪೋಸ್ಟ್ ಮಾಡಿದ್ದರು. ‘ಮಗುವಿನ ಮೇಲೆ ನಡೆದ ಅತ್ಯಾಚಾರ ತುಂಬಾ ಖುಷಿ ಕೊಟ್ಟಿದೆ. ಈಗ ಆಕೆ ಸತ್ತಿದ್ದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಮುಂದೊಂದು ದಿನ ಮಾನವ ಬಾಂಬ್ ಆಗಿ ನೂರಾರು ಮಂದಿಯನ್ನು ಬಲಿತೆಗೆದುಕೊಳ್ಳುತ್ತಿದ್ದಳು’ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್‌ನಲ್ಲಿ ಯಾರೊಬ್ಬರ ಹೆಸರಾಗಲಿ, ಘಟನೆಯ ಬಗ್ಗೆಯಾಗಲಿ ಪ್ರಸ್ತಾಪಿಸಿರದಿದ್ದರೂ ನಂದಕುಮಾರ್ ವಿರುದ್ಧ ನೇಟಿಜನ್ಸ್ ಸಿಡಿದು ಬಿದ್ದರು. ಅವರು ಕೋಟಕ್ ಮಹಿಂದ್ರಾ ಬ್ಯಾಂಕ್ ಉದ್ಯೋಗಿ ಎಂಬುದನ್ನು ಫೇಸ್‌ಬುಕ್ ಮೂಲಕ ತಿಳಿದುಕೊಂಡ ನೆಟ್ಟಿಗರು ಬ್ಯಾಂಕ್‍ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು.

ನಂದಕುಮಾರ್ ವಿರುದ್ಧ ಕ್ರಮಕೈಗೊಳ್ಳಿ, ಅವರನ್ನು ಸೇವೆಯಿಂದ ವಜಾಗೊಳಿಸಿ ಎಂಬ ಕಾಮೆಂಟ್‌ಗಳ ಮಹಾಪೂರವೇ ಕೋಟಕ್ ಮಹಿಂದ್ರಾ ಬ್ಯಾಂಕ್‌ಗೆ ಹರಿದು ಬಂದವು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ನಂದಕುಮಾರ್‌ರನ್ನು ಸೇವೆಯಿಂದ ವಜಾಗೊಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ನಂದಕುಮಾರ್ ವಿರುದ್ಧ ನೇಟಿಜನ್ಸ್ ತೀವ್ರ ಖಂಡನೆ, ಆಕ್ರೋಶ ವ್ಯಕ್ತಪಡಿಸಿದ ಕಾರಣ ಅವರು ಖಾತೆಯನ್ನು ಡಿಲೀಟ್ ಮಾಡಿದ್ದರು. ನಂದಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು, ಇಲ್ಲದಿದ್ದರೆ ಬ್ಯಾಂಕ್ ಮೇಲೆ ಕಲ್ಲು ತೂರಾಟ ಮಾಡುವುದಾಗಿಯೂ ಕೆಲವರು ಎಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬ್ಯಾಂಕ್ ಆಡಳಿತ ಮಂಡಳಿ, ‘ಏಪ್ರಿಲ್ 11ರಂದು ವಿಷ್ಣು ನಂದಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇಂತಹ ಹೇಳಿಕೆಯನ್ನು ಯಾರು ನೀಡಿದರು ಸಹಿಸುವುದಿಲ್ಲ’ ಎಂದು ತನ್ನ ಉದ್ಯೋಗಿಗಳಿಗೆ ಎಚ್ಚರಿಸಿದೆ. ಕೆಲಸದಲ್ಲಿ ನೈಪುಣ್ಯತೆ ನೀಡದ ಕಾರಣ ಅವರನ್ನು ಉದ್ಯೋಗದಿಂದ ತೊಲಗಿಸಲಾಗಿದೆ ಎಂಬ ಕಾರಣವನ್ನು ಬ್ಯಾಂಕ್ ನೀಡಿರುವುದು ಗಮನಾರ್ಹ.

Comments are closed.