ರಾಷ್ಟ್ರೀಯ

ರಾಜಕಾರಣಿ ಪುತ್ರಿಗೆ ಮರ್ಯಾದಾ ಹತ್ಯೆ ಭಯ!

Pinterest LinkedIn Tumblr


ಹೊಸದಿಲ್ಲಿ: ಬಲವಂತದ ಮದುವೆಗೆ ಒಳಗಾದ ಕಲಬುರ್ಗಿಯ ಮಾಜಿ ಸಚಿವ, ಬಿಜೆಪಿ ಮುಖಂಡರೊಬ್ಬರ ಪುತ್ರಿಗೆ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರಕಾರ ಮತ್ತು ದಿಲ್ಲಿ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದೆ.

ಪ್ರಸಕ್ತ ದಿಲ್ಲಿಯಲ್ಲಿ ವಾಸವಾಗಿರುವ ಈ ಮಹಿಳೆ ಕಾಂಗ್ರೆಸ್‌ ಮುಖಂಡರೊಬ್ಬರ ಮಗನನ್ನು ಪ್ರೀತಿಸುತ್ತಿದ್ದರು. ಯುವಕ ಅನ್ಯಜಾತಿಗೆ ಸೇರಿದವನು ಮತ್ತು ಆತನ ತಂದೆ ಬೇರೆ ಪಕ್ಷದವರು ಎಂಬ ಕಾರಣದಿಂದ ಮನೆಯವರು ಮದುವೆಗೆ ಒಪ್ಪಲಿಲ್ಲ. ಬಲವಂತದಿಂದ ತಮ್ಮದೇ ಸಮುದಾಯದ ಹುಡುಗನ ಜತೆ ಕಳೆದ ಮಾರ್ಚ್‌ 14ರಂದು ಮದುವೆ ಮಾಡಿಸಿದರು.

ತಮ್ಮ ಕುಟುಂಬದವರು ರಾಜಕಾರಣದಲ್ಲಿ ಸಕ್ರಿಯವಾಗಿರುವುದರಿಂದ ಮಾರ್ಯಾದಾ ಹತ್ಯೆ ನಡೆಸಬಹುದೆಂಬ ಭಯದಿಂದ ಮದುವೆ ಸಮಯದಲ್ಲಿ ಚಕಾರ ಎತ್ತಲಿಲ್ಲ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದರು. ತಮ್ಮ ಒಪ್ಪಿಗೆ ಇಲ್ಲದೇ ಈ ಮದುವೆ ನಡೆದಿದ್ದು, ಅದನ್ನು ರದ್ದುಪಡಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಯುವತಿ ಮನವಿ ಮಾಡಿದ್ದಾರೆ. ಮಾತ್ರವಲ್ಲದೆ, ಮದುವೆಗೆ ಗಂಡು ಅಥವಾ ಹೆಣ್ಣಿನ ಸಮ್ಮತಿ ಬೇಕಾಗಿಲ್ಲ ಎಂದು ಹೇಳುವ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 5 ಮತ್ತು 7ಅನ್ನು ರದ್ದು ಮಾಡಬೇಕು ಎಂದೂ ಒತ್ತಾಯಿಸಿದ್ದರು.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ ಮಹಿಳೆಯ ಮನವಿಯನ್ನು ಹೇಬಿಯಸ್‌ ಕಾರ್ಪಸ್‌ ಆಗಿ ಸ್ವೀಕರಿಸುವುದಾಗಿ ಹೇಳಿತು. ಆದರೆ, ಮಹಿಳೆಯ ಪರವಾಗಿ ವಾದ ಮಾಡುತ್ತಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಬಯಸಿದಂತೆ ಕಾಯಿದೆ ಅಂಶಗಳ ಬಗ್ಗೆ ಸದ್ಯಕ್ಕೆ ಚರ್ಚೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿತು.ಒಂದೊಮ್ಮೆ ಇದು ಬಲವಂತದ ಮದುವೆಯಾಗಿದ್ದರೆ ಅದನ್ನು ರದ್ದುಪಡಿಸಲು ಕಾಯಿದೆಯ ಸೆಕ್ಷನ್‌ 12ಸಿ ಅವಕಾಶ ನೀಡುತ್ತದೆ ಎಂದು ಕೋರ್ಟ್‌ ಹೇಳಿತು. ಯುವತಿಯ ಹೆತ್ತವರು ಪ್ರಭಾವಿಗಳಾದ್ದರಿಂದ ಆಕೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೇಂದ್ರ ಸರಕಾರ, ಅದರ ಅಧೀನದಲ್ಲಿರುವ ದಿಲ್ಲಿ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿತು. ಮಹಿಳೆ ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದಾರೆ.

ಈ ನಡುವೆ, ಮಹಿಳೆ ಮತ್ತು ಆಕೆಯನ್ನು ಬಲವಂತವಾಗಿ ಮದುವೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಹೆತ್ತವರ ವಿವರವನ್ನು ಬಹಿರಂಗಪಡಿಸಬಾರದು ಎಂದೂ ಸೂಚನೆ ನೀಡಿತು. ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ನಿಗದಿಪಡಿಸಲಾಗಿದೆ.

Comments are closed.