ಹೊಸದಿಲ್ಲಿ : ಮುಸ್ಲಿಮರಲ್ಲಿನ ಬಹು ಪತ್ನಿತ್ವಕ್ಕಿಂತಲೂ ರಾಮ ಮಂದಿರ – ಬಾಬರಿ ಮಸೀದಿ ಇತ್ಯರ್ಥವು ಹೆಚ್ಚು ಮಹತ್ವದ್ದಾಗಿದೆ ಎಂದು ಮುಸ್ಲಿಂ ಕಕ್ಷಿದಾರರ ವಕೀಲರು ಇಂದು ಸುಪ್ರೀಂ ಕೋರ್ಟಿಗೆ ಹೇಳಿದರು.
ಸರ್ವೋಚ್ಚ ನ್ಯಾಯಾಲಯದಲ್ಲಿಂದು ಅಯೋಧ್ಯೆ ವಿವಾದ ಕುರಿತ ವಿಚಾರಣೆ ಪುನರಾರಂಭಗೊಂಡಿತು.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ಹಿತಾಸಕ್ತರ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಈ ವಿಷಯವನ್ನು ಐದು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖೀಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಹೇಳಿತು. ಅಯೋಧ್ಯೆ ವಿವಾದವನ್ನು ವಿಸ್ತೃತ ಸಾಂವಿಧಾನಿಕ ಪೀಠಕ್ಕೆ ಒಪ್ಪಿಸಬೇಕೆಂಬ ಅರ್ಜಿಯನ್ನು ಉಲ್ಲೇಖೀಸಿ ಪೀಠವು ಈ ಉತ್ತರ ನೀಡಿತು.
ಇದಕ್ಕೆ ಮುನ್ನ ಮುಸ್ಲಿಂ ಕಕ್ಷಿದಾರರ ವಕೀಲರಾದ ರಾಜೀವ್ ಧವನ್ ಅವರು ತಮ್ಮ ವಾದವನ್ನು ಮಂಡಿಸುತ್ತಾ, “ಮುಸ್ಲಿಮರಲ್ಲಿನ ಬಹು ಪತ್ನಿತ್ವದ ವಿಷಯಕ್ಕಿಂತ ಅಯೋಧ್ಯೆಯ ಭೂ ವಿವಾದವು ಹೆಚ್ಚಿನ ಮಹತ್ವದ್ದಾಗಿದೆ; ಅಂತೆಯೇ ಇಡಿಯ ರಾಷ್ಟ್ರ ಇದಕ್ಕೆ ಉತ್ತರ ಪಡೆಯಲು ಬಯಸುತ್ತದೆ’ ಎಂದು ಹೇಳಿದರು.
ಅಯೋಧ್ಯೆ ವಿವಾದದ ವಿಚಾರಣೆಯ ಮುಂದಿನ ದಿನಾಂಕವನ್ನು ಸರ್ವೋಚ್ಚ ನ್ಯಾಯಾಲಯ ಎಪ್ರಿಲ್ 27ಕ್ಕೆ ನಿಗದಿಸಿತು. ನಾಲ್ಕು ಸಿವಿಲ್ ದಾವೆಗಳಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 14 ಮೇಲ್ಮನವಿಗಳು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇವೆ.
-ಉದಯವಾಣಿ
Comments are closed.