ರಾಷ್ಟ್ರೀಯ

ಜಯಲಲಿತಾ ಅನಾರೋಗ್ಯದಿಂದ ಸಾವಿನ ವರೆಗೆ: ಶಶಿಕಲಾ ಅಫಿದವಿತ್‌

Pinterest LinkedIn Tumblr


ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ 2014ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಕಟವಾದ ನಂತರ ಮತ್ತಷ್ಟು ಹದಗೆಟ್ಟಿತು; 2014ರ ನವೆಂಬರ್‌ನಿಂದ 2016ರ ಸೆಪ್ಟೆಂಬರ್‌ ವರೆಗೆ ಅವರು 20 ಮಂದಿ ವಿವಿಧ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ಕಳೆದ ವಾರ ನ್ಯಾಯಮೂರ್ತಿ ಆರ್ಮುಗಸಾಮಿ ಆಯೋಗದ ಮುಂದೆ ಸಲ್ಲಿಸಿದ ಅಫಿದವಿತ್‌ನಲ್ಲಿ ತಿಳಿಸಿದ್ದಾರೆ.

ಶಶಿಕಲಾರ ವಕೀಲ ರಾಜಾ ಸೆಂತೂರ್‌ ಪಾಂಡಿಯನ್‌ ಅಫಿದವಿತ್‌ ಸಲ್ಲಿಕೆಯನ್ನು ದೃಢಪಡಿಸಿದ್ದಾರೆ. 55 ಪುಟಗಳಿರುವ ಈ ಅಫಿದವಿತ್‌ 90 ಪ್ಯಾರಾಗಳನ್ನು ಒಳಗೊಂಡಿದೆ.

2016ರ ಸೆಪ್ಟೆಂಬರ್‌ 22ರಂದು ಜಯಲಲಿತಾ ತಮ್ಮ ಬಾತ್‌ರೂಂನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಅವರನ್ನು ತಾವೇ ಎತ್ತಿ ಹಾಸಿಗೆ ಮೇಲೆ ಮಲಗಿಸಿ, ಬಳಿಕ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಶಶಿಕಲಾ ಹೇಳಿದ್ದಾರೆ. ಆಗಿನಿಂದ ಜಯಲಲಿತಾ ಪ್ರಜ್ಞಾಹೀನರಾಗಿಯೇ ಇದ್ದರು.
jayalalithaa fell unconscious in bathroom on sept 22, 2016: sasikala informs panel
ಜಯಲಲಿತಾ ಅನಾರೋಗ್ಯದಿಂದ ಸಾವಿನ ವರೆಗೆ: ಶಶಿಕಲಾ ಅಫಿದವಿತ್‌
ಮರುದಿನ ಜಯಲಲಿತಾ ಆರೋಗ್ಯ ಸ್ವಲ್ಪ ಸುಧಾರಿಸಿತು. ಅವರು ಮಾತನ್ನೂ ಆಡುತ್ತಿದ್ದರು ಎಂದು ಅಫಿದವಿತ್‌ ತಿಳಿಸಿದೆ.

ಸೆಪ್ಟೆಂಬರ್ 26ರಂದು ಅವರನ್ನು ತುರ್ತು ಚಿಕಿತ್ಸಾ ಕೊಠಡಿಯಿಂದ ಬಹು ವಿಷಯಗಳ ತೀವ್ರ ನಿಗಾ ವಿಭಾಗಕ್ಕೆ (ಮಲ್ಟಿ ಡಿಸಿಪ್ಲಿನರಿ ಕ್ರಿಟಿಕಲ್ ಕೇರ್‌) ವರ್ಗಾಯಿಸಲಾಯಿತು. ತಾವು ಪ್ರಜ್ಞಾಹೀನರಾಗಿದ್ದುದರಿಂದ ಆಸ್ಪತ್ರೆಗೆ ಕರೆತರಲು ಸಾಧ್ಯವಾಯಿತು; ತಾವು ಎಚ್ಚರವಾಗಿದ್ದರೆ ಆಸ್ಪತ್ರೆಗೆ ಕರೆತರಲು ಬಿಡುತ್ತಿರಲಿಲ್ಲ ಎಂದು ಜಯಲಲಿತಾ ಲಘುಧಾಟಿಯಲ್ಲಿ ಹೇಳಿದ್ದರು ಎಂದು ಶಶಿಕಲಾ ಅಫಿದವಿತ್‌ ತಿಳಿಸಿದೆ.

ಆಸ್ಪತ್ರೆಯಲ್ಲಿ ಜಯಲಲಿತಾ ಅವರನ್ನು ಭೇಟಿ ಮಾಡಲು ಅನುಮತಿಸಲಾದ ಸಚಿವರು ಮತ್ತು ಪಕ್ಷದ ಮುಖಂಡರ ಹೆಸರುಗಳನ್ನೂ ಅಫಿದವಿತ್‌ನಲ್ಲಿ ಸೇರಿಸಿದ್ದಾರೆ. ಈ ಪಟ್ಟಿಯಲ್ಲಿ ಕಾರ್ಮಿಕ ಸಚಿವ ನಿಲೋಫರ್‌ ಕಫೀಲ್ ಮತ್ತು ಲೋಕಸಭೆ ಉಪ ಸ್ಪೀಕರ್‌ ಎಂ ತಂಬಿದುರೈ ಸೇರಿದ್ದಾರೆ.
ಆಗಿನ ಉಸ್ತುವಾರಿ ರಾಜ್ಯಪಾಲ ಸಿ. ವಿದ್ಯಾಸಾಗರ್‌ ರಾವ್‌ ಅವರೂ ಎರಡು ಆಬರಿ ಆಸ್ಪತ್ರೆಗೆ ಭೇಟಿ ನೀಡಿ ಜಯಲಲಿತಾ ಅವರ ಆರೋಗ್ಯ ವಿಚಾರಿಸಿ ಹೋಗಿದ್ದರು. ಆಗ ಜಯಲಲಿತಾ ಗಾಜಿನ ಗೋಡೆಯ ಒಳಗಿನಿಂದಲೇ ರಾಜ್ಯಪಾಲರ ಕಡೆಗೆ ಕೈಬೀಸಿ ವಂದಿಸಿದ್ದರು ಎಂದು ಅಫಿದವಿತ್‌ನಲ್ಲಿ ಹೇಳಲಾಗಿದೆ.

2016ರ ಸೆಪ್ಟೆಂಬರ್‌ 28ರಂದು ಜಯಲಲಿತಾ ಅವರ ಆರೋಗ್ಯಸ್ಥಿತಿ ತೀವ್ರ ಹದಗೆಟ್ಟಿತ್ತು. ಆ ಬಳಿಕ ಎಐಐಎಂಎಸ್‌ ವೈದ್ಯರು ಆಗಮಿಸಿ ಅವರಿಗೆ ಕೃತಕ ಉಸಿರಾಟ ನಳಿಕೆಗಳನ್ನು ಜೋಡಿಸುವಂತೆ ಸಲಹೆ ನೀಡಿದರು. ಹಿಂದಿನ ದಿನವಷ್ಟೇ ಜಯಲಲಿತಾ ಮುಖ್ಯ ಕಾರ್ಯದರ್ಶಿ ರಾಮ ಮೋಹನ್‌ ರಾವ್‌ ಮತ್ತು ಶೀಲಾ ಬಾಲಕೃಷ್ಣನ್‌ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು ಎಂದು ಅಫಿದವಿತ್‌ ಹೇಳಿದೆ.
ಅನಂತರ 10 ದಿನಗಳ ಬಳಿಕ ಜಯಲಲಿತಾ ಆರೋಗ್ಯ ಸ್ವಲ್ಪ ಸುಧಾರಿಸಿತು. ತಮಗೆ ಅಳವಡಿಸಿದ್ದ ಎಲ್ಲ ಕೊಳವೆಗಳನ್ನು ಸ್ವತಃ ತೆಗೆದುಹಾಕಿದ್ದರು. ಅವರು ಲಘು ವ್ಯಾಯಾಮಗಳನ್ನು ಮಾಡುತ್ತಿದ್ದರು ಮತ್ತು ಸಾಮಾನ್ಯ ಆಹಾರವನ್ನು ಸೇವಿಸಲಾರಂಭಿಸಿದ್ದರು ಎಂದು ಅಫಿದವಿತ್ ತಿಳಿಸಿದೆ.

ಜಯಲಲಿತಾ ಅವರು ಎಐಎಡಿಎಂಕೆ ಉಪ ಚುನಾವಣೆ ಅಭ್ಯರ್ಥಿಗಳ ಅಫಿದವಿತ್‌ಗಳ ಮೇಲೆ ಸ್ವತಃ ಹೆಬ್ಬೆರಳಿನ ಮುದ್ರೆ ಒತ್ತಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬುದನ್ನು ತಾವೇ ಬರೆದು ಕೊಟ್ಟಿದ್ದರು. ಅದರ ಒಂದು ಪ್ರತಿ ಪೋಯೆಸ್‌ ಗಾರ್ಡನ್‌ನ ಅವರ ಕೋಣೆಯಲ್ಲಿ ಈಗಲೂ ಇದೆ ಎಂದು ಶಶಿಕಲಾ ತಿಳಿಸಿದ್ದಾರೆ.
2016ರ ಡಿಸೆಂಬರ್‌ 3ರಂದು ಮುಖ್ಯ ಕಾರ್ಯದರ್ಶಿ ರಾಮ ಮೋಹನ್‌ ರಾವ್‌ ಅವರು ಜಯಲಲಿತಾರನ್ನು ಭೇಟಿ ಮಾಡಿ ನಮಸ್ಕರಿಸಿದ್ದರು ಎಂದು ಮೂಲಗಳು ಹೇಳಿವೆ.

ತಾವೇ ಬಯಸದ ಹೊರತು ಯಾರೂ ಆಸ್ಪತ್ರೆಗೆ ಬಂದು ತಮ್ಮನ್ನು ಭೇಟಿ ಮಾಡಬಾರದು ಎಂದು ಜಯಲಲಿತಾ ತಾಕೀತು ಮಾಡಿದ್ದರು. ತಾವು ಪೂರ್ಣ ಆರೋಗ್ಯವಂತರಾಗಿ ಮನೆಗೆ ಮರಳಿದ ಬಳಿಕ ಯಾರು ಬೇಕಾದರೂ ಬಂದು ಭೇಟಿಯಾಗಬಹುದು ಎಂದೂ ಜಯಲಲಿತಾ ಹೇಳಿದ್ದರು ಎಂದು ಅಫಿದವಿತ್‌ನ 60ನೇ ಪ್ಯಾರಾದಲ್ಲಿ ತಿಳಿಸಲಾಗಿದೆ.

Comments are closed.