ಪುಣೆ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರೇ ರೋಗಿಯೊಬ್ಬರಿಗೆ ಕಾಯಿಲೆ ಗುಣಪಡಿಸಲು ಮಾಂತ್ರಿಕನನ್ನು ಕರೆದುಕೊಂಡು ಬಂದು ಪೂಜೆ ಮಾಡಿಸಿದ ವೀಡಿಯೋ ವೈರಲ್ ಆಗಿದೆ.
ಕಳೆದ ಭಾನುವಾರದಂದು ಸಂಧ್ಯಾ ಸೋನಾವಾನೆ ಎಂಬ ಮಹಿಳೆ ಎದೆಗೆ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಡಾ.ಸತೀಶ್ ಚವಾಣ್ ಎಂಬರ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಧ್ಯಾ ಸೋಮವಾರದಂದು ಮೃತಪಟ್ಟಿದ್ದರು. ಈ ವೇಳೆಗಾಗಲೇ ಮಂತ್ರವಾದಿಯ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ.
ಮಾಹಿತಿಗಳ ಪ್ರಕಾರ ಐಸಿಯುನಲ್ಲಿ ದಾಖಲಾಗಿದ್ದ ಸಂಧ್ಯಾಗೆ ಡಾ.ಚವಾಣ್ ಓರ್ವ ಮಾಂತ್ರಿಕನನ್ನು ಕರೆತಂದು ಕೆಲ ಪೂಜಾ ವಿಧಾನಗಳನ್ನು ಮಾಡಿಸಿದ್ದಾರೆ. ಸಂಧ್ಯಾ ಅವರ ಕುಟುಂಬಸ್ಥರು ಯಾರೂ ಈ ಮಾಂತ್ರಿಕನನ್ನು ಕರೆತರಲು ಹೇಳಿರಲಿಲ್ಲ. ಅಲ್ಲದೇ ಈ ಮಂತ್ರವಾದಿಯ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಇದೆಲ್ಲಾ ವೈದ್ಯ ಚವಾಣ್ ನೇತೃತ್ವದಲ್ಲಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಆದರೆ ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ಇದನ್ನು ನಿರಾಕರಿಸಿದ್ದು, ವೈದ್ಯರಿಗೂ ಹಾಗೂ ಆಸ್ಪತ್ರೆ ಸಿಬ್ಬಂದಿಗೂ ಈ ಮಾಂತ್ರಿಕನ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಘಟನೆ ಕುರಿತು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿಯ ಸದಸ್ಯರು ಪೊಲೀಸರನ್ನು ಸಂಪರ್ಕಿಸಿದ್ದು, ವೈದ್ಯ ಚವಾಣ್ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
Comments are closed.