ರಾಷ್ಟ್ರೀಯ

ಅಮ್ಮನ ಅಂತ್ಯಕ್ರಿಯೆಗೆ ಭಿಕ್ಷೆ ಬೇಡಿದ ಮಕ್ಕಳು

Pinterest LinkedIn Tumblr


ಚೆನ್ನೈ: ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ತಾಯಿಯ ಅಂತ್ಯಕ್ರಿಯೆಗೆ ಪುಟ್ಟ ಮಕ್ಕಳು ಆಸ್ಪತ್ರೆ ಆವರಣದಲ್ಲಿ ಭಿಕ್ಷೆ ಬೇಡಿ ದುಡ್ಡು ಹೊಂದಿಸಿದ ಕರುಣಾಜನಕ ಘಟನೆ ಸಂಭವಿಸಿದೆ.

ದಿಂಡುಗಲ್‌ ಸರಕಾರಿ ಆಸ್ಪತ್ರೆಯಲ್ಲಿ 40 ವರ್ಷ ವಿಜಯ ಸ್ತನ ಕ್ಯಾನ್ಸರ್‌ನಿಂದ ಬುಧವಾರ ಮೃತರಾದರು. ಮಕ್ಕಳಾದ ಮೋಹನ್‌(14) ಮತ್ತು ವೇಲ್‌ಮುರುಗನ್‌(13) ತಾಯಿಯ ಅಂತ್ಯ ಸಂಸ್ಕಾರಕ್ಕೆ ಹಣ ಹೊಂದಿಸಲು ಆಸ್ಪತ್ರೆ ಆವರಣದಲ್ಲೇ ಭಿಕ್ಷೆ ಬೇಡಿದ್ದಾರೆ.

9 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ ವಿಜಯ ಕೂಲಿ ಕೆಲಸ ಮಾಡಿ ತನ್ನ ಮೂವರು ಮಕ್ಕಳನ್ನು ಸಾಕುತ್ತಿದ್ದರು. ಮನೆಯ ಕಡುಬಡತನದ ಮುಕ್ತಿಗೆ ಇಬ್ಬರು ಗಂಡು ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದರು. ಮಗಳು ಕಲೀಸ್ವರಿಯನ್ನು ಒಟ್ಟನ್‌ಚತ್ತಿರಂನ ಮಕ್ಕಳ ಆರೈಕೆ ಕೇಂದ್ರಕ್ಕೆ ಸೇರಿದ್ದರು. ಕೆಲವು ತಿಂಗಳಿಂದ ವಿಜಯ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹಾಸಿಗೆ ಹಿಡಿದಿದ್ದ ವಿಜಯರಿಗೆ ನೆಂಟರಿಷ್ಟರು ಯಾರೂ ಸಹಾಯಕ್ಕೆ ಬರಲಿಲ್ಲ. ಹೇಗೋ ಇಬ್ಬರು ಮಕ್ಕಳು ಸೇರಿ ತಾಯಿಯನ್ನು ದಿಂಡುಗಲ್‌ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಜಯ ಮೃತಪಟ್ಟರು.

ದಿಕ್ಕು ತೋಚದಾದ ಮಕ್ಕಳು ತಾಯಿಯ ಅಂತ್ಯ ಕ್ರಿಯೆಗೆ ಹಣ ಹೊಂದಿಸಲು ಆಸ್ಪತ್ರೆಯಲ್ಲಿದ್ದವರಲ್ಲಿ ಸಹಾಯ ಬೇಡಿದರು. ಹಲವು ರೋಗಿಗಳು ಮತ್ತು ಮಂದಿ ಅಲ್ಪಸ್ವಲ್ಪ ಹಣ ಕೊಟ್ಟರು. ಈ ವಿಚಾರ ತಿಳಿದ ಆಸ್ಪತ್ರೆಯ ಸಹಾಯಕ ನಿರ್ದೇಶಕಿ ಮಾಲತಿ ಪ್ರಕಾಶ್‌ ಅಂತ್ಯಕ್ರಿಯೆ ಏರ್ಪಾಡುಗಳನ್ನು ಮಾಡಲು ಸಹಾಯ ಮಾಡಿ, ಮಕ್ಕಳಿಗೆ ಧೈರ್ಯ ತುಂಬಿದರು.

Comments are closed.