
ಚೆನ್ನೈ: ಇಲ್ಲಿನ ವಡಪಲನಿ ಮುರುಗನ್ ದೇವಸ್ಥಾನದ ಬಳಿ ಹೆತ್ತ ತಂದೆಯನ್ನೇ ಅನಾಥವಾಗಿ ಬಿಟ್ಟುಹೋದ ಮಂದವೇಲಿಯ ಧೂರ್ತ ಪುತ್ರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ವಡಪಳಣಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಚಂದ್ರು ಅವರು ದೇವಾಲಯದ ಬಳಿ ಅನಾಥವಾಗಿ ಕುಳಿತಿದ್ದ ಹಿರಿಯ ಜೀವ ಗೋಪಾಲ್ (68) ಅವರನ್ನು ವಿಚಾರಿಸಿದಾಗ ಪುತ್ರನ ಘನಂದಾರಿ ಕೆಲಸ ಬೆಳಕಿಗೆ ಬಂದಿದೆ. ‘ನನ್ನ ಪುತ್ರ ಸುಬ್ರಹ್ಮಣ್ಯನ್ ಷೇರು ವ್ಯಾಪಾರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ರಾತ್ರಿ ದೇವಸ್ಥಾನದ ಬಳಿ ಬಿಟ್ಟುಹೋಗಿದ್ದಾನೆ’ ಎಂದು ಹಿರಿಯ ಜೀವ ಅಳಲು ತೋಡಿಕೊಂಡಿದೆ.
ತಂದೆಯನ್ನು ಟಾಕ್ಸಿ ಹತ್ತಿಸಿದ ಮಗ ತಾನು ಬೈಕ್ ಮೇಲೆ ಹಿಂಬಾಲಿಸಿದ್ದಾನೆ. ದೇವಸ್ಥಾನದ ಬಳಿ ತಂದೆಯನ್ನು ಇಳಿಸಿ, ಆತನ ಕೈಯ್ಯಲ್ಲಿ ಊಟದ ಪೊಟ್ಟಣವನ್ನುನೀಡಿ ಬೇಗ ಬರುತ್ತೇನೆ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೆ ಆತ ಮರಳಿಲ್ಲ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪಡೆದಿರುವ ಪೊಲೀಸರು, ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ. ವೃದ್ಧನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವ ಪೊಲೀಸರು, ಸದ್ಯ ಅವರನ್ನು ಮಂಗಡಿಯ ಆಶ್ರಮಕ್ಕೆ ಸೇರಿಸಿದ್ದಾರೆ.
‘ ತಂದೆ ಹೊರೆಯೆಂದು ಆರೋಪಿ ಸುಬ್ರಹ್ಮಣ್ಯನ್ ಯೋಚಿಸಿದ್ದು ದುರಂತವೇ ಸರಿ. ಹಿರಿಯ ನಾಗರಿಕರ ಕಾಯಿದೆ 2007ರ ಅನ್ವಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಶೀಘ್ರದಲ್ಲಿಯೇ ಆತನನ್ನು ಬಂಧಿಸುತ್ತೇವೆ’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Comments are closed.