ರಾಷ್ಟ್ರೀಯ

ಜೈಲಿನಲ್ಲಿ ಕನ್ನಡ ಅಭ್ಯಾಸ ಮಾಡುತ್ತಿರುವ ತಮಿಳಿನ ಶಶಿಕಲಾ

Pinterest LinkedIn Tumblr


ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ಅವರು ಕನ್ನಡ ಅಭ್ಯಾಸ ಮಾಡುವ ಮೂಲಕ ಕನ್ನಡತಿಯಾಗಲು ಹೊರಟ್ಟಿದ್ದಾರೆ.

ಪರಪ್ಪಣ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಯಸ್ಕರ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ತರಗತಿಗಳಿಗೆ ಹಾಜರಾಗುತ್ತಿರುವ ಶಶಿಕಲಾ, ಕನ್ನಡ ವರ್ಣಮಾಲೆ ಸೇರಿದಂತೆ ಕನ್ನಡ ಓದಲು ಮತ್ತು ಉಚ್ಚರಿಸಲು ಕಲಿಯುತ್ತಿದ್ದಾರೆ. ಕಂಪ್ಯೂಟರ್ ವಿಜ್ಞಾನ ಕೂಡ ಅಭ್ಯಾಸ ಮಾಡುತ್ತಿದ್ದಾರೆ.

ಇದೇ ಪ್ರಕರಣದಲ್ಲಿ ಶಶಿಕಲಾ ಜೊತೆ ಜೈಲುಪಾಲಾಗಿರುವ ಅವರ ನಾದಿನಿ ಮತ್ತು ಇತರ ಅಪರಾಧಿಗಳು ಕೂಡ ಕನ್ನಡ ತರಗತಿಗೆ ಹಾಜರಾಗುತ್ತಿದ್ದಾರೆ. ಸದ್ಯ, ಶಶಿಕಲಾ ಮೌನ ವೃತದಲ್ಲಿರುವ ಕಾರಣ ತರಗತಿಯಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಆದರೆ, ಕನ್ನಡವನ್ನು ಚೆನ್ನಾಗಿ ಬರೆಯುವತ್ತ ಗಮನ ಹರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಐಎಡಿಎಂಕೆ ನಾಯಕಿ ಪುಸ್ತಕ ಓದುವ ಆಸಕ್ತಿ ಹೊಂದಿದ್ದಾರೆ. ಜೈಲು ಗ್ರಂಥಾಲಯವು ಪುರುಷ ಕೈದಿಗಳ ವಿಭಾಗಲ್ಲಿದೆ. ಆದರೆ, ಈಗ ಶಶಿಕಲಾ ಅವರ ಆಸಕ್ತಿಯಿಂದ ಮಹಿಳಾ ಕೈದಿಗಳ ವಿಭಾಗದಲ್ಲಿಯೂ ಗ್ರಂಥಾಲಯ ತೆರೆಯುವಂತಾಗಿದೆ. ಮಹಿಳಾ ಗ್ರಂಥಾಲಯಕ್ಕೆ 91 ವೃತ್ತ ಪತ್ರಿಕೆಗಳು ಹಾಗೂ ಮಾಸಿಕ/ಸಾಪ್ತಾಹಿಕ ನಿಯತಕಾಲಿಕೆಗಳನ್ನು ಖರೀದಿಸಲು ಗ್ರಂಥಾಲಯ ಇಲಾಖೆ 30 ಸಾವಿರ ರೂಪಾಯಿ ವ್ಯಯಿಸಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.