
ಚಿತ್ರ ಕೃಪೆ: ನವಭಾರತ್‌ ಟೈಮ್ಸ್‌
ಅಲಹಾಬಾದ್: ಉತ್ತರಪ್ರದೇಶದ ಫತೇಪುರ್ ಪಟ್ಟಣದಲ್ಲಿ ಗಿಳಿಯೊಂದು ನಾಪತ್ತೆಯಾದ ಘಟನೆ ಭಾರೀ ಸುದ್ದಿಗೆ ಗ್ರಾಸವಾಗಿದೆ. ಗಿಳಿಯ ಮಾಲೀಕ ತನ್ನ ಗಿಳಿಯನ್ನು ಹುಡುಕಿಕೊಟ್ಟವರಿಗೆ 10,000 ರೂ ನಗದು ಬಹುಮಾನ ಘೋಷಿಸಿದ್ದಾನೆ.
ಗಿಳಿ ನಾಪತ್ತೆಯಾಗಿ 26 ದಿನಗಳ ಬಳಿಕ ಮತ್ತೆ ಮಾಲೀಕನ ಕೈಸೇರಿದೆ. ಈ ಕುಟುಂಬದ ಸದಸ್ಯನಂತಿದ್ದ ಗಿಳಿ ನಾಪತ್ತೆಯಾದ ಬಳಿಕ ಮನೆಯ ಮಕ್ಕಳು ಊಟವನ್ನೇ ಬಿಟ್ಟಿದ್ದರು.
ಸ್ಥಳೀಯ ಮುನಿಸಿಪಲ್ ಕಾರ್ಪೊರೇಶನ್ನ ಅಧಿಕಾರಿ ದಿನೇಶ್ ಬಾಬು ಜೋಡಿ ಗಿಣಿಗಳನ್ನು ದಿಲ್ಲಿಯಿಂದ 50,000 ರೂ ಬೆಲೆಗೆ ಖರೀದಿಸಿ ತಂದು ಮನೆಯಲ್ಲಿ ಮುದ್ದಿನಿಂದ ಸಾಕಿಕೊಂಡಿದ್ದರು. ಗಿಳಿಗಳ ಆಹಾರಕ್ಕೆಂದೇ ತಿಂಗಳಿಗೆ 1,000 ರೂ ಖರ್ಚು ಮಾಡುತ್ತಿದ್ದರು. ಇವುಗಳು ಕಾಂಗೋದಲ್ಲಿ ಮಾತ್ರ ಕಾಣಿಸುವ ಪಕ್ಷಿಗಳಾಗಿದ್ದು, ಆಮದು ಮಾಡಿರುವ ಹಕ್ಕಿಗಳಾದ್ದರಿಂದ ಸ್ಥಳೀಯ ಧಾನ್ಯ ಮತ್ತು ಹಣ್ಣುಗಳನ್ನು ತಿನ್ನುತ್ತಿರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ನಾಲ್ವರು ಸದಸ್ಯರಿರುವ ದಿನೇಶ್ ಕುಟುಂಬ ಗಿಳಿಗಳನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದರು.
ಗಿಳಿಯೊಂದು ನಾಪತ್ತೆಯಾದ ಬಳಿಕ ಈ ಕುಟುಂಬ, ಅದನ್ನು ಹುಡುಕಿ ಕೊಟ್ಟವರಿಗೆ 5,000 ರೂ ಬಹುಮಾನ ನೀಡುವುದಾಗಿ ಮೊದಲು ಘೋಷಿಸಿತ್ತು. ನಂತರ 10,000 ರೂ ಬಹುಮಾನ ನೀಡುವುದಾಗಿ ಕರಪತ್ರಗಳನ್ನು ಹಂಚಿದ್ದರು.
ಕಾಣೆಯಾದ ಗಿಳಿಗೆ ಲಿಲ್ಲಿ ಎಂದು ಹೆಸರಿಡಲಾಗಿತ್ತು. 26 ದಿನಗಳ ಬಳಿಕ ಗಿಳಿ ತಾನಾಗಿಯೇ ಹಾರಿಬಂದು ಪಕ್ಕದ ಮನೆಯ ಬಾಲ್ಕನಿ ಮೇಲೆ ಕುಳಿತಿತ್ತು.
Comments are closed.